Home ಟಾಪ್ ಸುದ್ದಿಗಳು ರಾತ್ರಿ 10ರಿಂದ ಬೆಳಗೆ 6ರ ತನಕ ಯಾವುದೇ ಧ್ವನಿವರ್ಧಕಗಳ ಬಳಕೆಗೆ ಅವಕಾಶವಿಲ್ಲ: ಆರಗ ಜ್ಞಾನೇಂದ್ರ

ರಾತ್ರಿ 10ರಿಂದ ಬೆಳಗೆ 6ರ ತನಕ ಯಾವುದೇ ಧ್ವನಿವರ್ಧಕಗಳ ಬಳಕೆಗೆ ಅವಕಾಶವಿಲ್ಲ: ಆರಗ ಜ್ಞಾನೇಂದ್ರ

ಬೆಂಗಳೂರು: ಶಬ್ದ ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟಿನ ಆದೇಶದಂತೆ ರಾಜ್ಯದಲ್ಲಿ ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಲಾಗಿದೆ ಎಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಅಲ್ಲದೇ ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 6 ಗಂಟೆಯವರೆಗೆ ಯಾವುದೇ ಧ್ವನಿವರ್ಧಕಗಳ ಉಪಯೋಗಕ್ಕೆ ಅವಕಾಶವಿಲ್ಲ ಎಂದು ಹೇಳಿದ್ದಾರೆ.

ಬೇರೆ ಸಮಯದಲ್ಲಿ ಧ್ವನಿವರ್ಧಕಗಳಿಂದ ಉತ್ಪತ್ತಿಯಾಗುವ ಶಬ್ದದ ಪ್ರಮಾಣ ಯಾವ ಸಾಂದ್ರತೆಯಲ್ಲಿರಬೇಕು, ಎಂಬುವುದರ ಬಗ್ಗೆ ಮಾರ್ಗಸೂಚಿಯಲ್ಲಿ ಹೇಳಲಾಗಿದ್ದು, ಆ ಮೂಲಕವೇ ಉಪಯೋಗವಾಗಬೇಕು ಎಂದಿದ್ದಾರೆ. ಯಾವ ದರ್ಜೆಯ ಅಧಿಕಾರಿಗಳು, ಧ್ವನಿವರ್ಧಕಗಳಿಗೆ ಅನುಮತಿ ನೀಡಬಹುದು ಹಾಗೂ ಕಾನೂನು ಬಾಹಿರವಾಗಿ ಇರುವ ದ್ವನಿವರ್ಧಕಗಳನ್ನು ತೆಗೆದು ಹಾಕಬಹುದು ಎನ್ನುವ ಬಗ್ಗೆಯೂ, ಮಾರ್ಗಸೂಚಿಗಳು ಸ್ಪಷ್ಟವಾಗಿ ಉಲ್ಲೇಖಿಸುತ್ತವೆ ಎಂದು ಹೇಳಿದ್ದಾರೆ.

ಕೈಗಾರಿಕಾ ವಲಯ, ವಸತಿ ಪ್ರದೇಶಗಳು, ವಾಣಿಜ್ಯ ವಲಯ ಹಾಗೂ ನಿಶಬ್ದ ವಲಯಗಳಲ್ಲಿಯೂ ಶಬ್ದದ ಪ್ರಮಾಣದ ಕುರಿತು ಉಲೇಖಿಸಲಾಗಿದ್ದು, ಖಾಸಗಿ ಪ್ರದೇಶದಲ್ಲಿ ಶಬ್ದ ಸಾಂದ್ರತೆಯನ್ನು ನಿಗದಿ ಪಡಿಸಲಾಗಿದೆ ಎಂದು ತಿಳಿಸಿದ್ದಾರೆ. ಅನುಮತಿ ಇಲ್ಲದೆ ಧ್ವನಿವರ್ಧಕಗಳನ್ನು ಉಪಯೋಗಿಸುತ್ತಿರುವವರು 15 ದಿನಗಳ ಒಳಗಡೆ, ಸಂಬಂಧ ಪಟ್ಟ ಸಕ್ಷಮ ಅಧಿಕಾರಿಗಳಿಂದ ಅನುಮತಿ ಪಡೆದುಕೊಳ್ಳುವಂತೆ ಸೂಚಿಸಿದ್ದಾರೆ.

ಮಾರ್ಗಸೂಚಿಯನ್ನು ಕಡೆಗಣಿಸದ್ದಲ್ಲಿ ಸಂಬಂಧ ಪಟ್ಟ ಅಧಿಕಾರಿಗಳು ಧ್ವನಿವರ್ಧಕಗಳನ್ನು ತೆಗೆಯುತ್ತಾರೆ,ಇದರಿಂದ ಯಾರಿಗೂ ವಿನಾಯಿತಿ ನೀಡಿಲ್ಲ ಎಂದಿದ್ದಾರೆ. ಚರ್ಚುಗಳು, ಮಸೀದಿಗಳು ಹಾಗೂ ದೇವಸ್ಥಾನಗಳನ್ನು ಒಳಗೊಂಡಂತೆ ಯಾವುದೇ ತಾರತಮ್ಯ ಇಲ್ಲದಂತೆ ಕಾನೂನನ್ನು ಜಾರಿಗೊಳಿಸಲಾಗುವುದು ಎಂದು ಅರಗ ಸ್ಪಷ್ಟನೆ ನೀಡಿದ್ದಾರೆ.

ಶಬ್ದ ಮಾಲಿನ್ಯ ಉಂಟುಮಾಡುವ ಹಾಗೂ ಅನುಮತಿ ಇಲ್ಲದ ಧ್ವನಿವರ್ಧಕಗಳನ್ನು ತೆಗೆದು ಹಾಕುವ ಪ್ರಕ್ರಿಯೆ ಇಡೀ ರಾಜ್ಯದಲ್ಲಿ ನಡೆಯಲಿದೆ ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.

Join Whatsapp
Exit mobile version