Home ಟಾಪ್ ಸುದ್ದಿಗಳು ಮಥುರಾ ಮಸೀದಿ ಅರ್ಜಿ । ‘ಹೊರಗಿನವರು’ ಇಲ್ಲಿನ ಶಾಂತಿಯನ್ನು ಕದಡುವ ಪ್ರಯತ್ನ ನಡೆಸುತ್ತಿದ್ದಾರೆ’। ಅರ್ಚಕರ ಸಂಘಟನೆ...

ಮಥುರಾ ಮಸೀದಿ ಅರ್ಜಿ । ‘ಹೊರಗಿನವರು’ ಇಲ್ಲಿನ ಶಾಂತಿಯನ್ನು ಕದಡುವ ಪ್ರಯತ್ನ ನಡೆಸುತ್ತಿದ್ದಾರೆ’। ಅರ್ಚಕರ ಸಂಘಟನೆ ಆರೋಪ

ಮಥುರಾದ ಶಾಹಿ ಈದ್ಗಾ ಮಸೀದಿಯನ್ನು ತೆರವುಗೊಳಿಸುವಂತೆ ಮಥುರಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ಕುರಿತು ಪ್ರತಿಕ್ರಿಯಿಸಿರುವ ಅಲ್ಲಿನ ಅರ್ಚಕರ ಸಂಘಟನೆ, , ಇದು ‘ಹೊರಗಿನವರ’ ಕುಮ್ಮಕ್ಕಿನ  ಪ್ರಯತ್ನವಾಗಿದ್ದು, ಅದು ಇಲ್ಲಿನ ಶಾಂತಿ ಮತ್ತು ಸೌಹಾರ್ದತೆಯನ್ನು ನಾಶಪಡಿಸುತ್ತದೆ ಎಂದು ಅದು ಕಿಡಿ ಕಾರಿದೆ. 17ನೇ ಶತಮಾನದ ಮಸೀದಿ ಯನ್ನು ತೆರವುಗೊಳಿಸುವಂತೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುವ ಪ್ರಯತ್ನದ ಹಿಂದಿರುವ ಜನರ ಕೃತ್ಯವನ್ನು ಅಖಿಲ ಭಾರತ ತೀರ್ಥ ಪುರೋಹಿತ್ ಮಹಾಸಭಾ ಖಂಡಿಸಿದೆ.

13.37 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿರುವ ಮಥುರಾದ ಕಾತ್ರಾ ಕೇಶವದೇವ್ ದೇವಾಲಯ ಶ್ರೀಕೃಷ್ಣನ ಜನ್ಮಸ್ಥಳವೆಂದು ಹೇಳಿ ಕೆಲ ಹಿಂದೂಗಳು, ಆ ಪ್ರದೇಶದಲ್ಲಿ 1669-70ರಲ್ಲಿ ಮೊಘಲ್ ಚಕ್ರವರ್ತಿ ಔರಂಗಝೇಬ್ ನ ಆದೇಶದ ಮೇರೆಗೆ ಮಸೀದಿಯನ್ನು ನಿರ್ಮಿಸಲಾಗಿದೆ. ಆದುದರಿಂದ ಮಸೀದಿಯನ್ನು ಅಲ್ಲಿಂದ ತೆರವುಗೊಳಿಸಬೇಕು ಎಂದು ಮಥುರಾ ಸಿವಿಲ್ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಮಾತ್ರವಲ್ಲ 1968ರ ಮಥುರಾ ಕೋರ್ಟ್ ತೀರ್ಪನ್ನು ರದ್ದುಮಾಡಬೇಕು ಎಂದು ಕೂಡಾ ಅರ್ಜಿಯಲ್ಲಿ ಆಗ್ರಹಿಸಲಾಗಿದೆ. ಅಂದಿನ ತೀರ್ಪಿನಲ್ಲಿ ಶ್ರೀಕೃಷ್ಣ ಜನ್ಮಸ್ಥಾನ ಸೇವಾ ಸಂಸ್ಥಾನ ಮತ್ತು ಶಾಹಿ ಈದ್ಗಾ ನಿರ್ವಹಣಾ ಸಮಿತಿ ನಡುವೆ ಭೂ ಒಪ್ಪಂದ ನಡೆದಿತ್ತು ಮತ್ತು ಮಸೀದಿ ಅಲ್ಲಿಯೇ ಇರಬೇಕೆಂದು ತೀರ್ಪು ನೀಡಿತ್ತು. ಎರಡೂ ಕಡೆಯವರು ಒಪ್ಪಂದ ಮಾಡಿಕೊಂಡ ನಂತರ ಮಥುರಾದ ಮಂದಿರ ಮತ್ತು ಮಸೀದಿ ನಡುವೆ ಯಾವುದೇ ವಿವಾದವಿರಲಿಲ್ಲ ಎನ್ನಲಾಗಿದೆ.

