ಬೆಂಗಳೂರು: ಪಹಲ್ಗಾಮ್ ದಾಳಿಯ ಬಳಿಕ ಪಾಕಿಸ್ತಾನ ಮತ್ತು ಭಾರತ ನಡುವೆ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವಾಲಯವು ದೇಶದ ಹಲವು ರಾಜ್ಯಗಳಲ್ಲಿ ಬುಧವಾರ (ಮೇ 7) ಅಣಕು ಕಾರ್ಯಾಚರಣೆ ನಡೆಸುವಂತೆ ಸೂಚನೆ ನೀಡಿದೆ.
ರಾಜ್ಯದ ಬೆಂಗಳೂರು, ರಾಯಚೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡು ದೇಶದ 244 ಜಿಲ್ಲೆಗಳಲ್ಲಿ ನಡೆಯಲಿದೆ. ಇದರಲ್ಲಿ ವಾಯುದಾಳಿಯ ಸೈರನ್ ಮೊಳಗಲಿದೆ. ಸುರಕ್ಷಿತ ಸ್ಥಳಗಳಿಗೆ ಜನರ ಸ್ಥಳಾಂತರ ಮತ್ತು ಯುದ್ಧ ಹಾಗೂ ಇತರ ತುರ್ತು ಸಂದರ್ಭಗಳಿಗೆ ಜನರನ್ನು ಸಜ್ಜುಗೊಳಿಸುವ ತರಬೇತಿ ಕಾರ್ಯಾಗಾರವೂ ಆಗಿರಲಿದೆ.
ನಾಗರಿಕ ಯುದ್ಧ ನಿಯಮ 1968ರ ಅಡಿಯಲ್ಲಿ ಈ ಅಣಕು ಕಾರ್ಯಾಚರಣೆ ನಡೆಸಲಾಗುತ್ತಿದೆ. ಸದ್ಯ ಉಂಟಾಗಿರುವ ಉದ್ವಿಗ್ನತೆಗೂ ಮತ್ತು ಅಣಕು ಕಾರ್ಯಾಚರಣೆಗೂ ಸಂಬಂಧವಿಲ್ಲ. ಆದರೆ ಯಾವುದೇ ಕಠಿಣ ಪರಿಸ್ಥಿತಿಯಲ್ಲಿ ನಾಗರಿಕರನ್ನು ರಕ್ಷಣೆ ಮಾಡಲು ಅವರನ್ನು ಸಜ್ಜುಗೊಳಿಸಲು ಈ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವಾಲಯವು ಮೇ 2ರಂದು ಮಾಹಿತಿ ನೀಡಿತ್ತು.
ನಾಗರಿಕ ರಕ್ಷಣೆ ಅಣಕು ಕಾರ್ಯಾಚರಣೆ ಎಂದರೇನು?
ಯುದ್ಧ, ಕ್ಷಿಪಣಿ ದಾಳಿ ಅಥವಾ ವಾಯು ದಾಳಿಯ ಸಂದರ್ಭದಲ್ಲಿ ನಾಗರಿಕ ರಕ್ಷಣೆಯಲ್ಲಿ ಸರ್ಕಾರಿ ಯಂತ್ರ ಮತ್ತು ನಾಗರಿಕರನ್ನು ಸಜ್ಜುಗೊಳಿಸುವ ಪರೀಕ್ಷಾರ್ಥ ಪ್ರಯೋಗ. ಇದರಲ್ಲಿ ಯುದ್ಧದ ನೈಜ ಸನ್ನಿವೇಶವನ್ನೇ ಸೃಷ್ಟಿಸಲಾಗುತ್ತದೆ.
ವಾಯು ದಾಳಿಯ ಸೈರನ್ 244 ನಗರಗಳಲ್ಲಿ ಮೊಳಗಲಿದೆ. ತಕ್ಷಣ ವಿದ್ಯುತ್ ಕಡಿತ ಮಾಡಲಾಗುತ್ತದೆ. ನಾಗರಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಪ್ರಕ್ರಿಯೆ ಮತ್ತು ವಿಪತ್ತು ನಿರ್ವಹಣಾ ತಂಡಗಳು ನೈಜ ಪರಿಸರದಂತೆಯೇ ಕಾರ್ಯಾಚರಣೆ ನಡೆಸಲಿವೆ. ಇದರಿಂದ ಭವಿಷ್ಯದಲ್ಲಿ ಎದುರಾಗಬಹುದಾದ ಅಪಾಯದ ಗಾಬರಿ ತಗ್ಗಿಸುವುದು, ಗೊಂದಲ ನಿವಾರಿಸುವುದು ಮತ್ತು ಜೀವಗಳನ್ನು ರಕ್ಷಿಸುವ ನಿಟ್ಟಿನಲ್ಲಿ ನಡೆಸಲಾಗುತ್ತಿರುವ ಜಾಗೃತಿ ಕಾರ್ಯಾಗಾರ ಮತ್ತು ಸಿದ್ಧತೆಯಾಗಿದೆ.
ಅಣಕು ಕಾರ್ಯಾಚರಣೆಯ ಸ್ವರೂಪ ಹೇಗಿರಲಿದೆ?
