Home ಜಾಲತಾಣದಿಂದ ಕಟುಕರ ರೀತಿ ಮಾತನಾಡುವುದು ಸರಿಯಲ್ಲ: ಸಚಿವ ವೆಂಕಟೇಶ್​ಗೆ ಆರಗ ಜ್ಞಾನೇಂದ್ರ ತಿರುಗೇಟು

ಕಟುಕರ ರೀತಿ ಮಾತನಾಡುವುದು ಸರಿಯಲ್ಲ: ಸಚಿವ ವೆಂಕಟೇಶ್​ಗೆ ಆರಗ ಜ್ಞಾನೇಂದ್ರ ತಿರುಗೇಟು

ಶಿವಮೊಗ್ಗ: ಪಶು ಸಂಗೋಪನ ಇಲಾಖೆ ಸಚಿವ ವೆಂಕಟೇಶ್ ಹೇಳಿಕೆಗೆ ತಿರುಗೇಟು ನೀಡಿರುವ ಮಾಜಿ ಗೃಹ ಸಚಿವ ಮತ್ತು ತೀರ್ಥಹಳ್ಳಿ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ, ಗೋವು ಕಡಿಯುವುದರಲ್ಲಿ ಸಾರ್ಥಕತೆ ಇಲ್ಲ. ಬದಲಿಗೆ ಗೋವು ಸಾಕುವುದರಲ್ಲಿ ಸಾರ್ಥಕತೆ ಇದೆ ಎಂದು ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಪಶುಸಂಗೋಪನಾ ಸಚಿವರು ಕಟುಕರ ರೀತಿ ಮಾತನಾಡುವುದು ಸರಿಯಲ್ಲ, ಮೊದಲು ಅದನ್ನು ನಿಲ್ಲಿಸುವಂತೆ ಎಚ್ಚರಿಕೆ ನೀಡಿದರು. ಯಾರನ್ನು ತೃಪ್ತಿಪಡಿಸಬೇಕೆಂದು ಈ ರೀತಿ ಹೇಳಿಕೆ ನೀಡಿದ್ದಾರೆ ಗೊತ್ತಿಲ್ಲ. ಇದು ಎಲ್ಲರಿಗೂ ಗೊತ್ತಿರುವ ವಿಷಯ. ಇದು ತುಂಬಾ ದಿನ ನಡೆಯುವುದಿಲ್ಲ ಎಂದು ಕಿಡಿಕಾರಿದ್ದಾರೆ.

ಎಲ್ಲರೂ ತಾಯಿಯ ಎದೆಹಾಲು ನಿಲ್ಲಿಸಿದ ಬಳಿಕ ಹಸುವಿನ ಹಾಲನ್ನು ಕುಡಿಯುತ್ತಾರೆ. ಹೀಗಾಗಿಯೇ ಗೋ ಅನ್ನು ತಾಯಿ ಎಂದು ಕರೆಯುತ್ತಾರೆ. ಇತ್ತೀಚೆಗೆ ನಾವು ಸಾವಯವ ಕೃಷಿಯತ್ತ ವಾಲುತ್ತಿದ್ದೇವೆ. ಇದಕ್ಕಾಗಿ ಜಾನುವಾರುಗಳು ಬೇಕೇ ಬೇಕು. ಇಂದು ಜಾನುವಾರು ಗೊಬ್ಬರಕ್ಕೆ ಬೆಲೆ ಎಷ್ಟಾಗಿದೆ ಎಂಬುದನ್ನು ಎಲ್ಲರೂ ಯೋಚಿಸಬೇಕಾಗಿದೆ ಎಂದು ಹೇಳಿದರು.

ಪಶು ಸಂಗೋಪನೆ ‌ಸಚಿವ ಮೆಂಟಲ್ ಎಂದ ಪ್ರಭು ಚೌಹಾನ್

ಬೀದರ್​ನಲ್ಲಿ ಮಾಜಿ ಪಶು ಸಂಗೋಪನೆ ಸಚಿವ ಪ್ರಭು ಚೌಹಾನ್ ಹೇಳಿಕೆ ನೀಡಿದ್ದು, ಕಾಂಗ್ರೆಸ್​ನವರಿಗೆ ಕಾನೂನಿನ ಬಗ್ಗೆ ಅರಿವಿಲ್ಲ. ಅವರೇ 1964 ರಲ್ಲಿ ಗೋ ಹತ್ಯೆ ಕಾನೂನು ಜಾರಿಗೆ ತಂದಿದ್ದಾರೆ. ಕಾಂಗ್ರೆಸ್​ನವರು ಜಾರಿ ಮಾಡಿದ ಕಾನೂನನ್ನು ನಾವು ಕಠಿಣ ಮಾಡಿದ್ದೇವೆ. ಕಾಂಗ್ರೆಸ್​ನ ಪಶು ಸಂಗೋಪನೆ ‌ಸಚಿವರು ಮೆಂಟಲ್ ಆಗಿದ್ದಾರೆ. ಅವರ ಖಾತೆ ಬದಲಾವಣೆ ಮಾಡಬೇಕು. ಇಲ್ಲಾ ಅವರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಸಿಎಂಗೆ ಪ್ರಭು‌ ಚೌಹಾನ್​ ಮನವಿ ಮಾಡಿದರು.

