ಭಾರತದತ್ತ ಪಾಕಿಸ್ತಾನ ಹಾರಿಸಿದ 300–400 ಡ್ರೋನ್ಗಳನ್ನು ಹೊಡೆದುರುಳಿಸಿದ ಸೇನೆ
ನವದೆಹಲಿ: ಭಾರತದ ಏರ್ ಬೇಸ್, ಎಸ್- 400 ಕ್ಷಿಪಣಿ ರಕ್ಷಣಾ ವ್ಯವಸ್ಥೆ ಸುರಕ್ಷಿತವಾಗಿದ್ದು, ಯಾವುದೇ ಹಾನಿಯಾಗಿಲ್ಲ. ಪಾಕ್ ತನ್ನ ಗಡಿಯಲ್ಲಿ ಸೇನೆಯನ್ನು ನಿಯೋಜಿಸುತ್ತಿದೆ ಎಂದು ಎಂದು ಭಾರತ ಸರ್ಕಾರ ತಿಳಿಸಿದೆ.
ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್, ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಶುಕ್ರವಾರ ಸಂಜೆಯಿಂದ ಇಂದು ಬೆಳಗ್ಗಿನವರೆಗೆ ನಡೆದ ಘಟನೆಯನ್ನು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪಾಕಿಸ್ತಾನದ ಸೇನೆಯು ತನ್ನ ಪಡೆಗಳನ್ನು ಗಡಿ ಭಾಗಕ್ಕೆ ರವಾನಿಸಲು ಮುಂದಾಗಿದೆ. ಪಾಕಿಸ್ತಾನವು ಉಧಂಪುರ, ಪಠಾಣ್ಕೋಟ್ ಮತ್ತು ಬಟಿಂಡಾದಲ್ಲಿನ ಭಾರತೀಯ ವಾಯುನೆಲೆಗಳು ಮತ್ತು ಇತರ 23 ಭಾರತೀಯ ನಗರಗಳ ಮೇಲೆ ದಾಳಿ ಮಾಡಿತ್ತು. ಕ್ಷಿಪಣಿ ಡ್ರೋನ್ ದಾಳಿಗಳನ್ನು ನಾವು ತಟಸ್ಥಗೊಳಿಸಿದ್ದೇವೆ.
ಪಾಕ್ ಸೇನೆ ಭಾರತದ ನಾಗರಿಕರನ್ನು, ಧಾರ್ಮಿಕ ಸ್ಥಳಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿವೆ. ಪ್ರಯಾಣಿಕ ವಿಮಾನವನ್ನು ಗುರಾಣಿಯನ್ನಾಗಿ ಬಳಸಿಕೊಂಡು ಭಾರತದ ಮೇಲೆ ದಾಳಿ ನಡೆಸುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ನಮ್ಮ ವಿರುದ್ಧ ಪಾಕ್ ಸುಳ್ಳು ಸುದ್ದಿ ಹಬ್ಬಿಸುತ್ತಿದೆ. ಭಾರತ ಅಫ್ಘಾನಿಸ್ತಾನದ ಮೇಲೆ ದಾಳಿ ನಡೆಸಿದೆ ಎಂದು ಪಾಕ್ ಹೇಳಿದೆ. ಆದರೆ ಕಳೆದ ಒಂದೂವರೆ ವರ್ಷದಿಂದ ನಮ್ಮ ಮೇಲೆ ಯಾರು ದಾಳಿ ನಡೆಸುತ್ತಿದ್ದಾರೆ ಎನ್ನುವುದು ಅಫ್ಘಾನಿಸ್ತಾನಕ್ಕೆ ಜನರಿಗೆ ಗೊತ್ತಿದೆ ಎಂದರು.
‘ಪಾಕಿಸ್ತಾನ ಸೇನೆಯು ಲೇಹ್ನಿಂದ ಸರ್ ಕ್ರೀಕ್ವರೆಗಿನ ಪಶ್ಚಿಮ ಗಡಿಯುದ್ದಕ್ಕೂ ಭಾರತೀಯ ಪಡೆಗಳ ಮೇಲೆ ಬುಧವಾರ ಹಾಗೂ ಗುರುವಾರ ರಾತ್ರಿ ಹಲವು ಬಾರಿ ದಾಳಿ ನಡೆಸಿದೆ. 36 ಪ್ರದೇಶಗಳ ಮೇಲೆ ದಾಳಿ ಮಾಡಲು ಸುಮಾರು 300-400 ಡ್ರೋನ್ಗಳನ್ನು ಸಹ ಬಳಸಿದೆ. ಅವುಗಳನ್ನು ಭಾರತೀಯ ಪಡೆಗಳು ಹೊಡೆದು ಉರುಳಿಸಿವೆ. ಡ್ರೋನ್ಗಳ ಮೂಲದ ಬಗ್ಗೆ ತನಿಖೆ ಮಾಡಲಾಗುತ್ತಿದೆ. ಇವು ಟರ್ಕಿಯ ಡ್ರೋನ್ಗಳು ಎಂಬುದು ಆರಂಭಿಕ ತನಿಖೆಯಿಂದ ಗೊತ್ತಾಗಿದೆ’ ಎಂದು ಕರ್ನಲ್ ಸೋಫಿಯಾ ಖುರೇಷಿ ಶುಕ್ರವಾರ ಮಾಹಿತಿ ನೀಡಿದ್ದರು. ಆದಾಗ್ಯೂ, ಪಾಕ್ ದಾಳಿ ಮುಂದುವರಿಸಿದೆ. ಇದರಿಂದ, ಗಡಿ ಭಾಗದ ಗ್ರಾಮಗಳಲ್ಲಿ ಭಾರಿ ಹಾನಿಯಾಗಿದೆ.
ಭಾರತವು ಪ್ರತಿದಾಳಿ ನಡೆಸುತ್ತಿದ್ದರೂ, ‘ವೈಮಾನಿಕ ಗುರಾಣಿ’ಗಳನ್ನಾಗಿ ಬಳಸುವ ಸಲುವಾಗಿ ನಾಗರಿಕ ವಿಮಾನಗಳಿಗೆ ಅಂತರರಾಷ್ಟ್ರೀಯ ಗಡಿ ಸಮೀಪ ಹಾರಾಟ ನಡೆಸಲು ಅನುಮತಿಸುವ ಮೂಲಕ ಪಾಕಿಸ್ತಾನ ಬೇಜವಾಬ್ದಾರಿ ವರ್ತನೆ ಪ್ರದರ್ಶಿಸಿದೆ ಎಂದು ಖುರೇಷಿ ಟೀಕಿಸಿದ್ದಾರೆ.
ಪಾಕಿಸ್ತಾನ ಪಡೆಗಳು, ಭಾರತದ ಸೇನಾ ಸೌಕರ್ಯಗಳನ್ನು ಗುರಿಯಾಗಿಸುವ ಉದ್ದೇಶದಿಂದ ಪಶ್ಚಿಮ ಗಡಿಯಲ್ಲಿ ಹಲವು ಬಾರಿ ಭಾರತದ ವಾಯು ಗಡಿ ಉಲ್ಲಂಘಿಸಿವೆ. ಈ ಪ್ರಯತ್ನಗಳನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿರುವ ಭಾರತೀಯ ಸೇನೆ, ಡ್ರೋನ್ಗಳನ್ನು ಹೊಡೆದುರುಳಿಸಿದೆ.