ನವದೆಹಲಿ: ಏಪ್ರಿಲ್ 22 ರ ಪಹಲ್ಗಾಮ್ ನಡೆದ ಉಗ್ರರ ದಾಳಿಯ ನಂತರ ವೈರಿ ರಾಷ್ಟ್ರ ಪಾಕಿಸ್ತಾನದ ಹೆಡೆಮುರಿ ಕಟ್ಟಲು ಉಗ್ರರ ಮಗ್ಗಲು ಮುರಿಯಲು ಕಾದು ಕುಳಿತಿದ್ದ ಭಾರತೀಯ ಸೇನೆ ಕೊನೆಗೂ ತನ್ನ ರಣಬೇಟೆ ಆರಂಭಿಸಿದೆ.
ಬುಧವಾರ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಭಯೋತ್ಪಾದಕ ಸಂಘಟನೆಯ ಪ್ರಭಾವ ಹೆಚ್ಚಿರುವ ಬಹಲ್ವಾಪುರದಲ್ಲಿ ಒಂಬತ್ತು ಶಿಬಿರಗಳನ್ನು ಗುರಿಯಾಗಿಸಿ ಭಾರತೀಯ ಸೇನೆ ಕ್ಷಿಪಣಿ ದಾಳಿ ನಡೆಸಿದೆ.
ಆಪರೇಷನ್ ಸಿಂಧೂರ ಹೆಸರಿನಲ್ಲಿ ಈ ರಣಬೇಟೆ ನಡೆದಿರುವ ಬಗ್ಗೆ ಭಾರತೀಯ ಸೇನೆ ನಸುಕಿನಜಾವ 1:44ಕ್ಕೆ ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ಭಾರತ ‘ಆಪರೇಷನ್ ಸಿಂಧೂರ್’ ಆರಂಭಿಸಿತು; ಪಿಒಜೆಕೆಯಲ್ಲಿ 9 ಭಯೋತ್ಪಾದಕ ಶಿಬಿರಗಳ ಮೇಲೆ ನಿಖರ ದಾಳಿ ನಡೆದಿದೆ” ಎಂದು ಭಾರತೀಯ ಸೇನೆ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.
ಭಾರತೀಯ ಸಶಸ್ತ್ರ ಪಡೆಗಳು ಭಯೋತ್ಪಾದಕ ಶಿಬಿರಗಳ ಮೇಲೆ ನಿಖರವಾದ ದಾಳಿ ನಡೆಸಿವೆ ಎಂದು ಕೇಂದ್ರ ಸರ್ಕಾರ ಬುಧವಾರ ತಿಳಿಸಿದೆ. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಪಾಕಿಸ್ತಾನದಲ್ಲಿ ಉಗ್ರರ 9 ಶಿಬಿರಗಳನ್ನು ಗುರಿಯಾಗಿಸಿಕೊಂಡು ನಿಖರ ದಾಳಿ ನಡೆದಿದೆ, ನಮ್ಮ ಸೇನೆ ಉಗ್ರರ ಮೂಲಸೌಲಭ್ಯಗಳನ್ನು ನೆಲಸಮ ಮಾಡುವಲ್ಲಿ ಯಶಸ್ವಿಯಾಗಿದೆ. ಆದ್ರೆ ಯಾವುದೇ ನಾಗರಿಕ ಸ್ಥಳಗಳು, ಆರ್ಥಿಕ ಕಟ್ಟಡಗಳು ಮತ್ತು ಸೇನಾ ನೆಲೆಗಳ ಮೇಲೆ ದಾಳಿ ಮಾಡಿಲ್ಲವೆಂದು ಸ್ಪಷ್ಟಪಡಿಸಿದೆ.