ಉತ್ತರ ಪ್ರದೇಶ : ದೇವಸ್ಥಾನದ ಕಾಮಗಾರಿ ನಡೆಸಿ ಸಂಬಳ ಪಡೆಯಲು ಹೋದ ಮುಸ್ಲಿಮ್ ಕಾರ್ಮಿಕ ಬಾಲಕನ ಕೈ ಕಾಲು ಕಟ್ಟಿ ಹಾಕಿ ಹಲ್ಲೆ !

Prasthutha|

► ಬಾಲಕನ ಮೇಲೆ ಮೊಬೈಲ್ ಕಳ್ಳತನದ ಆರೋಪ ಹೊರಿಸಿದ ಗುಂಪು !

- Advertisement -

ಯೋಗಿ ಆದಿತ್ಯನಾಥ್ ಆಡಳಿತದ ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ತೀರಾ ಹದೆಗೆಟ್ಟಿದೆ ಎಂದು ಮುಂಚೂಣಿ ಮಾಧ್ಯಮಗಳು ವರದಿ ಮಾಡುತ್ತಿರುವ ಬೆನ್ನಿಗೆ ಅಲ್ಲಿನ ಅಲ್ಪ ಸಂಖ್ಯಾತ ಸಮುದಾಯದ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಲೇ ಸಾಗಿದೆ. ಇತ್ತೀಚೆಗೆ ದೇವಸ್ಥಾನ ಪ್ರವೇಶಿಸಿದ ಆರೋಪದಲ್ಲಿ ಬಾಲಕನೋರ್ವನ ಮೇಲೆ ಮತಾಂಧ ಯುವಕನೋರ್ವ ಕ್ರೌರ್ಯ ಮೆರೆದಿದ್ದ. ಅದರ ಬೆನ್ನಿಗೇ ಇದೀಗ ಅಂತಹದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಯಮುನಾ ನಗರದ ಸಮೀಪದಲ್ಲಿರುವ ಟಿಟಿ ಚೌಕ್ ಎನ್ನುವಲ್ಲಿ ದೇವಸ್ಥಾನವೊಂದರ ಕಾಮಗಾರಿ ಕಾರ್ಯ ನಡೆಯುತ್ತಿತ್ತು. ಅಲ್ಲಿ ದಿನಗೂಳಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ದಾನಿಶ್ ಎನ್ನುವ ಬಾಲಕನನ ಮೇಲೆ ಮತಾಂಧರು ಸಂಬಳ ನೀಡುತ್ತೇನೆ ಎಂದು ಕರೆಸಿ ಕೈ ಕಾಲುಗಳನ್ನು ಕಟ್ಟಿ ಹಾಕಿ ಪೈಪಿನಿಂದ ಥಳಿಸಿ ಹಲ್ಲೆ ನಡೆಸಿ ಪೈಶಾಚಿಕತೆ ಮೆರೆದಿದ್ದಾರೆ.  ಪ್ರಕರಣ ಬೆಳಕಿಗೆ ಬಂದ ನಂತರ ಬಾಲಕನ ಮೇಲೆ ಮೊಬೈಲ್ ಕಳ್ಳತನದ ಆರೋಪ ಹೊರಿಸಿದ್ದಾರೆ.

ಮಗನನ್ನು ಕಟ್ಟಿ ಹಾಕಿ ಥಳಿಸುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದ ತಂದೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ ದೇವಸ್ಥಾನದ ಪರಿಸರಕ್ಕೆ ಆಗಮಿಸಿ ನಂತರ ಆತನನ್ನು ಬಂಧನದಿಂದ ಮುಕ್ತಗೊಳಿಸಲಾಗಿದೆ. ಬಾಲಕ ದಾನಿಶ್ ನೀಡಿದ ಮಾಹಿತಿಯಂತೆ ಮತಾಂಧರನ್ನು ಶೈಲೇಂದ್ರ ವರ್ಮಾ ಮತ್ತು ವಕೀಲ್ ವರ್ಮಾ ಎಂದು ಗುರುತಿಸಲಾಗಿದೆ.

- Advertisement -

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಬಾಲಕ ದಾನಿಶ್, “ನನ್ನೊಂದಿಗೆ ದೇವಸ್ಥಾನದ ಕೆಲಸದ ಸಂಬಳ ಎಷ್ಟಾಗಿದೆ ಎಂದು ಕೇಳಿದರು. ನಾನು ಸಂಬಳದ ವಿವರ ನೀಡಿದ ನಂತರ ಕೊಡುತ್ತೇನೆ, ಒಳಗೆ ಬಾ ಎಂದು ಕರೆದಿದ್ದಾರೆ. ಅಲ್ಲಿ ನನ್ನ ಹೆಸರು ದಾನಿಶ್ ಎಂದು ತಿಳಿಸಿದಾಗ, ನೀನು ಮುಸ್ಲಿಮನೇ ಎಂದು ಕೇಳಿ ಬಾಗಿಲು ಹಾಕಿ ನನ್ನ ಕೈ ಕಾಲುಗಳನ್ನು ಹಗ್ಗದಿಂದ ಕಟ್ಟಿ ಹಾಕಿ ನನ್ನ ಮೇಲೆ ಪೈಪಿನಿಂದ ಹಲ್ಲೆ ನಡೆಸಲಾಯಿತು” ಎಂಬ ಮಾಹಿತಿ ನೀಡಿದ್ದಾನೆ.  ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Join Whatsapp