ಕೊಲೆ ರಾಜಕೀಯ, ಪರಿಹಾರದ ಅಸಮಾನತೆ ಸಮಾಜವನ್ನು ಮತ್ತಷ್ಟು ವಿಭಜಿಸುತ್ತಿದೆ: ಡಾ.ಸುಮತಿ.ಎಸ್.ಹೆಗ್ಡೆ

Prasthutha|

 ಮಂಗಳೂರು: ಸುರತ್ಕಲ್’ನಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾದ ಜಲೀಲ್ ಅವರ ನಿವಾಸಕ್ಕೆ ಜೆಡಿಎಸ್ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಅಧ್ಯಕ್ಷೆ ಡಾ.ಸುಮತಿ.ಎಸ್ಹೆಗ್ಡೆ ಭಾನುವಾರ ಭೇಟಿ ನೀಡಿ ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿ, ಹತ್ಯೆಯನ್ನು ಖಂಡಿಸಿದ್ದಾರೆ.

- Advertisement -

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದ.ಕ.ಜಿಲ್ಲೆಯಲ್ಲಿ ನಡೆಯುತ್ತಿರುವ ರಾಜಕೀಯ ಪ್ರೇರಿತ ಕೊಲೆಗಳಿಂದ ಸಮಾಜದಲ್ಲಿ ಭೀತಿ ಉಂಟಾಗುತ್ತಿದೆ. ಸರಕಾರವು ಈ ಘಟನೆಗಳನ್ನು ತಡೆಯಲು ಸಂಪೂರ್ಣ ವಿಫಲವಾಗಿದ್ದು, ಸಮುದಾಯಗಳ ಮಧ್ಯೆ ಇರುವ ಈ ರೀತಿಯ ದ್ವೇಷಗಳು ಕೊನೆಯಾಗಬೇಕು. ಸರ್ಕಾರದ ಪ್ರತಿನಿಧಿಗಳು ಸಂತ್ರಸ್ತರ ಮನೆಗೆ ಭೇಟಿ ನೀಡುವಾಗಲೂ ಮತ್ತು ಪರಿಹಾರ ಹಂಚಿಕೆಯಲ್ಲೂ ತಾರತಮ್ಯ ತೋರಿಸುತ್ತಿದ್ದಾರೆ. ಇದರಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ. ಮುಖ್ಯಮಂತ್ರಿ ಬೊಮ್ಮಾಯಿ ಕೋಮು ಪ್ರಚೋದನಕಾರಿ ಹೇಳಿಕೆ ನೀಡಿ, ಕ್ರಿಯೆಗೆ ಪ್ರತಿಕ್ರಿಯೆಯ ದುಷ್ಪ್ರೇರಣೆಯ ದುರಂತವನ್ನು ಸಮಾಜವು ಈಗ ಅನುಭವಿಸುತ್ತಿದೆ. ಸಮಾಜದ ಒಂದು ವರ್ಗವು ಭಯದ ವಾತಾವರಣದಲ್ಲಿ ಜೀವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೆಗ್ಡೆ ಕಿಡಿಕಾರಿದ್ದಾರೆ.

ಇಂತಹ ಪರಿಸ್ಥಿತಿಯು ಮುಂದುವರಿಯಬಾರದು. ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಗಟ್ಟಿಗೊಳಿಸಲು ಮತ್ತು ಅಭಿವೃದ್ಧಿಯ ಪಥದತ್ತ ಸಾಗಲು ನಾವೆಲ್ಲರೂ ಕೈ ಜೋಡಿಸುವ ಕೆಲಸ ನಡೆಯಬೇಕಾಗಿದೆ ಎಂದು  ಡಾ.ಸುಮತಿ.ಎಸ್.ಹೆಗ್ಡೆ ತಿಳಿಸಿದ್ದಾರೆ.

Join Whatsapp