ಜನತೆಗೆ ಕೋವಿಡ್ ಲಸಿಕೆ ನೀಡಲು ಅನುಮತಿ ನೀಡುವಂತೆ KPCC ಆನ್‌ಲೈನ್ ಅಭಿಯಾನ

Prasthutha|

ಬೆಂಗಳೂರು : ಜನರಿಗೆ ಲಸಿಕೆ ನೀಡಲು ಸರಕಾರ ವಿಫಲವಾಗಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ಪಕ್ಷದ ಸಂಸದರು ಮತ್ತು ಶಾಸಕರ ಕ್ಷೇತ್ರಾಭಿವೃದ್ದಿ ನಿಧಿ ಬಳಸಿಕೊಂಡು ಲಸಿಕೆ ಖರೀದಿಸಿ ವಿತರಣೆಗೆ ನಿರ್ಧರಿಸಿದೆ. ಲಸಿಕೆಯ ಮಹತ್ವವನ್ನು ಜನರಿಗೆ ಮನವರಿಕೆ ಮಾಡಿಕೊಡುವುದು ಹಾಗೂ ಈ ಕಾರ್ಯಕ್ಕೆ ಕಾಂಗ್ರೆಸ್ಪಕ್ಷದ ಶಾಸಕರ ನಿಧಿ ಬಳಕೆ ಮಾಡಿಕೊಳ್ಳಲು ಅನುಮತಿ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಸೃಷ್ಟಿಸುವುದು ಈ ಅಭಿಯಾನದ ಉದ್ದೇಶವಾಗಿದೆ.

- Advertisement -


ಜನರನ್ನು ಕೋವಿಡ್ ನಿಂದ ಪಾರು ಮಾಡಲು ಅಗತ್ಯವಾದ ಲಸಿಕೆ ಖರೀದಿಸಿ, ನೀಡಲು ಸರ್ಕಾರ ವಿಫಲವಾಗಿರುವುದನ್ನು ಪ್ರಸ್ತಾಪಿಸಿ ಈ ಆಭಿಯಾನದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ವಿಡಿಯೋ ಸಂದೇಶಗಳನ್ನು ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ರಾದ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಹಾಗೂ ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ಸಚಿವರಾದ ಆರ್.ವಿ.ದೇಶಪಾಂಡೆ, ಪ್ರಿಯಾಂಕ್ ಖರ್ಗೆ, ಶರಣ್ ಪ್ರಕಾಶ್ ಪಾಟೀಲ್, ಶಾಂತಿನಗರ ಕ್ಷೇತ್ರದ ಶಾಸಕ ಎನ್.ಎ.ಹ್ಯಾರೀಸ್, ವಿಧಾನ ಪರಿಷತ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್, ವಿ.ಎಸ್.ಉಗ್ರಪ್ಪ ಅವರುಗಳು ಅಬಿಯಾನದ ಭಾಗವಾಗಿ ವಿಡಿಯೋ ಸಂದೇಶ ನೀಡಿದ್ದಾರೆ.


ಅಭಿಯಾನ ಆರಂಭವಾದ ಮೊದಲ ದಿನವೇ 20 ಸಾವಿರಕ್ಕೂ ಅಧಿಕ ಮಂದಿ ತಮ್ಮ ಬೆಂಬಲ ಸೂಚಿಸಿ, ಟ್ವಿಟರ್ ಮತ್ತು ಫೇಸ್‌ಬುಕ್‌ ನಲ್ಲಿ ವಿಡಿಯೋಗಳನ್ನು ಶೇರ್ ಮಾಡಿದ್ದಾರೆ. ಸಾರ್ವಜನಿಕರಿಗೆ ಅಗತ್ಯವಾದ ಲಸಿಕೆ ಖರೀದಿಸಿ, ಲಸಿಕೆ ಹಾಕಿಸಲು ಕಾಂಗ್ರೆಸ್ ಪಕ್ಷಕ್ಕೆ ಅವಕಾಶ ನೀಡುವಂತೆ ಸಾವಿರಾರು ಮಂದಿ ಸರಕಾರವನ್ನು ಆಗ್ರಹಿಸಿದ್ದಾರೆ. 100 ಕೋಟಿ ರೂ. ವೆಚ್ಚದಲ್ಲಿ ಲಸಿಕೆ ಖರೀದಿಸಿ, ಜನರಿಗೆ ಲಸಿಕೆ ಕೊಡಿಸಲು ಕಾಂಗ್ರೆಸ್ ಪಕ್ಷಕ್ಕೆ ಅವಕಾಶ ನೀಡುವಂತೆ ಕೆಪಿಸಿಸಿ ಅಧ್ಯಕ್ಷ ರಾದ ಡಿ.ಕೆ.ಶಿವಕುಮಾರ್ ಸೋಮವಾರ ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ. ಕೋವಿಡ್ ಸೋಂಕಿನಿಂದ ಪಾರಾಗಲು ಲಸಿಕೆ ತೆಗೆದುಕೊಳ್ಳಬೇಕಾದ ಅಗತ್ಯವನ್ನು ಜನರಿಗೆ ಮನವರಿಕೆ ಮಾಡಿಕೊಡುವಂತೆ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ. ಈ ವಿಚಾರದಲ್ಲಿ ಸರ್ಕಾರದ ವೈಫಲ್ಯವನ್ನು ಜನರಿಗೆ ಮನವರಿಕೆ ಮಾಡಿಕೊಡುವಂತೆ ಸಲಹೆ ಮಾಡಿದ್ದಾರೆ.

