ನಿಲ್ಲದು ಸಾರಿಗೆ ನೌಕರರ ಮುಷ್ಕರ; ನಾಳೆಯೂ KSRTC, BMTC ಬಂದ್? | ಸಚಿವ ಸವದಿ ವಿರುದ್ಧ ಭುಗಿಲೆದ್ದಿತು ಆಕ್ರೋಶ

Prasthutha|

ಬೆಂಗಳೂರು : ಸಾರಿಗೆ ನೌಕರರ ಪ್ರತಿಭಟನೆ ಅನಿರ್ದಿಷ್ಟಾವಧಿ ಮುಂದುವರಿಯಲಿದೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ. ಇಂದು ಮಧ್ಯಾಹ್ನ ಪತ್ರಿಕಾಗೋಷ್ಠಿ ನಡೆಸಿದ ಅವರು, ನೌಕರರ ಪ್ರತಿಭಟನೆಯ ಬೆಳವಣಿಗೆಗಳ ಕುರಿತು ಮಾಹಿತಿ ನೀಡಿದ್ದಾರೆ.

- Advertisement -

ಎಷ್ಟು ಜನರ ಮೇಲೆ ಎಸ್ಮಾ ಜಾರಿಗೊಳಿಸುತ್ತೀರಿ? ಎಷ್ಟು ಜನರನ್ನು ಅಮಾನತುಗೊಳಿಸುತ್ತೀರಿ? ಪ್ರತಿಭಟನೆ ಅನಿರ್ದಿಷ್ಟಾವಧಿ ಮುಂದುವರಿಯುತ್ತದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ. ಸಾರಿಗೆ ನೌಕರರ ಬೇಡಿಕೆಗಳು ಈಡೇರುವವರೆಗೆ ಪ್ರತಿಭಟನೆಗೆ ರೈತ ಸಂಘಟನೆಗಳು ಸೇರಿದಂತೆ, ಇತರ ವಿವಿಧ ಸಂಘಟನೆಗಳು ಬೆಂಬಲ ನೀಡಲಿವೆ ಎಂದು ಅವರು ಹೇಳಿದ್ದಾರೆ.  

ಮುಷ್ಕರಕ್ಕೆ ಕರೆಕೊಟ್ಟ ರೈತ ಮುಖಂಡರನ್ನು ಆಹ್ವಾನಿಸದೆ ಸಾರಿಗೆ ಸಚಿವರು ಬೇರೆ ಮುಖಂಡರನ್ನು ಕರೆದು ಮಾತುಕತೆ ಮಾಡಲು ಮುಂದಾಗಿರುವ ಹಿನ್ನೆಲೆಯಲ್ಲಿ, ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ನೌಕರ ಮುಖಂಡರ ಸಭೆ ನಡೆದಿದೆ. ಸಭೆ ಮುಗಿದ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಮುಖಂಡರು ಪ್ರತಿಭಟನೆ ಮುಂದುವರಿಸಲು ನೌಕರರಿಗೆ ಕರೆ ನೀಡಿದ್ದಾರೆ.

- Advertisement -

ತಮ್ಮನ್ನು ಸರಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂದು ಸಾರಿಗೆ ನೌಕರರು ನಡೆಸುತ್ತಿರುವ ಪ್ರತಿಭಟನೆ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದ್ದು, ನಾಳೆಯೂ ಮುಂದುವರಿಯುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ.

ಸಾರಿಗೆ ನೌಕರರು ನಿನ್ನೆ ಪ್ರತಿಭಟನೆ ನಡೆಸುವಾಗ ಸ್ಥಳಕ್ಕೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಭೇಟಿ ನೀಡಿದ್ದರೆ ಇಂದು ಸಮಸ್ಯೆ ಉಲ್ಬಣಿಸುತ್ತಿರಲಿಲ್ಲ. ಇನ್ನೊಂದೆಡೆ, ಪ್ರತಿಭಟನೆ ನಿರತ ಕಾರ್ಮಿಕ ಮುಖಂಡರನ್ನು ವಶಕ್ಕೆ ಪಡೆದಿರುವುದೂ ನೌಕರರನ್ನು ಆಕ್ರೋಶಕ್ಕೀಡು ಮಾಡಿದೆ. ಇಂದು ಕೂಡ ಬೇಜವಾಬ್ದಾರಿಯಿಂದ ವರ್ತಿಸಿರುವ ಸಚಿವ ಸವದಿ, ಮುಷ್ಕರಕ್ಕೆ ಕರೆಕೊಟ್ಟ ರೈತ ಮುಖಂಡರನ್ನು ಮಾತಿಗೆ ಕರೆಯದೆ ಬೇರೆ ಮುಖಂಡರನ್ನು ಕರೆದಿರುವುದು ನೌಕರರ ಆಕ್ರೋಶ ಇನ್ನಷ್ಟು ಹೆಚ್ಚಲು ಕಾರಣವಾಗಿದೆ.

Join Whatsapp