Home ಟಾಪ್ ಸುದ್ದಿಗಳು ರಾಮ ನವಮಿ ಯಾತ್ರೆಯ ವೇಳೆ ನಡೆದ ಮುಸ್ಲಿಮ್ ವಿರೋಧಿ ಹಿಂಸಾಚಾರದ ಹಿಂದೆ ದೊಡ್ಡ ಮಟ್ಟದ ಪಿತೂರಿ:...

ರಾಮ ನವಮಿ ಯಾತ್ರೆಯ ವೇಳೆ ನಡೆದ ಮುಸ್ಲಿಮ್ ವಿರೋಧಿ ಹಿಂಸಾಚಾರದ ಹಿಂದೆ ದೊಡ್ಡ ಮಟ್ಟದ ಪಿತೂರಿ: ಪಾಪ್ಯುಲರ್ ಫ್ರಂಟ್

ನವದೆಹಲಿ: ದೇಶದ ವಿವಿಧ ಭಾಗಗಳಲ್ಲಿ ನಡೆದ ರಾಮ ನವಮಿ ರಾಲಿಗಳ ಸಂದರ್ಭದಲ್ಲಿ ನಡೆದ ಮುಸ್ಲಿಮರ ಮೇಲಿನ ದಾಳಿಗಳನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಚೆಯರ್ ಮೆನ್ ಒ.ಎಂ.ಎ.ಸಲಾಂ ತೀವ್ರವಾಗಿ ಖಂಡಿಸಿದ್ದಾರೆ. ಹಿಂಸಾಚಾರಕ್ಕೆ ಜನರನ್ನು ಪ್ರಚೋದಿಸುವ ಹಿಂದುತ್ವದ ಪ್ರಯತ್ನದ ವಿರುದ್ಧ ಪ್ರಜಾಸತ್ತಾತ್ಮಕ ಮತ್ತು ಜಾತ್ಯತೀತ ಪಕ್ಷಗಳ ಮೌನ ಮತ್ತು ನಿಷ್ಕ್ರಿಯತೆಗೂ ಅವರು ನಿರಾಶೆ ವ್ಯಕ್ತಪಡಿಸಿದ್ದಾರೆ.

ರಾಮ ನವಮಿ ಮೆರವಣಿಗೆಯ ಸಂದರ್ಭದಲ್ಲಿ ಗುಜರಾತ್, ಜಾರ್ಖಂಡ್, ಕರ್ನಾಟಕ, ಮಧ್ಯಪ್ರದೇಶ, ಬಿಹಾರ, ಗೋವಾ ಮತ್ತು ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮರ ಮೇಲೆ ದಾಳಿಗಳನ್ನು ನಡೆಸಲಾಯಿತು. ಇವೆಲ್ಲವೂ ದೇಶಾದ್ಯಂತ ಮುಸ್ಲಿಮ್ ವಿರೋಧಿ ಗಲಭೆ ನಡೆಸುವ ಹಿಂದುತ್ವ ಶಕ್ತಿಗಳ ಮೂಲಕ ನಡೆಸಲಾದ ಸಂಘಟಿತ ಪ್ರಯತ್ನದ ಭಾಗಗಳಾಗಿವೆ. ಹರಿದ್ವಾರದಲ್ಲಿ ಮತ್ತು ದೇಶದ ಇತರ ಕಡೆಗಳಲ್ಲಿ ಹಿಂದುತ್ವ ಕಾರ್ಯಕ್ರಮಗಳಲ್ಲಿ ನೀಡಲಾದ ನರಮೇಧದ ಕರೆಯ ಬಳಿಕ ಬಲಪಂಥೀಯ ಗೂಂಡಾಗಳ ವಿರುದ್ಧ ಕ್ರಮಗಳನ್ನು ಕೈಗೊಳ್ಳಲಾಗಿಲ್ಲ. ಇದು ದೇಶಾದ್ಯಂತ ಮುಸ್ಲಿಮರ ಮೇಲೆ ದಾಳಿ ನಡೆಸಲು ಅವರಲ್ಲಿ ಉತ್ಸಾಹವನ್ನು ತುಂಬಿತು ಎಂದು ಅವರು ಆರೋಪಿಸಿದ್ದಾರೆ.

