ಮಂಗಳೂರು: ರೌಡಿಶೀಟರ್ ಸುಹಾಸ್ ಶೆಟ್ಟಿ ಕೊಲೆ ಕೃತ್ಯಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಸಂದೇಶಗಳಿಗೆ ಲೈಕ್ ಹಾಕಿದ್ದ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
_dj_bharath_2008 ಎಂಬ ಇನ್ ಸ್ಟಾಗ್ರಾಮ್ ಖಾತೆಯಲ್ಲಿ “ಸುಹಾಸ್ ಅಣ್ಣನ ಕೊಂದವರು ಹಾಗೂ ಕೊಂದವರಿಗೆ ಸಹಾಯ ಮಾಡಿದವರೆಲ್ಲರ ರಕ್ತ ಹರಿಯಬೇಕು. ಆಗ ಮಾತ್ರ ಸುಹಾಸ್ ಅಣ್ಣನ ಆತ್ಮಕ್ಕೆ ಶಾಂತಿಸಿಗುತ್ತೆ ನೆನಪಿಟ್ಟುಕೊಳ್ಳಿ” ಎಂಬುದಾಗಿ ಪೋಸ್ಟ್ ಹಾಕಲಾಗಿತ್ತು. ಅದಕ್ಕೆ ಲೈಕ್ ಮಾಡಿದ್ದ ಬಿಜೈಯ ಶರಣಪ್ಪ ಬಸವರಾಜ ಎಂಬಾತನ ವಿರುದ್ಧ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
karaavali_official ಎಂಬ ಇನ್ ಸ್ಟಾಗ್ರಾಮ್ ಖಾತೆಯಲ್ಲಿ “ಪ್ರತಿರೋಧ ಅಪರಾಧವಲ್ಲ. ಮುಸ್ಲಿಮರು ನಪುಂಸಕರು ಅಲ್ಲ ನೆನಪಿರಲಿ, ತಾನು ಯಾವ ಕಾರಣಕ್ಕೆ ಕೊಲೆಯಾದೆ ಅನ್ನೊ ಅರಿವಿಲ್ಲದೆ ಖಬುರ್ಸ್ತಾನಲ್ಲಿ ಮಲಗಿರೋ ಅಮಾಯಕ ಪಾಝಿಲನ ಕೊಲೆ ಮಾಡಿದ ಇವನ ಸಾವನ್ನು ದುಃಖ ಪಡುವಷ್ಟು ಮೂರ್ಖ ನಾನಲ್ಲ…..Targe 6 Peace baki inshallah” ಎಂದು ಮಾಡಿದ ಪೋಸ್ಟ್ಗೆ ಲೈಕ್ ಮಾಡಿದ್ದ ಬಜ್ಪೆಯ ಶಹನಾಝ್ ಎಂಬಾಕೆಯ ವಿರುದ್ಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.