Home ಟಾಪ್ ಸುದ್ದಿಗಳು ಕೋಟಿ ಕಂಠ ಗಾಯನ ಕಾರ್ಯಕ್ರಮ: ಕರ್ನಾಟಕಕ್ಕೆ ಭವ್ಯ ಭವಿಷ್ಯ ನಿರ್ಮಿಸುವ ಸಂಕಲ್ಪ – ಮುಖ್ಯಮಂತ್ರಿ ಬೊಮ್ಮಾಯಿ

ಕೋಟಿ ಕಂಠ ಗಾಯನ ಕಾರ್ಯಕ್ರಮ: ಕರ್ನಾಟಕಕ್ಕೆ ಭವ್ಯ ಭವಿಷ್ಯ ನಿರ್ಮಿಸುವ ಸಂಕಲ್ಪ – ಮುಖ್ಯಮಂತ್ರಿ ಬೊಮ್ಮಾಯಿ

ಬೆಂಗಳೂರು: ಕೋಟಿ ಕಂಠ ಗಾಯನ ಕಾರ್ಯಕ್ರಮದ ಮೂಲಕ ತಾಯಿ ಭುವನೇಶ್ವರಿಗೆ ಗೌರವ ಸಮರ್ಪಿಸಲಾಗಿದ್ದು, ಕರ್ನಾಟಕಕ್ಕೆ ಭವ್ಯ ಭವಿಷ್ಯವನ್ನು ನಿರ್ಮಿಸುವ ಸಂಕಲ್ಪ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಕಂಠೀರವ ಸ್ಟೇಡಿಯಂ ನಲ್ಲಿ ಕೋಟಿ ಕಂಠ ಗಾಯನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

ಇಂದು ಕರ್ನಾಟಕ ಕನ್ನಡಮಯವಾಗಿದೆ. ಇಂದು ಕರ್ನಾಟಕ ನಾಡಿಗೆ ಒಂದು ಅಮೃತ ಘಳಿಗೆ. ಒಂದು ಕೋಟಿಗಿಂತ ಹೆಚ್ಚು ಜನ ಏಕಕಾಲದಲ್ಲಿ ಕನ್ನಡದ 6 ಪ್ರಸಿದ್ಧ, ಅರ್ಥಗರ್ಭಿತ ಹಾಡುಗಳನ್ನು ಹಾಡುವ ಮೂಲಕ ಎಲ್ಲ ಕನ್ನಡಿಗರ ಮನಸ್ಸು ಒಂದಾಗಿದೆ. ಎಲ್ಲವನ್ನೂ ಮರೆತು ಕನ್ನಡಕ್ಕಾಗಿ ಒಂದಾಗಬೇಕೆಂಬ ಹಂಬಲ ಈ ಹಾಡುಗಳಲ್ಲಿದ್ದು, ಇದನ್ನು ಕನ್ನಡಿಗರು ಅಕ್ಷರಶ: ಸತ್ಯ ಮಾಡಿದ್ಧಾರೆ. ಈ ಹಾಡುಗಳ ಗಾಯನ ಜಾಗತಿಕ ದಾಖಲೆಯನ್ನು ಸೃಷ್ಟಿಸಿದೆ. ಹಳ್ಳಿಹಳ್ಳಿಗಳಲ್ಲೂ ಕನ್ನಡದ ಹಾಡುಗಳು ಮೊಳಗಿವೆ. ನಮ್ಮ ನಾಡು ಇಂದು ಕನ್ನಡಮಯವಾಗಿದೆ. ಈ ಮೂಲಕ ತಾಯಿ ಭುವನೇಶ್ವರಿಗೆ ಗೌರವ ಸಮರ್ಪಣೆ ಮಾಡಿದ್ದೇವೆ.. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಡೆದ ಈ ಕಾರ್ಯಕ್ರಮ ಅಚ್ಚುಕಟ್ಟಾಗಿ, ಶಿಸ್ತುಬದ್ಧವಾಗಿ ಮೂಡಿಬಂದಿದೆ ಎಂದು ಹರ್ಶಿಸಿದರು.

