ಕುಶಾಲನಗರ | ಚಿನ್ನಾಭರಣ, ದ್ವಿಚಕ್ರ ವಾಹನ ಕಳ್ಳತನದ ಆರೋಪಿ ಬಂಧನ

Prasthutha|

ಮಡಿಕೇರಿ: ಚಿನ್ನಾಭರಣ ಹಾಗೂ ದಂಡಿನಪೇಟೆಯಲ್ಲಿ ನಡೆದ ದ್ವಿಚಕ್ರ ವಾಹನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಳ್ಳನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕುಶಾಲನಗರ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಬಸವೇಶ್ವರ ಬಡಾವಣೆ, ಕಾವೇರಿ ಬಡಾವಣೆಯಲ್ಲಿ ನಡೆದ ಚಿನ್ನಾಭರಣ ಕಳ್ಳತನ, ಮನೆಗಳ್ಳತನ ಹಾಗೂ ವಾಹನ ಕಳವು ಪ್ರಕರಣದ ಆರೋಪಿಯನ್ನು ಬಂಧಿಸಲಾಗಿದೆ.

- Advertisement -

ಆರೋಪಿ ಕುಶಾಲನಗರದ ವ್ಯಕ್ತಿಯಾಗಿದ್ದು, ಆರೋಪಿಯಿಂದ 2 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು ಹಾಗೂ 1.10 ಲಕ್ಷ ರೂ ಮೌಲ್ಯದ ಎರಡು ದ್ವಿಚಕ್ರ ವಾಹನಗಳನ್ನು ಕುಶಾಲನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.ನಗರದ ಬಡಾವಣೆಗಳಲ್ಲಿ ಬೀಗ ಹಾಕಿರುವ ಮನೆಗಳನ್ನು ಗಮನಿಸಿ ಕಳ್ಳತನ ಮಾಡಿರುವ 2 ಪ್ರಕರಣಗಳು ಹಾಗೂ ಮನೆಯ ಮುಂಭಾಗ ಬೀಗ ಹಾಕದೇ ನಿಲ್ಲಿಸಿರುವ ವಾಹನ ಕಳವು ಪ್ರಕರಣ ದಾಖಲಾಗಿತ್ತು.

ನ.10ರಂದು ರಾತ್ರಿ ಗಸ್ತಿನಲ್ಲಿದ್ದ ಎಎಸ್‌ಐ ಮಂಜುನಾಥ ಹಾಗೂ ಸಿಬ್ಬಂದಿ ಅರುಣ್ ಕುಮಾರ್ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿಯ ನಡೆಯ ಬಗ್ಗೆ ಸಂಶಯ ವ್ಯಕ್ತವಾಗಿ ತೀವ್ರ ತಪಾಸಣೆ ನಡೆಸಿದ್ದಾರೆ. ಈ ವೇಳೆ ಆರೋಪಿಯ ವಾಹನದಲ್ಲಿ ಮನೆಗಳ್ಳತನ ಮಾಡುವ ಆಯುಧಗಳು ಪತ್ತೆಯಾಗಿದ್ದು ಪೊಲೀಸರು ವಿಷಾರಣೆ ನಡೆಸಿದಾಗ ಕಳ್ಳತನದ ಮೂರು ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

- Advertisement -

ಆರೋಪಿಯು ಕುಶಾಲನಗರದ ಮೂಲದವನೇ ಆಗಿದ್ದು, ತನಿಖೆಯು ಪ್ರಗತಿಯಲ್ಲಿರುವುದರಿಂದ ಹೆಸರನ್ನು ಬಹಿರಂಗ ಗೊಳಿಸುತ್ತಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.

Join Whatsapp
Exit mobile version