ಎಲ್ಗಾರ್ ಪರಿಷದ್ ಪ್ರಕರಣ | ಕಬೀರ್ ಕಲಾ ಮಂಚ್ ನ ಮೂವರು ಕಲಾವಿದರ ಬಂಧನ

Prasthutha|

ಮುಂಬೈ : ಎಲ್ಗಾರ್ ಪರಿಷದ್ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ಇಲ್ಲಿವರೆಗೆ ಕಬೀರ್ ಕಲಾ ಮಂಚ್ ನ ಮೂವರನ್ನು ಬಂಧಿಸಿದೆ. ಕಬೀರ್ ಕಲಾ ಮಂಚ್ ಅನ್ನು ಭಯೋತ್ಪಾದಕ ಸಂಘಟನೆ ಸಿಪಿಐ-ಮಾವೊವಾದಿಯ ಮುಂಚೂಣಿಯ ಸಂಘಟನೆ ಎಂದು ಎನ್ ಐಎ ಪ್ರತಿಪಾದಿಸಿದೆ.
ಕಬೀರ್ ಕಲಾ ಮಂಚ್ ನ ಕಲಾವಿದರಾದ, ಪುಣೆ ನಿವಾಸಿ ಜ್ಯೋತಿ ಜಗತಾಪ್ (33), ಸಾಗರ್ ಗೋರ್ಖೆ ಮತ್ತು ರಮೇಶ್ ಗೈಚೊರ್ ಮುಂತಾದವರನ್ನು ಎನ್ ಐಎ ಬಂಧಿಸಿದೆ.

- Advertisement -

ಗೊರ್ಖೆ ಮತ್ತು ಗೈಚೋರ್ ಅವರನ್ನು ಎನ್ ಐಎ ವಿಶೇಷ ಕೋರ್ಟ್ ಗೆ ಮಂಗಳವಾರ ಹಾಜರು ಪಡಿಸಲಾಗಿದ್ದು, ನಾಲ್ಕು ದಿನ ಎನ್ ಐಎ ವಶಕ್ಕೆ ಒಪ್ಪಿಸಲಾಗಿದೆ. ಜಗತಾಪ್ ಅವರನ್ನು ಇಂದು ಕೋರ್ಟ್ ಗೆ ಹಾಜರು ಪಡಿಸಲಾಗುತ್ತದೆ.

ಎಲ್ಗಾರ್ ಪರಿಷದ್ ಪ್ರಕರಣಕ್ಕೆ ಸಂಬಂಧಿಸಿ ಪುಣೆಯ ವಿಶ್ರಮ್ ಬಾಗ್ ಪೊಲೀಸ್ ಠಾಣೆಯಲ್ಲಿ ಆರಂಭದಲ್ಲಿ ದಾಖಲಾದ ಎಫ್ ಐಆರ್ ನಲ್ಲಿ ಹೆಸರಿಸಲಾಗಿದ್ದ ಆರು ಮಂದಿಯಲ್ಲಿ ಮೂವರು ಇವರುಗಳಾಗಿದ್ದಾರೆ. 2017ರ ಡಿ.31ರಂದು ಕಬೀರ್ ಕಲಾ ಮಂಚ್ ಕಾರ್ಯಕರ್ತರು ಎಲ್ಗಾರ್ ಪರಿಷದ್ ಸಭೆ ಆಯೋಜಿಸಿದ್ದರು. ಪ್ರಚೋದನಕಾರಿ ಭಾಷಣ ನೀಡಿ, ಜನರನ್ನು ಉದ್ರಿಕ್ತರನ್ನಾಗಿಸುವುದು ಇವರ ಉದ್ದೇಶವಾಗಿತ್ತು. ಈ ಭಾಷಣಗಳ ಪರಿಣಾಮ, 2018, ಜ.1ರಂದು ಭೀಮಾ ಕೋರೆಗಾಂವ್ ಹಿಂಸಾಚಾರ ಸಂಭವಿಸಲು ಕಾರಣ ಎಂಬ ಆರೋಪಗಳಿವೆ.

- Advertisement -

ಗೋರ್ಖೆ, ಗೈಚೋರ್ ಮತ್ತು ಜಗತಾಪ್ ನಕ್ಸಲ್ ಚಟುವಟಿಕೆಗಳಲ್ಲಿ ನಿರತರಾಗಿದ್ದರು ಮತ್ತು ಪ್ರಕರಣದಲ್ಲಿ ಬಂಧಿತರಾದ ಇತರರೊಂದಿಗೆ ಸಂಪರ್ಕದಲ್ಲಿದ್ದರು. ನಗರದ ನಕ್ಸಲರ ಜಾಲಕ್ಕೆ ಸಂಬಂಧಿಸಿದ, ತಲೆ ಮರೆಸಿಕೊಂಡಿರುವ ಆರೋಪಿ ಮಿಲಿಂದ್ ತೇಲ್ತುಂಬ್ಡೆ ಜೊತೆ ಬಂಧಿತ ಆರೋಪಿಗಳಿಗೆ ಸಂಪರ್ಕವಿತ್ತು ಎಂದು ಎನ್ ಐಎ ಆಪಾದಿಸಿದೆ. ಇವರು ಕಾಡುಗಳಿಗೆ ತೆರಳಿದ್ದಾಗ, ಶಸ್ತ್ರಾಸ್ತ್ರ ಬಳಕೆ, ಸ್ಫೋಟಕ ತರಬೇತಿ ಮತ್ತು ಮಾವೊವಾದಿ ಚಳವಳಿಯ ಕುರಿತ ವಿವಿಧ ವಿಷಯಗಳ ಜಾಗೃತಿ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಿದ್ದಾರೆ ಎಂದು ಎನ್ ಐಎ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

Join Whatsapp