ಮಂಗಳೂರು: ನಗರ ಹೊರವಲಯದ ಕುಡುಪು ಬಳಿ ಕ್ರಿಕೆಟ್ ಪಂದ್ಯದ ಸಂದರ್ಭದಲ್ಲಿ ಗುಂಪು ಹತ್ಯೆಗೆ ಒಳಗಾದ ಕೇರಳದ ವಯನಾಡ್ ಜಿಲ್ಲೆಯ ಪುಲ್ಪಳ್ಳಿ ನಿವಾಸಿ ಮೊಹಮ್ಮದ್ ಅಶ್ರಫ್ ಕುಟುಂಬದ ಮೇಲೆ ಕೆಲವು ವರ್ಷಗಳಿಂದ ಸತತವಾಗಿ ದುರಂತಗಳ ಸಿಡಿಲು ಬಡಿಯುತ್ತಿದೆ.
ಅಶ್ರಫ್ ಕೊಲೆಯಾಗುವ ನಾಲ್ಕು ದಿನಗಳ ಹಿಂದೆ ಅವರ ಅಜ್ಜಿ (ತಾಯಿಯ ಅಮ್ಮ) ಸಾವಿಗೀಡಾಗಿದ್ದರು. ‘ನಮ್ಮ ಅಜ್ಜಿ ಕಳೆದ ವಾರ ತೀರಿಹೋದರು. ಅದಾಗಿ ನಾಲ್ಕು ದಿನಗಳ ನಂತರ ಅಶ್ರಫ್ ಇಲ್ಲದಾಗಿದ್ದಾನೆ. ಆದರೆ ನಮಗೆ ವಯನಾಡ್ ಪೊಲೀಸರ ವಿಶೇಷ ದಳದ ಮೂಲಕ ವಿಷಯ ತಿಳಿದದ್ದು ಮಂಗಳವಾರ ಸಂಜೆ. ದುರಂತಗಳ ಮೇಲೆ ದುರಂತಗಳಿಂದ ಕುಟುಂಬವಿಡೀ ನಲುಗಿ ಹೋಗಿದೆ’ ಎಂದು ಅವರು ಹೇಳಿದರು.
ಪುಲ್ಪಳ್ಳಿಯ ಸಾಂದೀಪನಿ ಕಾಲೊನಿಯಲ್ಲಿ ಈ ಕುಟುಂಬ ವಾಸ ಮಾಡಲು ಆರಂಭಿಸಿದ್ದು ಮೂರು ವರ್ಷಗಳ ಹಿಂದೆ. ಮಲಪ್ಪುರಂ ಜಿಲ್ಲೆಯ ಕೋಟಕ್ಕಲ್ ನಲ್ಲಿದ್ದ ಆಸ್ತಿ, ಸಾಲದ ಕಾರಣಕ್ಕೆ ಜಪ್ತಿಯಾದ ಕಾರಣ ಕೆಲಸ ಅರಸುತ್ತ ಅವರ ಕುಟುಂಬ ಅಲ್ಲಿಗೆ ಬಂದಿತ್ತು.
ಮೂಲತಃ ಮಲಪ್ಪುರಂ ಜಿಲ್ಲೆಯವರಾದ ಅಶ್ರಫ್ ಕುಟುಂಬ ಕೆಲವು ವರ್ಷಗಳ ಹಿಂದೆ ವಯನಾಡ್ ಜಿಲ್ಲೆಗೆ ಬಂದು ನೆಲೆಸಿದೆ. ತಂದೆ, ತಾಯಿ ಇಬ್ಬರು ಸಹೋದರರು ಮತ್ತು ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.