ಗೋ ಹತ್ಯೆ ಕಾನೂನು ರದ್ದಾದ್ರೆ ಉಗ್ರ ಹೋರಾಟ

ಒಂದು‌ ಸಮುದಾಯಕ್ಕೆ ಖುಷಿ ಪಡಿಸಲು ಗೋ ಹತ್ಯೆ ಕಾನೂನು ನಿಷೇಧ ರದ್ದತಿ ಬಗ್ಗೆ ಮಾತಾನಾಡುತ್ತಿದ್ದಾರೆ. ಜನರು ಕಾಂಗ್ರೆಸ್​ ಪಕ್ಷಕ್ಕೆ ಆಶಿರ್ವಾದ ಮಾಡಿದ್ದಾರೆ. ಅಂಹಕಾರ ಬಿಟ್ಟು ಜನರ ಸೇವೆ ಮಾಡಿ. ಒಂದು ವೇಳೆ ಕಾಂಗ್ರೆಸ್​ ಗೋ ಹತ್ಯೆ ಕಾನೂನು ರದ್ದು ಮಾಡಿದರೆ ರಾಜ್ಯದಲ್ಲಿ ಉಗ್ರವಾದ ಹೋರಾಟ ಮಾಡುತ್ತೇವೆ. ತಾವೇ ಕಾನೂನು ಮಾಡಿದ್ದನ್ನ ಈಗ ಅವರೇ ರದ್ದು ಮಾಡುವ ಬಗ್ಗೆ ಮಾತನಾಡುತ್ತಿದ್ದಾರೆ ಇದು ಆಶ್ಚರ್ಯ ಸಂಗತಿ ಎಂದರು.

ಜನ ಸಾಮಾನ್ಯರು ಕೂಡ ಬೀದಿಗಿಳಿದು ಹೋರಾಟ ಮಾಡುತ್ತಾರೆ: ಬಿ.ವೈ ವಿಜಯೇಂದ್ರ

ಮೈಸೂರಿನಲ್ಲಿ ಈ ಕುರಿತಾಗಿ ಶಾಸಕ ಬಿ.ವೈ ವಿಜಯೇಂದ್ರ ಹೇಳಿಕೆ ನೀಡಿದ್ದು, ಸಚಿವರ ಹೇಳಿಕೆಯನ್ನು ನೋಡಿದರೆ ದೇಶದ ಸಂಸ್ಕೃತಿ, ಅರಿವು, ಕಾಳಜಿ ಇಲ್ಲದ ವ್ಯಕ್ತಿ. ಈ ರೀತಿಯ ಉಡಾಫೆ ಹೇಳಿಕೆಯನ್ನು ರಾಜ್ಯದ ಜನರು ನಿರೀಕ್ಷೆ ಮಾಡಿರಲಿಲ್ಲ. ಅನೇಕ ಸಚಿವರು ಗೆದ್ದಿರುವ ವಿಶ್ವಾಸದಲ್ಲಿ ಅನೇಕ ಹೇಳಿಕೆ ಕೊಡುತ್ತಿದ್ದಾರೆ. ರಾಜ್ಯದಲ್ಲಿ ಅಶಾಂತಿ ಸೃಷ್ಟಿಯಾಗುವ ರೀತಿ ನಡೆದುಕೊಳ್ಳುತ್ತಾರೆ. ನಮ್ಮ ಹಿಂದು ಸಂಸ್ಕೃತಿ ಪರಂಪರೆ ಗೊತ್ತಿದ್ದರೆ ಈ ರೀತಿ ಹೇಳಿಕೆ ಕೊಡುತ್ತಿರಲಿಲ್ಲ. ನಾಳೆಯಿಂದ ಬಿಜೆಪಿ ಜಿಲ್ಲಾ ಮಟ್ಟದಲ್ಲಿ ಹೋರಾಟ ನಡೆಸುತ್ತೇವೆ. ಜನ ಸಾಮಾನ್ಯರು ಕೂಡ ಬೀದಿಗಿಳಿದು ಹೋರಾಟ ಮಾಡುತ್ತಾರೆ ಎಂದು ಹೇಳಿದರು.

Join Whatsapp
Exit mobile version