ವಾಯು ದಾಳಿಯ ಅಪಾಯವನ್ನು ಮುಂಚಿತವಾಗಿಯೇ ತಿಳಿಸುವ ಸೈರನ್ಗಳನ್ನು ಅಣಕು ಕಾರ್ಯಾಚರಣೆಗೆ ಗುರುತಿಸಿದ ನಗರಗಳಲ್ಲಿ ಮೇ 7ರಂದು ಮೊಳಗಲಿವೆ. ತಕ್ಷಣ ನಾಗರಿಕರು ಸುರಕ್ಷಿತ ಸ್ಥಳಗಳಿಗೆ ತೆರಳಲು ಸಜ್ಜಾಗಬೇಕು.
ಗುರುತಿಸಲಾದ ನಗರಗಳಲ್ಲಿ ವಿದ್ಯುತ್ ಕಡಿತ ಮಾಡಲಾಗುವುದು. 1971ರ ಯುದ್ಧದಲ್ಲಿ ಈ ಪದ್ಧತಿ ಅಳವಡಿಸಲಾಗಿತ್ತು. ಬೆಳಕು ಇಲ್ಲದ ಕಾರಣ, ವಾಯುದಾಳಿಯನ್ನು ಸಾಧ್ಯವಾದಷ್ಟು ತಗ್ಗಿಸಬಹುದಾಗಿದೆ.
ಸಂಪರ್ಕ ಗೋಪುರಗಳು, ವಿದ್ಯುತ್ ಘಟಕಗಳು ಮತ್ತು ಸೇನಾ ನೆಲೆಗಳ ರಕ್ಷಣೆಗೆ ಗೂಢವೇಷ ಕಾರ್ಯಾಚರಣೆ ನಡೆಸಲಾಗುತ್ತದೆ. ವಾಯುದಾಳಿಯನ್ನು ರಕ್ಷಿಸುವ ತಂತ್ರಗಳ ಜತೆಗೆ ಉಪಗ್ರಹಗಳ ಮೂಲಕವೂ ಈ ಕೇಂದ್ರಗಳ ಮೇಲೆ ನಿಗಾ ಇಡಲಾಗುತ್ತದೆ.
ಅತಿ ಹೆಚ್ಚು ಅಪಾಯವಿರುವ ಸ್ಥಳಗಳಲ್ಲಿರುವ ನಾಗರಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತದೆ. ಕಡಿಮೆ ಸಮಯದಲ್ಲಿ ಗರಿಷ್ಠ ಜನರ ಸ್ಥಳಾಂತರದ ಸವಾಲಿನ ಜತೆಗೆ, ಬೇಕಾಗುವ ವಸ್ತುಗಳ ಮಾಹಿತಿಯನ್ನೂ ಕಲೆ ಹಾಕಲಾಗುತ್ತದೆ.
ಶಾಲೆ, ಕಾಲೇಜು, ಕಚೇರಿ ಮತ್ತು ಸಮುದಾಯ ಕೇಂದ್ರಗಳಲ್ಲಿ ಜಾಗೃತಿ ಕಾರ್ಯಾಗಾರವನ್ನು ಆಯೋಜಿಸಲಾಗುವುದು. ಅಪಾಯದ ಸಂದರ್ಭದಲ್ಲಿ ಜನರು ಹೇಗೆ ಸುರಕ್ಷಿತ ಸ್ಥಳಗಳನ್ನು ಹುಡುಕಿಕೊಳ್ಳಬೇಕು. ಭಯವಿಲ್ಲದೆ ಧೈರ್ಯವಾಗಿ ಹೇಗೆ ಪರಿಸ್ಥಿತಿ ನಿಭಾಯಿಸಬೇಕು ಎಂಬುದರ ಕುರಿತು ಸಿಬ್ಬಂದಿ ಮಾರ್ಗದರ್ಶನ ಮಾಡಲಿದ್ದಾರೆ.
ಅಣಕು ಕಾರ್ಯಾಚರಣೆ ಸಂದರ್ಭದಲ್ಲಿ ನೆನಪಿಟ್ಟುಕೊಳ್ಳಬೇಕಾದ ಸಂಗತಿಗಳು
ಹೆಚ್ಚು ಒತ್ತಡವಿಲ್ಲದೆ ಸ್ಥಳೀಯ ಆಡಳಿತದ ಸೂಚನೆಗಳ ಪಾಲನೆ
ನೀರು, ಔಷಧ ಮತ್ತು ಫ್ಲಾಶ್ಲೈಟ್ಗಳನ್ನು ಸಿದ್ಧವಾಗಿಟ್ಟುಕೊಳ್ಳುವುದು ಅತ್ಯಗತ್ಯ
ವದಂತಿ ಹರಡುವುದು ಅಥವಾ ಖಾತ್ರಿ ಇಲ್ಲದ ಸುದ್ದಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಡುವುದನ್ನು ತಡೆಯಬೇಕು
ವಿದ್ಯುತ್ ಅಥವಾ ಅಂತರ್ಜಾಲ ಹಠಾತ್ ಸ್ಥಗಿತಗೊಂಡರೆ ಗಾಬರಿಯಾಗುವ ಅಗತ್ಯವಿಲ್ಲ
ಸರ್ಕಾರಿ ರೇಡಿಯೊ ಮತ್ತು ಟಿವಿಗಳಲ್ಲಿ ಪ್ರಸಾರವಾಗುವ ಅಧಿಕೃತ ಮಾಹಿತಿಯನ್ನಷ್ಟೇ ಕೇಳುವುದು