Home ಟಾಪ್ ಸುದ್ದಿಗಳು ಜನರಿಗೆ ಉಚಿತ ಅಕ್ಕಿ ಕೊಡಲು ಆಗದಿದ್ರೆ ಅಧಿಕಾರದಿಂದ ತೊಲಗಿ ಎಂದ ಸಚಿವೆ ಶೋಭಾ ಕರಂದ್ಲಾಜೆ

ಜನರಿಗೆ ಉಚಿತ ಅಕ್ಕಿ ಕೊಡಲು ಆಗದಿದ್ರೆ ಅಧಿಕಾರದಿಂದ ತೊಲಗಿ ಎಂದ ಸಚಿವೆ ಶೋಭಾ ಕರಂದ್ಲಾಜೆ

ಚಿಕ್ಕಮಗಳೂರು: ರಾಜ್ಯದ ಜನರಿಗೆ ಉಚಿತ ಅಕ್ಕಿ ಕೊಡಲು ಆಗದಿದ್ರೆ ಅಧಿಕಾರದಿಂದ ತೊಲಗಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ‘ಯೋಜನೆಗಳನ್ನು ಘೋಷಿಸುವಾಗ ತಲೆಯಲ್ಲಿ ಮೆದುಳು ಇರಲಿಲ್ವಾ, ಆವಾಗ ಸಗಣಿ ತುಂಬಿತ್ತಾ?, ಕೇಂದ್ರದ ಅಕ್ಕಿ ಸೇರಿ ರಾಜ್ಯದ ಜನರಿಗೆ ಒಟ್ಟು 15 ಕೆಜಿ ಅಕ್ಕಿ ಕೊಡಿ. ಚುನಾವಣೆ ಗೆಲ್ಲಲು ಕಾಂಗ್ರೆಸ್​ನವರು ಸುಳ್ಳು ಭರವಸೆ ಕೊಟ್ಟು ಆಸೆ ತೋರಿಸಿದ್ದಾರೆ. ಸಿದ್ದರಾಮಯ್ಯನವರೇ ಬೇಜವಾಬ್ದಾರಿ ಹೇಳಿಕೆ ವಾಪಸ್​ ತೆಗೆದುಕೊಳ್ಳಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಚುನಾವಣೆ ಗೆಲ್ಲಲು ಸುಳ್ಳು ಗ್ಯಾರಂಟಿ ಘೋಷಣೆ ಮಾಡಿದ್ರಿ, ಮಹಿಳೆಯರು ಬಸ್​​ ಪಾಸ್ ಪಡೆಯಲು ಸರ್ಟಿಫಿಕೇಟ್ ಕೇಳುತ್ತಿದ್ದಾರೆ. ನಾನು ಮಹಿಳೆ ಅನ್ನೋದಕ್ಕೆ ನನಗೆ ಸರ್ಟಿಫಿಕೇಟ್ ಬೇಕಿಲ್ಲ. ಅಕ್ಕಿ, ದುಡ್ಡು, ವಿದ್ಯುತ್ ಎಲ್ಲದಕ್ಕೂ ಮೋದಿ ಕಡೆ ತೋರಿಸುತ್ತಿದ್ದೀರಿ. ಹಾಗಾದರೆ ನೀವು ಗ್ಯಾರಂಟಿ ಕಾರ್ಡ್ ಯಾಕೆ ವಿತರಣೆ ಮಾಡಿದ್ದೀರಿ. ಬೇರೆ ರಾಜ್ಯ, ನಮ್ಮ ರಾಜ್ಯದ ರೈತರಿಂದ ಅಕ್ಕಿ ಖರೀದಿಸಿ ರಾಜ್ಯದ ಜನರಿಗೆ ಕೊಡಿ ಎಂದು ವಾಗ್ದಾಳಿ ನಡೆಸಿದರು.

ನಿಮ್ಮ ಗ್ಯಾರೆಂಟಿ ಯೋಜನೆಗಳನ್ನ ಘೋಷಣೆ ಮಾಡಿದಾಗಲೇ ನಾವು ಅಂದೆ ಕೇಳಿದ್ವಿ, ಇವಕ್ಕೆಲ್ಲಾ ಹಣ ಎಲ್ಲಿಂದ ತರುತ್ತೀರಾ ಎಂದು, ಇವತ್ತು ಅಕ್ಕಿ, ದುಡ್ಡು, ವಿದ್ಯುತ್ ಎಲ್ಲದಕ್ಕೂ ಮೋದಿ ಕಡೆ ಬೆರಳು ಮಾಡಿ ತೋರಿಸುತ್ತಿದ್ದೀರಿ. ಯಾರಿಗೆ ಮೋಸ ಮಾಡಲು, ಯಾರ ಮೂಗಿಗೆ ತುಪ್ಪ ಸವರಲು ಯೋಜನೆಗಳನ್ನು ಹಂಚಿದ್ದೀರಾ, ಬಫರ್ ಸ್ಟಾಕ್‌ ಇಂದು ಅಕ್ಕಿ ಕೊಡಿ ಅಂತೀರಾ, ಅದು ಇರುವುದು ನೆರೆ, ಬರ, ಯುದ್ಧದ ಸಂದರ್ಭದಲ್ಲಿ ಬಳಕೆಗೆಂದು, ಬೇರೆ ರಾಜ್ಯ ಹಾಗೂ‌ ನಮ್ಮ ರಾಜ್ಯದ ರೈತರ ಅಕ್ಕಿ ಖರೀದಿಸಿ ಕೊಡಿ ಎಂದು ಚಿಕ್ಕಮಗಳೂರಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

Join Whatsapp
Exit mobile version