“ಯಾವುದೇ ವಿವಾದ ಇಲ್ಲದಿರುವ ಸನ್ನಿವೇಶದಲ್ಲಿ, ಕೆಲವು ಹೊರಗಿನವರು ಮಂದಿರ-ಮಸೀದಿ ವಿವಾದವನ್ನು ಎತ್ತುವ ಮೂಲಕ ಮಥುರಾದ ಶಾಂತಿ ಮತ್ತು ಸೌಹಾರ್ದತೆಯನ್ನು ಹಾಳುಮಾಡಲು ಪ್ರಯತ್ನಿಸುತ್ತಿದ್ದಾರೆ. ಎರಡೂ ಸಮುದಾಯಗಳ ನಡುವೆ ಸಾಮರಸ್ಯವಿದೆ ಮತ್ತು ಪಕ್ಕದಲ್ಲಿ ಧಾರ್ಮಿಕ ತಾಣವೊಂದು ಇರುವುದು ಭಾವನಾತ್ಮಕ ಐಕ್ಯತೆಗೆ ಉದಾಹರಣೆಯಾಗಿದೆ” ಎಂದು ಅರ್ಚಕ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಮಹೇಶ್ ಪಾಠಕ್ ಹೇಳಿದ್ದಾರೆ.

ಅವರ “ಹೊರಗಿನವರು” ಹೇಳಿಕೆಗೆ ಇಂಬು ನೀಡುವಂತೆ ಅರ್ಜಿ ಸಲ್ಲಿಸಿದವರಲ್ಲಿ ಲಕ್ನೋ ನಿವಾಸಿ ರಂಜನಾ ಅಗ್ನಿಹೋತ್ರಿ ಮತ್ತು ದೆಹಲಿ ನಿವಾಸಿ ಪರ್ವೇಶ್ ಕುಮಾರ್, ಉತ್ತರ ಪ್ರದೇಶದ ಸಿದ್ಧಾರ್ಥ ನಗರದ ರಾಜೇಶ್ ಮಣಿ ತ್ರಿಪಾಠಿ, ಬಸ್ತಿಯ ಕರುಣೇಶ್ ಕುಮಾರ್ ಶುಕ್ಲಾ ಮತ್ತು ಲಕ್ನೋದ ಶಿವಾಜಿ ಸಿಂಗ್ ಮತ್ತು ತ್ರಿಪುರಾರಿ ತಿವಾರಿ ಸೇರಿದ್ದಾರೆ. ಇವರಲ್ಲಿ ಯಾರೂ ಮಥುರಾದವರು ಇಲ್ಲ ಎನ್ನುವುದು ಗಮನಾರ್ಹವಾಗಿದೆ.

ಮತೀಯ ಸೌಹಾರ್ದ ಕೆಡಿಸಿ ರಾಜಕೀಯ ಲಾಭ ಪಡೆಯುವ ಹಿಂದುತ್ವ ಶಕ್ತಿಗಳ ಈ ಪ್ರಯತ್ನ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿ ಸುಪ್ರೀಂ ಕೋರ್ಟ್ ಮೂಲಕ ಮಂದಿರಕ್ಕೆ ಹಸಿರು ನಿಶಾನೆ ಪಡೆದ ಘಟನೆಯಿಂದ ಪ್ರೇರಣೆ ಪಡೆದಿದೆ ಎನ್ನಲಾಗಿದೆ. ಅರ್ಜಿಯ ಪರವಿರುವ ಕೋಮುವಾದಿ ಶಕ್ತಿಗಳು 1968ರ ಸೌಹಾರ್ದ ಸ್ಥಾಪಿಸುವ ಐಕ್ಯತೆಯ ಒಪ್ಪಂದ ಸಂಪೂರ್ಣ ತಪ್ಪು ಮತ್ತು ಅದನ್ನು ರದ್ದುಗೊಳಿಸುವಂತೆ ಆಗ್ರಹಿಸುತ್ತಿದೆ.

Join Whatsapp
Exit mobile version