ನವಕರ್ನಾಟಕದಿಂದ ನವಭಾರತ ನಿರ್ಮಾಣದ ಸಂಕಲ್ಪವನ್ನು ಮಾಡಲಾಗಿದೆ. ಈ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಎಲ್ಲ ಕನ್ನಡಿಗರಿಗೂ ಅಭಿನಂದನೆಗಳನ್ನು ಮುಖ್ಯಮಂತ್ರಿಗಳು ಸಲ್ಲಿಸಿದರು.
ಡಾ. ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ: ಡಾ. ಪುನೀತ್ ರಾಜ್ ಕುಮಾರ್ ನಮ್ಮನ್ನಗಲಿ ಒಂದು ವರ್ಷವಾಗಿದೆ. ಕನ್ನಡ ನಾಡು ನುಡಿಗೆ ಅವರ ಕೊಡುಗೆ, ಜನಮಾನಸದಲ್ಲಿ ಅವರಿಗಿರುವ ಗೌರವವನ್ನು ಪರಿಗಣಿಸಿ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ನವೆಂಬರ್ 1 ರಂದು ನೀಡಲಾಗುವುದು. ಕಿರಿಯ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದ ಪುನೀತ್ ರಿಗೆ ಪ್ರಶಸ್ತಿ ಪ್ರದಾನ ಮಾಡುವ ಕ್ಷಣವನ್ನು ಆನಂದಿಸಲು ಎಲ್ಲರೂ ಕಾರ್ಯಕ್ರಮಕ್ಕೆ ಆಗಮಿಸಬೇಕು ಎಂದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶ್ರೀ ರಜನೀಕಾಂತ ಅವರನ್ನು ಕೋರಲಾಗಿದ್ದು, ಇಂದು ಅವರು ಸಹಮತಿಯನ್ನು ಸೂಚಿಸುವ ಸಾಧ್ಯತೆ ಇದೆ. ಜ್ಞಾನಪೀಠ ಪ್ರಶಸ್ತಿ ವಿಜೇತ ಶ್ರೀ ಚಂದ್ರಶೇಖರ ಕಂಬಾರ ಅವರು, ಡಾ. ರಾಜ್ ಕುಮಾರ್ ಕುಟುಂಬ ಸದಸ್ಯರು ಸೇರಿದಂತೆ ಎಲ್ಲ ಗಣ್ಯರು ಸಾಹಿತಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದರು.

ಗಂಧದ ಗುಡಿ- ರಾಜ್ಯದ ಅರಣ್ಯ ಸಂಪತ್ತನ್ನು ಪರಿಚಯಿಸುವ ಅದ್ಭುತ ಚಿತ್ರ:

ಗಂಧದ ಗುಡಿ ಚಿತ್ರ ಬಿಡುಗಡೆಯಾಗಿದ್ದು, ಇದೊಂದು ಕಾಡು ಹಾಗೂ ನಾಡನ್ನು ಜೋಡಿಸುವ ಚಿತ್ರವಾಗಿದೆ. ನಿಸರ್ಗ ಉಳಿಸುವ ಬಗ್ಗೆ ಜಾಗೃತಿ ಹಾಗೂ ಕರ್ನಾಟಕದ ಅರಣ್ಯ ಸಂಪತ್ತಿನ ಪರಿಚಯಿಸುವ ಅದ್ಭುತ ಚಿತ್ರವಾಗಿದೆ. ಈ ಚಿತ್ರವನ್ನು ಎಲ್ಲರೂ ತಪ್ಪದೇ ವೀಕ್ಷಿಸಿ ಕನ್ನಡ ನಾಡಿನ ಸಸ್ಯ ಸಂಪತ್ತಿನ ಬಗ್ಗೆ ತಿಳಿಯಬೇಕೆಂದು ಮುಖ್ಯಮಂತ್ರಿಗಳು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಡಿ.ವಿ. ಸದಾನಂದಗೌಡ, ಸಚಿವರಾದ ಆರ್. ಅಶೋಕ, ವಿ. ಸುನಿಲ್ ಕುಮಾರ್ , ಸಂಸದರಾದ ಪಿ.ಸಿ. ಮೋಹನ್, ತೇಜಸ್ವಿ ಸೂರ್ಯ, ರಾಜ್ಯಸಭಾ ಸದಸ್ಯ ಜಗ್ಗೇಶ್ ಹಾಗೂ ಸಾವಿರಾರು ಜನ ವಿದ್ಯಾರ್ಥಿಗಳು, ಕಲಾವಿದರು ಪಾಲ್ಗೊಂಡಿದ್ದರು.

Join Whatsapp
Exit mobile version