Home ಟಾಪ್ ಸುದ್ದಿಗಳು ಧಾರ್ಮಿಕ ಕೇಂದ್ರಗಳ ಅನುದಾನ ಬಿಡುಗಡೆಯಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ: ಶಶಿಕಲಾ ಜೊಲ್ಲೆ

ಧಾರ್ಮಿಕ ಕೇಂದ್ರಗಳ ಅನುದಾನ ಬಿಡುಗಡೆಯಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ: ಶಶಿಕಲಾ ಜೊಲ್ಲೆ

ಬೆಂಗಳೂರು: ರಾಜ್ಯದ ದೇವಸ್ಥಾನಗಳ ಅಭಿವೃದ್ಧಿಗೆ ಕಳೆದ 10 ವರ್ಷಗಳಲ್ಲೇ ಅತಿಹೆಚ್ಚು ಅನುದಾನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರ ಬಿಡುಗಡೆಗೊಳಿಸಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ದೇವಾಲಯಗಳ ಸಮಗ್ರ ಅಭಿವೃದ್ಧಿಯ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಜರಾಯಿ ಇಲಾಖೆಗೆ ಬಲ ತುಂಬಿದ್ದಾರೆ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರಾದ ಶಶಿಕಲಾ ಜೊಲ್ಲೆ ಸಂತಸ ವ್ಯಕ್ತಪಡಿಸಿದ್ದಾರೆ.

ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು 2022 – 23 ರ ಆಯವ್ಯಯದಲ್ಲಿ ರಾಜ್ಯದಲ್ಲಿನ ವಿವಿಧ ದೇವಸ್ಥಾನಗಳು, ಮಠಗಳು ಹಾಗೂ ರಾಜ್ಯದ ಹೊರಭಾಗದಲ್ಲಿರುವ ಕರ್ನಾಟಕ ಛತ್ರಗಳ ಅಭಿವೃದ್ಧಿಗಾಗಿ ಒಟ್ಟು 421 ಕೋಟಿ ರೂಪಾಯಿಗಳ ಅನುದಾನ ಒದಗಿಸಲಾಗಿದೆ. ಇದರ ಜೊತೆಗೆ ಮುಖ್ಯಮಂತ್ರಿಯವರು ವಿಧಾನಸಭಾ ಕ್ಷೇತ್ರವಾರು ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ ಇದುವರೆವಿಗೂ (ಜುಲೈ 10, 2022 ರವರೆಗೆ) ಒಟ್ಟು 272 ಕೋಟಿ ರೂಪಾಯಿಗಳ ವಿಶೇಷ ಅನುದಾನ ಒದಗಿಸಿದ್ದು, ಅದರಲ್ಲಿ ಶೇ. 50 ರಷ್ಟನ್ನು (136 ಕೋಟಿ ರೂ) ಈಗಾಗಲೇ ಬಿಡುಗಡೆ ಮಾಡಿದ್ದಾರೆ. ಇದರಿಂದಾಗಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಇದುವರೆಗೂ ಒಟ್ಟು ರೂ. 693 ಕೋಟಿ ಗಳಷ್ಟು (ಬಜೆಟ್ ಅನುದಾನ 421 ಕೋಟಿ + ವಿಶೇಷ ಅನುದಾನ ರೂ. 272 ಕೋಟಿ) ಬೃಹತ್ ಗಾತ್ರದ ಅನುದಾನ ಒದಗಿಸಲಾಗಿದೆ ಎಂದರು.

