Home ಕರಾವಳಿ ಮಂಗಳೂರು | ಬಾಲಕನಿಗೆ ಲಾಠಿ ಏಟು ಪ್ರಕರಣ: ಪೊಲೀಸ್ ಕಾನ್ಸ್’ಟೆಬಲ್ ಅಮಾನತು

ಮಂಗಳೂರು | ಬಾಲಕನಿಗೆ ಲಾಠಿ ಏಟು ಪ್ರಕರಣ: ಪೊಲೀಸ್ ಕಾನ್ಸ್’ಟೆಬಲ್ ಅಮಾನತು

ಮಂಗಳೂರು: ತಣ್ಣೀರುಬಾವಿ ಬೀಚ್’ನಲ್ಲಿ ಯುವಕನ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಣಂಬೂರು ಠಾಣೆಯ ಪೊಲೀಸ್ ಕಾನ್ಸ್’ಟೆಬಲ್ ಸುನೀಲ್ ಎಂಬವರನ್ನು ಅಮಾನತುಗೊಳಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹೇಳಿದ್ದಾರೆ.


ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಣ್ಣೀರುಬಾವಿ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಸಿಬ್ಬಂದಿ ಸುನೀಲ್ ಅವರನ್ನು ಅಮಾನತುಗೊಳಿಸಲಾಗಿದ್ದು, ಇಲಾಖಾ ವಿಚಾರಣೆಗೆ ಆದೇಶಿಸಲಾಗಿದೆ. ಘಟನೆ ಕುರಿತು ಯಾರಿಂದಲೂ ಪೋಷಕರು ಅಥವಾ ಬಾಲಕನಿಂದಾಗಲಿ ಯಾವುದೇ ದೂರು ಬಂದಿಲ್ಲ ಎಂದು ತಿಳಿಸಿದ್ದಾರೆ.


ಹೊಸ ವರ್ಷ ಹಿನ್ನೆಲೆಯಲ್ಲಿ ತಣ್ಣೀರುಬಾವಿ ಬೀಚ್’ಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಿತ್ತು. ಹೀಗಾಗಿ ಟ್ರಾಪಿಕ್ ಜಾಮ್ ಆಗಿತ್ತು. ಈ ವೇಳೆ ಕ್ರಿಕೆಟ್ ಆಡಿ ಬೈಕಿನಲ್ಲಿ ತೆರಳುತ್ತಿದ್ದ ಹುಡುಗರನ್ನು ಅಡ್ಡಗಟ್ಟಿದ ಪೊಲೀಸರು, ನಿಮ್ಮಿಂದಲೇ ಬ್ಲಾಕ್ ಆಗಿದೆಯೆಂದು ಲಾಠಿ ಪ್ರಹಾರ ನಡೆಸಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಇನ್ನು ಲಾಠಿ ಏಟಿನಿಂದ 6ನೇ ತರಗತಿ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

Join Whatsapp
Exit mobile version