- Advertisement -


“ಕಾಂಗ್ರೆಸ್ ಪಕ್ಷ ತನ್ನ ಶಾಸಕರ ನಿಧಿ ಜತೆಗೆ ದೇಣಿಗೆ ಬಳಸಿಕೊಂಡು 100 ಕೋಟಿ ರೂ. ಮೊತ್ತದ ಲಸಿಕೆಯನ್ನು ನೇರವಾಗಿ ಖರೀದಿಸಿ, ಜನರಿಗೆ ಲಸಿಜೆ ಕೊಡಿಸುವ ನಿರ್ಧಾರಕ್ಕೆ ಬದ್ಧವಾಗಿದೆ. ರಾಜ್ಯಕ್ಕೆ ಅಗತ್ಯವಾದ ಲಸಿಕೆ ಪೂರೈಸುವಲ್ಲಿ ಬಿಜೆಪಿ ಸರಕಾರ ವಿಫಲವಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಕೆಪಿಸಿಸಿ ಈ ನಿರ್ಧಾರ ಕೈಗೊಳ್ಳುವುದು ಅನಿವಾರ್ಯವಾಗಿದೆ” ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. “100 ಕೋಟಿ ರೂ. ವೆಚ್ಚದಲ್ಲಿ ಲಸಿಕೆ ಖರೀದಿಸಿ, ನೀಡಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಪದೇಪದೇ ಮನವಿ ಮಾಡಲಾಗಿದೆ. ಅದರೆ, ಸರ್ಕಾರ ಇನ್ನೂ ಅವಕಾಶ ಕೊಟ್ಟಿಲ್ಲ. ಕೆಪಿಸಿಸಿ ಸದುದ್ದೇಶದಿಂದ, ಜನರ ರಕ್ಷಣೆಗಾಗಿ ಈ ಪ್ರಯತ್ನ ನಡೆಸಿದೆ. ಅತ್ಯಂತ ಪಾರದರ್ಶಕವಾಗಿ ಈ ಕೆಲಸ ಮಾಡುತ್ತೇವೆ” ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

“ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ. ಈ ಮಹಾಮಾರಿಯಿಂದ ಜನರನ್ನು ರಕ್ಷಣೆ ಮಾಡಲು ಲಸಿಕೆ ಹಾಕುವುದು ಅನಿವಾರ್ಯ ಎಂಬುದು ಸರ್ವವಿಧಿತ. ಆದರೆ, ಕೇಂದ್ರ ಸರಕಾರದ ಪಕ್ಷಪಾತ ಧೋರಣೆಯಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ಲಸಿಕೆ ಪೂರೈಕೆಯಲ್ಲಿ ಕೊರತೆಯಾಗಿದೆ” ಎಂದು ಮಾಜಿ ಸಿಎಂ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ ಅವರು ತಮ್ಮ ವಿಡಿಯೋದಲ್ಲಿ ಕಿಡಿಕಾರಿದ್ದಾರೆ.
“ಲಸಿಕೆಗೆ ಅವಕಾಶ ಕೊಡಿ” – ಕೆಪಿಸಿಸಿ ಯ ಈ ಅಭಿಯಾನಕ್ಕೆ ರಾಜ್ಯದ ಎಲ್ಲ 31 ಜಿಲ್ಲೆಗಳಲ್ಲೂ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ.

Join Whatsapp