Home ಟಾಪ್ ಸುದ್ದಿಗಳು ಹರಿದ್ವಾರದಲ್ಲಿ ಮುಸ್ಲಿಮ್ ವಿರೋಧಿ ದ್ವೇಷ ಭಾಷಣ: ಸಾಮೂಹಿಕ ಬಲಿದಾನಕ್ಕೆ ಇತ್ತಿಹಾದೆ ಮಿಲ್ಲತ್ ಕರೆ

ಹರಿದ್ವಾರದಲ್ಲಿ ಮುಸ್ಲಿಮ್ ವಿರೋಧಿ ದ್ವೇಷ ಭಾಷಣ: ಸಾಮೂಹಿಕ ಬಲಿದಾನಕ್ಕೆ ಇತ್ತಿಹಾದೆ ಮಿಲ್ಲತ್ ಕರೆ

ಬರೇಲಿ: ಇತ್ತೀಚೆಗೆ ಹರಿದ್ವಾರದಲ್ಲಿ ನಡೆದ ಧರ್ಮ ಸಂಸದ್ ಕಾರ್ಯಕ್ರಮದಲ್ಲಿ ಮುಸ್ಲಿಮ್ ವಿರೋಧಿ ದ್ವೇಷ ಭಾಷಣ ಮತ್ತು ನರಮೇಧಕ್ಕೆ ಕರೆ ನೀಡಿದ ನಡೆಯನ್ನು ವಿರೋಧಿಸಿ ಪ್ರತಿಭಟನೆಗೆ ಕರೆ ನೀಡಿರುವ ಇತ್ತಿಹಾದೆ-ಎ-ಮಿಲ್ಲತ್ ಕೌನ್ಸಿಲ್ ಸಂಸ್ಥಾಪಕ ತೌಕೀರ್ ರಝಾ ಖಾನ್, ದೇಶದಲ್ಲಿ ಶಾಂತಿ, ಸಾಮರಸ್ಯ ಮೂಡಿಸಲು ಮುಸ್ಲಿಮರು ಸಾಮೂಹಿಕ ಬಲಿದಾನಕ್ಕೆ ಸಿದ್ಧರಾಗುವಂತೆ ಮನವಿ ಮಾಡಿದ್ದಾರೆ.

ಶುಕ್ರವಾರ ನಡೆಸಲುದ್ದೇಶಿಸಿರುವ ಪ್ರತಿಭಟನೆಗೆ ಆಲ್ ಇಂಡಿಯಾ ತಂಝೀಮುಲ್ ಇಸ್ಲಾಮ್ ನಿಂದ ಬೆಂಬಲ ಸಿಕ್ಕಿದ್ದು, ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಈ ಪ್ರತಿಭಟನಾ ಸಭೆಗೆ ಸೇರುವಂತೆ ಮನವಿ ಮಾಡಿದ್ದಾರೆ.

ಹರಿದ್ವಾರದಲ್ಲಿ ಇತ್ತೀಚೆಗೆ ಮಾಡಿದ ದ್ವೇಷ ಭಾಷಣಗಳ ವಿರುದ್ಧ ಪ್ರತಿಭಟಿಸಿ ಸಾಮೂಹಿಕ ಬಲಿದಾನಕ್ಕಾಗಿ ಶುಕ್ರವಾರ ಬರೇಲಿಯಾ ಇಸ್ಲಾಮಿಯ ಶಾಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರುವಂತೆ ಅವರು ಮನವಿ ಮಾಡಿದರು.

ಸಂಘಪರಿವಾರದ ಮುಖಂಡರು 20 ಲಕ್ಷ ಮುಸ್ಲಿಮರ ಹತ್ಯೆಯ ಬೆದರಿಕೆ ಹಾಕಿದ್ದಾರೆ. ನಾವು ಎಲ್ಲ ವಿಧದ ತ್ಯಾಗಕ್ಕೂ ಸಿದ್ಧರಿದ್ದೇವೆ. ನಮ್ಮನ್ನು ಹತ್ಯೆ ಮಾಡುವುದಾಗಿ ಹೇಳಿದ ಜನರನ್ನು ಶುಕ್ರವಾರ ಸರ್ಕಾರ ಇಲ್ಲಿಗೆ ಕಳುಹಿಸಲಿ, ದೇಶದಲ್ಲಿ ಶಾಂತಿ, ಸೌಹಾರ್ದತೆ ನಿರ್ಮಾಣಕ್ಕೆ ಮುಸ್ಲಿಮರು ತಮ್ಮ ಪ್ರಾಣವನ್ನು ತ್ಯಾಗ ಮಾಡಲು ಸಿದ್ಧರಿದ್ದಾರೆ ಎಂದು ಅವರು ತಿಳಿಸಿದರು.

Join Whatsapp
Exit mobile version