ಹಿಂದೂ ಧಾರ್ಮಿಕ ಕಾರ್ಯಕ್ರಮಗಳನ್ನು ದ್ವೇಷ ಮತ್ತು ಹಿಂಸಾಚಾರ ಪ್ರಚೋದನೆಗೆ ಅವಕಾಶವಾಗಿ ದುರ್ಬಳಕೆ ಮಾಡಲಾಗುತ್ತಿದೆ. ಅಧಿಕಾರಿಗಳು ಮತ್ತು ಪೊಲೀಸರು ಹಿಂಸಾಚಾರ ತಡೆಯಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಅದಕ್ಕೆ ಬದಲಾಗಿ ಕೆಲವೊಂದು ಸನ್ನಿವೇಶಗಳಲ್ಲಿ ಅವರು ಗುಂಪಿಗೆ ನೆರವು  ಮತ್ತು ಕುಮ್ಮಕ್ಕು ನೀಡಿರುವುದು ಬೆಳಕಿಗೆ ಬಂದಿದೆ. ಇದೇ ವೇಳೆ ಹಿಂಸಾಚಾರ ಪ್ರಚೋದಕರ ವಿರುದ್ಧ ಕಾರ್ಯಾಚರಣೆ ನಡೆಸುವ ಬದಲು ಪೊಲೀಸರು ವೃದ್ಧ ಮಹಿಳೆಯರು ಮತ್ತು ಅಪ್ರಾಪ್ತರು ಸಹಿತ ಅಮಾಯಕ ಮುಸ್ಲಿಮರಿಗೆ ಕಿರುಕುಳ ನೀಡುತ್ತಿರುವ ಆಘಾತಕಾರಿ ವರದಿಗಳೂ ಹೊರಬರುತ್ತಿವೆ ಎಂದು ಅವರು ತಿಳಿಸಿದ್ದಾರೆ.

ಖರ್ಗೋನ್, ಮಧ್ಯ ಪ್ರದೇಶದಲ್ಲಿ ಹಿಂಸಾಚಾರ ನಡೆದ ಬಳಿಕ ಪೊಲೀಸರು ಸಂಶಯಾಸ್ಪದ ಗಲಭೆಕೋರರು ಎಂದು ಪ್ರತಿಪಾದಿಸಿ, ಯಾವುದೇ ಕಾನೂನು ಪ್ರಕ್ರಿಯೆ ನಡೆಸದೇ ಮುಸ್ಲಿಮರ ಹಲವಾರು ಮನೆಗಳು ಮತ್ತು ಮಸ್ಜಿದ್ ಸೊತ್ತುಗಳನ್ನು ಧ್ವಂಸಗೊಳಿಸಿದ್ದಾರೆ. ಯಾವುದೇ ನಾಗರಿಕನ ಮೂಲಭೂತ ಹಕ್ಕಾಗಿರುವ ಕಾನೂನು ಪ್ರಕ್ರಿಯೆಯನ್ನೂ ಮುಸ್ಲಿಮರಿಗೆ ನಿರಾಕರಿಸಲಾಗಿದೆ. ಈಗ ನಡೆಯುತ್ತಿರುವುದು ಕೇವಲ ಕೋಮು ಸಂಘರ್ಷವಲ್ಲ. ಬದಲಿಗೆ ಇದು ಹಿಂದುತ್ವ ಗೂಂಡಾಗಳಿಂದ ಮುಸ್ಲಿಮರ ವಿರುದ್ಧ ನಡೆಯುತ್ತಿರುವ ಪೂರ್ವಯೋಜಿತ ದಾಳಿಯಾಗಿದೆ. ಎಲ್ಲೆಡೆಯೂ ಒಂದೇ ತೆರನಾದ ವಿಧಾನವನ್ನು ಅನುಸರಿಸಲಾಗಿದೆ; ಮುಸ್ಲಿಮ್ ಬಾಹುಳ್ಯವಿರುವ ಪ್ರದೇಶಗಳ ಮೂಲಕ ರಾಲಿಗಳನ್ನು ಸಾಗಿಸಲಾಗಿದೆ, ಆಕ್ಷೇಪಾರ್ಹ ಹಾಡು ಮತ್ತು ಘೋಷಣೆಗಳನ್ನು ಕೂಗಲಾಗಿದೆ ಮತ್ತು ಸಮುದಾಯವನ್ನು ಪ್ರಚೋದಿಸಲಾಗಿದೆ. ಈ ಬೆಳವಣಿಗೆಗಳ ಕುರಿತು ಜಾತ್ಯತೀತ ಪ್ರಜಾಸತ್ತಾತ್ಮಕ ಶಕ್ತಿಗಳ ಮೌನ ಮತ್ತು ನಿಷ್ಕ್ರಿಯತೆ ನಿರಾಶದಾಯಕವಾಗಿದೆ ಮತ್ತು ಈ ಪ್ರತಿಕ್ರಿಯೆ ಕೊರತೆಯಿಂದಾಗಿ ಹಿಂದುತ್ವ ಶಕ್ತಿಗಳು ಉತ್ತೇಜಿತಗೊಂಡಿವೆ. ದೇಶವು ಶಾಂತಿ ಹಾಗೂ ಸಹಬಾಳ್ವೆಯ ನಾಡು ಆಗಿ ಉಳಿಯಬೇಕಾದರೆ ಈ ಹಿಂದುತ್ವ ಗೂಂಡಾಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಮತ್ತು ರಾಜ್ಯ ಸರಕಾರಗಳು ಅವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒ.ಎಂ.ಎ.ಸಲಾಂ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ

Join Whatsapp
Exit mobile version