ಕಳೆದ ಒಂದು ವರ್ಷದಲ್ಲಿ ಮುಜರಾಯಿ ಇಲಾಖೆಯ ವತಿಯಿಂದ ಹಲವಾರು ನೂತನ ಯೋಜನೆಗಳನ್ನು ಘೋಷಣೆ ಮಾಡಿ ಅನುಷ್ಠಾನಗೊಳಿಸಲಾಗುತ್ತಿದೆ. ದೈವ ಸಂಕಲ್ಪ (ರೂ. 1140 ಕೋಟಿ ವೆಚ್ಚದಲ್ಲಿ 25 ಏ ದರ್ಜೆ ದೇವಾಲಯಗಳ ಸಮಗ್ರ ಅಭಿವೃದ್ದಿ), ಇಂಟಿಗ್ರೇಟೆಡ್ ಟೆಂಪಲ್ ಮ್ಯಾನೇಜ್ ಮೆಂಟ್ ಸಿಸ್ಟಮ್ ಅಳವಡಿಕೆ, ಕಾಯಕಲ್ಪ (ಮುಜರಾಯಿ ಇಲಾಖೆಯ ಸಿ ದರ್ಜೆಯ ದೇವಸ್ಥಾನಗಳ ಅಭಿವೃದ್ದಿಗೆ ವಿಶೇಷ ಅನುದಾನ), ಕಾಶಿ ಯಾತ್ರೆಗೆ ಸಹಾಯಧನ, ಕಾಶಿಗೆ ಭಾರತ್ ಗೌರವ್ ಯೋಜನೆಯ ಮೂಲಕ ರೈಲು, ಇಲಾಖೆಯ ನೌಕರರು ಹಾಗೂ ಅರ್ಚಕರುಗಳಿಗೆ ವಿಮಾ ಸೌಲಭ್ಯ, ತಸ್ತಿಕ್ ಹಣ ಹೆಚ್ಚಳದಂತಹ ಯೋಜನೆಗಳಿಗೆ ಮುಖ್ಯಮಂತ್ರಿಗಳು ಅಗತ್ಯ ಸಹಕಾರ ನೀಡಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಸರಕಾರ ತನ್ನ 5 ವರ್ಷಗಳ ಅಧಿಕಾರದ ಅವಧಿಯಲ್ಲಿ ಮುಜರಾಯಿ ಇಲಾಖೆಗೆ ಹೆಚ್ಚಿನ ಅನುದಾನ ನೀಡಿರಲಿಲ್ಲ. 5 ವರ್ಷಗಳಲ್ಲಿ ಕೇವಲ 1,289 ಕೋಟಿ ರೂಪಾಯಿಗಳಷ್ಟು ಅನುದಾನ ನೀಡಿದ್ದರೆ, ಬಿಜೆಪಿ ಸರಕಾರ ಕಳೆದ ಮೂರು ವರ್ಷಗಳಲ್ಲಿ 1,781 ಕೋಟಿ ರೂಪಾಯಿಗಳಷ್ಟು ಅನುದಾನ ನೀಡುವ ಮೂಲಕ ಮುಜರಾಯಿ ಇಲಾಖೆಗೆ ಹೆಚ್ಚಿನ ಮಹತ್ವ ನೀಡಿದೆ. ಕಾಂಗ್ರೆಸ್ ಮತ್ತು ಸಮ್ಮಿಶ್ರ ಸರಕಾರದ ಆಡಳಿತದಲ್ಲಿ ದೇವಸ್ಥಾನಗಳ ಅಭಿವೃದ್ಧಿಯ ನಿಟ್ಟಿನಲ್ಲಿ ನೂತನ ಯೋಜನೆಗಳ ಘೋಷಣೆಯೇ ಆಗಿರಲಿಲ್ಲ ಎನ್ನುವುದನ್ನು ಮುಖ್ಯವಾಗಿ ಗಮನಿಸಬೇಕಾದ ಸಂಗತಿಯಾಗಿದೆ ಎಂದರು.

ಎಲ್ಲಾ ಪಕ್ಷದವರಿಗೂ ಅನುದಾನ: ಧಾರ್ಮಿಕ ಕೇಂದ್ರಗಳ ಅನುದಾನ ಬಿಡುಗಡೆಯಲ್ಲಿ ಯಾವುದೇ ತಾರತಮ್ಯ ಮಾಡಲಾಗಿಲ್ಲ ಎನ್ನುವುದು ಮತ್ತೊಂದು ವಿಶೇಷ. ದೇವಸ್ಥಾನಗಳ ಅಭಿವೃದ್ದಿಯ ನಿಟ್ಟಿನಲ್ಲಿ ವಿರೋಧ ಪಕ್ಷದ ಪ್ರಮುಖ ನಾಯಕರು ಹಾಗೂ ಶಾಸಕರುಗಳಿಗೂ ಅನುದಾನ ಹಂಚಿಕೆಯಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನವನ್ನು ಬಿಡುಗಡೆಗೊಳಿಸುವ ಭರವಸೆಯನ್ನು ಸಚಿವರು ವ್ಯಕ್ತಪಡಿಸಿದ್ದಾರೆ. ಆಯಾ ಕ್ಷೇತ್ರಗಳ ದೇವಸ್ಥಾನಗಳ ಅಭಿವೃದ್ಧಿಗಾಗಿ ಬೇಡಿಕೆ ಸಲ್ಲಿಸಿದ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಶಾಸಕರು ಹಾಗೂ ಹಿರಿಯ ನಾಯಕರಿಗೂ ಅನುದಾನ ಹಂಚಿಕೆ ಮಾಡಲಾಗಿದೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ಕ್ಷೇತ್ರಕ್ಕೆ 10 ಕೋಟಿ ರೂಪಾಯಿಗಳು, ಡಾ. ಯತೀಂದ್ರ ಎಸ್ ಅವರ ಕ್ಷೇತ್ರಕ್ಕೆ 1.50 ಕೋಟಿ ರೂಪಾಯಿಗಳು, ಶ್ರೀಮತಿ ಅನಿತಾ ಕುಮಾರಸ್ವಾಮಿ, ಆರ್ ವಿ ದೇಶಪಾಂಡೆ ಮತ್ತು ಈಶ್ವರ ಖಂಡ್ರೆ ಅವರ ಕ್ಷೇತ್ರಗಳಿಗೆ ತಲಾ 3 ಮೂರು ಕೋಟಿಗಳ ಅನುದಾನ ಹಂಚಿಕೆಯಾಗಲಿದೆ ಎಂದರು.

Join Whatsapp
Exit mobile version