ಹೆಚ್ಚಿನವರಿಗೆ ತಂಡದ ಮೇಲೆ ಭರವಸೆಯಿಲ್ಲ: ಆರ್.ಸಿ.ಬಿ ನಾಯಕ ವಿರಾಟ್ ಕೊಹ್ಲಿ

Prasthutha|

ಅಬುಧಾಬಿ: ಹೆಚ್ಚಿನ ಜನರು ರೋಯಲ್ ಚಾಲೆಂಜರ್ಸ್ ಬೆಂಗಳೂರಿನ (ಆರ್.ಸಿ.ಬಿ) ಸಾಮರ್ಥ್ಯದ ಮೇಲೆ ನಂಬಿಕೆಯನ್ನು ಹೊಂದಿಲ್ಲ. ಆದರೆ ನಮ್ಮೆಲ್ಲಾ ಆಟಗಾರರು ಅಗತ್ಯ ಆತ್ಮವಿಶ್ವಾಸವನ್ನು ಹೊಂದಿದ್ದಾರೆ ಎಂದು ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಎಂಟು ವಿಕೆಟ್ ಅಂತರದ ಭರ್ಜರಿ ಗೆಲುವಿನ ಬಳಿಕ ಕೊಹ್ಲಿ ಈ ಹೇಳಿಕೆಯನ್ನು ಹೊರಹಾಕಿದ್ದಾರೆ.

- Advertisement -

ಕೆ.ಕೆ.ಆರ್ ವಿರುದ್ಧ ಆರ್.ಸಿ.ಬಿ 39 ಎಸೆತ ಮತ್ತು 8 ವಿಕೆಟ್ ಬಾಕಿಯಿರುವಂತೆ ಗೆಲುವಿನ ದಡ ಸೇರಿತ್ತು. ದೇವದತ್ತ್ ಪಡಿಕ್ಕಲ್ ಮತ್ತು ಗುರ್ಕಿರತ್ ಸಿಂಗ್ ಕ್ರಮವಾಗಿ 25 ಮತ್ತು 21 ರನ್ ಗಳನ್ನು ಬಾರಿಸುವುದರೊಂದಿಗೆ 14ನೆ ಓವರ್ ನಲ್ಲಿ ಆರ್.ಸಿ.ಬಿ ವಿಜಯ ಮಾಲೆ ತೊಟ್ಟಿತು. ಈ ಗೆಲುವಿನೊಂದಿಗೆ ಆರ್.ಸಿ.ಬಿ 10 ಪಂದ್ಯಗಳಲ್ಲಿ 14 ಅಂಕಗಳೊಂದಿಗೆ ಅಂಕಪಟ್ಟಿಯ ಎರಡನೆ ಸ್ಥಾನವನ್ನು ತಲುಪಿದೆ. ಆರಂಭದಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದ ಸಿರಾಜ್ ಮೂರು ವಿಕೆಟ್ ಗಳನ್ನು ಕಿತ್ತು ಕೆ.ಕೆ.ಆರ್ ಅನ್ನು ಸಂಕಷ್ಟಕ್ಕೆ ತಳ್ಳಿದ್ದರು. “ಪ್ರಾಮಾಣಿಕವಾಗಿ ಹೇಳುವುದಾದರೆ ಸಿರಾಜ್ ಗೆ ಹೊಸ ಚೆಂಡು ನೀಡುವುದು ಕೊನೆಯ ಕ್ಷಣದ ನಿರ್ಧಾರವಾಗಿತ್ತು. ವಾಶಿಂಗ್ಟನ್ ಸುಂದರ್ ಗೆ ನೀಡಲು ಆಲೋಚಿಸುತ್ತಿದ್ದೆ. ಫೀಲ್ಡ್ ನಲ್ಲಿ ಮಾಡಬೇಕಾಗಿರುವುದರ ಕುರಿತು ನಾನು ಮೊದಲೇ ಯೋಚಿಸಿರುತ್ತೇನೆ. ಉತ್ತಮ ರೀತಿಯಲ್ಲಿ ವ್ಯವಸ್ಥಾಪನೆಯನ್ನು ಮಾಡಲಾಗಿದೆ. ನಾವು ಪ್ಲ್ಯಾನ್ ಎ, ಪ್ಲ್ಯಾನ್ ಬಿಯನ್ನು ಹೊಂದಿರುತ್ತೇವೆ. ಅದನ್ನು ಆಟಗಾರರು ಕಾರ್ಯರೂಪಕ್ಕೆ ತರುತ್ತಿದ್ದಾರೆ. ಹಾಗಾಗಿ ಇದು ಉತ್ತಮವಾಗಿ ಕಾಣುತ್ತಿದೆ. ಹೆಚ್ಚಿನವರು ಆರ್.ಸಿ.ಬಿಯನ್ನು ನಂಬುತ್ತಾರೆಂದು ನಾನು ಭಾವಿಸುವುದಿಲ್ಲ. ಆದರೆ ಚೇಂಜ್ ರೂಮ್ ನ ಹುಡುಗರಿಗೆ ಆ ಭರವಸೆ ಇದೆ ಮತ್ತು ಅದುವೇ ಮುಖ್ಯವಾಗಿರುವುದು” ಎಂದು ಕೊಹ್ಲಿ ಪಂದ್ಯದ ಬಳಿಕ ಹೇಳಿದರು.

Join Whatsapp