ಸಾಗುವಳಿ ಚೀಟಿಯಿದ್ದರೂ ಪಹಣಿ ನೀಡದ್ದರಿಂದ ನೊಂದು ಕೂಲಿ ಕಾರ್ಮಿಕ ಆತ್ಮಹತ್ಯೆ

Prasthutha|

ಬೆಂಗಳೂರು: ಕೆರೆಗೆ ಹಾರಿ ಕೂಲಿ ಕಾರ್ಮಿಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನೆಲಮಂಗಲ ತಾಲೂಕಿನ ಸೋಂಪುರ ಹೋಬಳಿಯ ದೇವರಹೊಸಹಳ್ಳಿಯಲ್ಲಿ ನಡೆದಿದೆ.

- Advertisement -

ತುಮಕೂರು ಜಿಲ್ಲೆಯ ಗುಬ್ಬಿಯ ಜಯಪ್ರಕಾಶ್ (39) ಆತ್ಮಹತ್ಯೆ ಮಾಡಿಕೊಂಡವರು. ಗ್ರಾನೈಟ್ ಕೆಲಸ ನಿರ್ವಹಿಸುತ್ತಾ ಜೀವನ ಸಾಗಿಸುತ್ತಿದ್ದ ಜಯಪ್ರಕಾಶ್ ಜೀವನ ನಿರ್ವಹಣೆಗಾಗಿ ಸಣ್ಣ ಪುಟ್ಟ ಸಾಲ ಮಾಡಿಕೊಂಡಿದ್ದ. ಜೊತೆಗೆ ಗೋಮಾಳದಲ್ಲಿ ಜಮೀನು ಸಾಗುವಳಿ ಮಾಡಿಕೊಂಡು ಬಂದಿದ್ದು, ಸಾಗುವಳಿ ಚೀಟಿ ಸಹ ನೀಡಲಾಗಿತ್ತು.

ಆದರೆ ಅದರ ಪಹಣಿ ಇನ್ನು ಆತನ ಹೆಸರಿಗೆ ಬಂದಿರಲಿಲ್ಲ. ಈ ಬಗ್ಗೆ ತೀವ್ರವಾಗಿ ನೊಂದಿದ್ದ ಜಯಪ್ರಕಾಶ್, ಡೆತ್ ನೋಟ್ ಬರೆದಿಟ್ಟು ತಮ್ಮ ಮನೆದೇವರಾದ ದೇವರ ಹೊಸಹಳ್ಳಿಯ ವೀರಭದ್ರ ಸ್ವಾಮಿಯ ಗ್ರಾಮದಲ್ಲಿರುವ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

- Advertisement -

ಡೆತ್ ನೋಟ್‌ನಲ್ಲಿ ನನ್ನ ಅಂತ್ಯಸಂಸ್ಕಾರಕ್ಕೆ ಗುಬ್ಬಿ ಶಾಸಕ ವಾಸು ಬರಬೇಕು ಹಾಗೂ ನನ್ನ ಕುಟುಂಬಕ್ಕೆ ಸಹಾಯ ಮಾಡಬೇಕೆಂದು ಬರೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಡಾಬಸ್ಪೇಟೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮೃತದೇಹವನ್ನು ಹೊರ ತೆಗೆಯುವಲ್ಲಿ ತುಮಕೂರು ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಹಾಗೂ ಸಿಬ್ಬಂದಿ ಹರಸಾಹಸಪಟ್ಟರು. ಡಾಬಸ್ ಪೇಟೆಯ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ಮೃತ ದೇಹವನ್ನು ಸಾಗಿಸಿದ್ದಾರೆ. ಸ್ಥಳಕ್ಕೆ ಡಾಬಸ್ ಪೇಟೆ ಠಾಣೆಯ ಇನ್ಸ್’ಪೆಕ್ಟರ್ ರವಿ.ಎಸ್, ಆರಕ್ಷಕ ಉಪ ನಿರೀಕ್ಷಕರಾದ ಮಂಗಳಮ್ಮ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Join Whatsapp