ನನ್ನ ಪೋಷಕರು ಮೃಗಾಲಯದ ಪ್ರಾಣಿಗಳಲ್ಲ : ಆಸ್ಪತ್ರೆಯಲ್ಲಿ ಫೋಟೋಶೂಟ್ ನಡೆಸಿದ ಬಿಜೆಪಿ ಆರೋಗ್ಯ ಸಚಿವರ ನಡೆಗೆ ಮನಮೋಹನ್ ಸಿಂಗ್ ಪುತ್ರಿಯ ಆಕ್ರೋಶ

Prasthutha|

►ಬೆಡ್ ನಲ್ಲಿ ಮಲಗಿರುವ ಸಿಂಗ್ ಜೊತೆಗೆ ಫೋಟೋ ತೆಗೆದು ವಿಕೃತಿ ಮೆರೆದ ಆರೋಗ್ಯ ಸಚಿವ !

- Advertisement -

ಡೆಂಗ್ಯೂ ಜ್ವರಕ್ಕೊಳಗಾಗಿ ದೆಹಲಿ  ಏಮ್ಸ್ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿರುವ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಲು ಆರೋಗ್ಯ ಸಚಿವ ಮನ್ಸೂಖ್ ಮಾಂಡವೀಯ ತೆರಳಿದ್ದು, ಈ ವೇಳೆ ತನ್ನೊಂದಿಗೆ ಫೋಟೋಗ್ರಾಫರ್ ಒಬ್ಬರನ್ನು ಕೂಡಾ ಕರೆದುಕೊಂಡು ಬಂದಿದ್ದರು. ಆಸ್ಪತ್ರೆಯಲ್ಲಿ ಕೃಶರಾಗಿ ಮಲಗಿಕೊಂಡಿರುವ ಮನಮೋಹನ್ ಜೊತೆಗೆ ಮನ್ಸೂಖ್ ಮಾಂಡವೀಯ ಅವರು ಫೋಟೊ ಕೂಡಾ ತೆಗೆದುಕೊಂಡಿದ್ದಾರೆ. ಕುಟುಂಬದ ಅನುಮತಿ ಇಲ್ಲದೆ ಸಚಿವರು ಹೇಗೆ ಫೋಟೋ ತೆಗೆದರು ಎನ್ನುವುದನ್ನು ಹಲವರು ಪ್ರಶ್ನಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಮನಮೋಹನ್ ಸಿಂಗ್ ಅವರ ಪುತ್ರಿ ದಾಮನ್ ಸಿಂಗ್, “ಆರೋಗ್ಯ ಸಚಿವರು ಆಸ್ಪತ್ರೆಗೆ ಬಂದು ತಂದೆಯ ಆರೋಗ್ಯ ವಿಚಾರಿಸಿದ್ದಾರೆ. ಈ ವೇಳೆ ಅವರ ಜೊತೆಗೆ ಫೋಟೋಗ್ರಾಫರ್ ಒಬ್ಬರನ್ನು ಕರೆದುಕೊಂಡು ಬಂದಿದ್ದರು. ಇದು ನಮ್ಮ ಕುಟುಂಬದ ಯಾರಿಗೂ ಇಷ್ಟವಿರಲಿಲ್ಲ. ಫೋಟೋಗ್ರಾಫರ್ ಅವರನ್ನು ಹೊರಗೆ ಕಳುಹಿಸಬೇಕೆಂದು ಮತ್ತು ಕೊಠಡಿಯಲ್ಲಿ ಸೋಂಕಿನ ಅಪಾಯವಿದೆಯೆಂದು ಹೇಳಿದರೂ ಅದನ್ನು ಗಣನೆಗೆ ತೆಗೆದುಕೊಳ್ಳಲೇ ಇಲ್ಲ. ಈ ಬಗ್ಗೆ ನಮ್ಮ ತಾಯಿಗೆ ತೀವ್ರ ಬೇಸರವಿದೆ. ನಮ್ಮ ಪೋಷಕರು ಕಷ್ಟದ ಸನ್ನಿವೇಶದಲ್ಲಿದ್ದಾರೆ.  ಅವರು ಹಿರಿಯ ಜೀವಗಳು, ಮೃಗಾಲಯದಲ್ಲಿರುವ ಪ್ರಾಣಿಗಳಲ್ಲ” ಎಂದು ತಮ್ಮ ಮನದ ದುಃಖ ತೋಡಿಕೊಂಡಿದ್ದಾರೆ.

- Advertisement -

ಮೋದಿಯಂತೆ ಅವರ ಸಂಪುಟದ ಪ್ರತಿಯೊಬ್ಬರಿಗೂ ಫೋಟೋ ಚಪಲ ಜಾಸ್ತಿ ಎಂದು ಹಲವರು ಈ ವಿಕೃತಿ ನಡೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿದ್ದಾರೆ.

Join Whatsapp