ಶಾಲಾ ಬಾಲಕನ ಅಪಹರಣ​: ಅರ್ಧ ಗಂಟೆಯಲ್ಲೇ ಆರೋಪಿಗಳನ್ನು ಬಂಧಿಸಿದ ಪೊಲೀಸರು

Prasthutha|

ಕೋಲಾರ: ಐದು ವರ್ಷದ ಬಾಲಕನನ್ನು ಅಪಹರಣ ಮಾಡಿದ ಆರೋಪಿಗಳನ್ನು ಕೇವಲ ಅರ್ಧ ಗಂಟೆಯಲ್ಲಿ ಬಂಧಿಸಿ, ಪ್ರಕರಣವನ್ನು ಭೇದಿಸಿದ ಪೊಲೀಸರ ಕಾರ್ಯಾಚರಣೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಕೋಲಾರ ತಾಲೂಕಿನ ಅರಹಳ್ಳಿ ಗ್ರಾಮದ ಲೋಕೇಶ್ ಎಂಬುವವರ ಮಗ ಯಶ್ವಿತ್ ಗೌಡನನ್ನು ಇಂದು ಸಂಜೆ 5.30 ರ ಸುಮಾರಿಗೆ ಅಪಹರಣ ಮಾಡಲಾಗಿತ್ತು. ಶಾಲೆಯಿಂದ ಮನೆಗೆ ಬರುವ ವೇಳೆ, ಮನೆ ಬಳಿ ಪಲ್ಸರ್ ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಅಪಹರಣ ಮಾಡಿದ್ದರು.

- Advertisement -

ಸುಪಾರಿ ಕೊಟ್ಟು ಅಪಹರಣ ಮಾಡಲಾಗಿದೆ ಎನ್ನಲಾಗಿದ್ದು, ಇಟ್ಟಿಗೆ ಫ್ಯಾಕ್ಟರಿ ಹಾಗೂ ಎಕ್ಸಿಡಿ ಬ್ಯಾಟರಿ ಡೀಲರ್​ಶೀಪ್​ ಹೊಂದಿರುವ ತಂದೆ ಲೋಕೇಶ್​ರನ್ನು ಬೆದರಿಸುವ ನಿಟ್ಟಿನಲ್ಲಿ ಐದು ವರ್ಷದ ಬಾಲಕನನ್ನು ಅಪಹರಣ ಮಾಡಲಾಗಿತ್ತು. ಕೂಡಲೇ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು, ಶ್ರೀನಿವಾಸಪುರ ಹಾಗೂ ಗಡಿಯ ಆಂದ್ರ ಪ್ರದೇಶದ ಪೊಲೀಸರನ್ನು ಅಪಹರಣ ಪ್ರಕರಣ ಕುರಿತು ಅಲರ್ಟ್​ ಮಾಡಲಾಗಿತ್ತು. ಇನ್ನು ಈ ವೇಳೆ ಅಪಹರಣಾಕಾರರು ಕಿಡ್ನಾಪ್​ ಮಾಡಿಕೊಂಡು ಶ್ರೀನಿವಾಸಪುರ ರಸ್ತೆಯಲ್ಲಿ ಹೋಗಿರುವ ಮಾಹಿತಿ ಸಿಕ್ಕಿತ್ತು.

ಇನ್ನು ಖಚಿತ ಮಾಹಿತಿ ಮೇರೆಗೆ ಅಪಹರಣಕಾರರ ಬೆನ್ನುಬಿದ್ದ ಪೊಲೀಸರು, ತಕ್ಷಣ ಶ್ರೀನಿವಾಸಪುರ ಪೊಲೀಸರನ್ನು ಅಲರ್ಟ್​ ಮಾಡಿದ್ದಾರೆ. ನಂತರ ಶ್ರೀನಿವಾಸಪುರದ ಪಿಎಸ್​ಐ ಈಶ್ವರ್​, ಎಎಸ್​ಐ ಎಂ.ಡಿ.ನಾರಾಯಣಪ್ಪ, ಕೋಲಾರ ಗ್ರಾಮಾಂತರ ಠಾಣಾ ಪೊಲೀಸ್ ಸಿಪಿಐ ಲೋಕೇಶ್​ ಕುಮಾರ್​ ಎಲ್ಲರೂ ತಂಡ ತಂಡವಾಗಿ ಅಪಹರಣಕಾರರ ಬೆನ್ನು ಬಿದ್ದಿದ್ದರು. ಈ ವೇಳೆ ಅಪಹರಣಾಕಾರರು ಶ್ರೀನಿವಾಸಪುರ ತಾಲ್ಲೂಕು ಸೋಮಯಾಜಪಲ್ಲಿ ಬಳಿ ಹೋಗುತ್ತಿರುವ ಮಾಹಿತಿ ಸಿಕ್ಕ ಹಿನ್ನೆಲೆ ಅಪಹರಣಾಕಾರರನ್ನು ಅಲ್ಲಿ ಬಂಧಿಸಲಾಗಿದೆ.

- Advertisement -

ಅಷ್ಟೇ ಅಲ್ಲದೆ ಬಾಲಕನನ್ನು ಪೋಷಕರ ಮಡಿಲಿಗೆ ಒಪ್ಪಿಸಿದ್ದು, ಅಪಹರಣಕಾರರನ್ನು ಬಂಧಿಸಿ, ಅವರು ಅಪಹರಣಕ್ಕೆ ಬಳಸಿದ್ದ ಬೈಕನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಬಂಧಿತ ಅಪಹರಣಾಕಾರರನ್ನು ಬೇತಮಂಗಲದ ವೆಂಕಟೇಶ್ ಹಾಗೂ ಅರಹಳ್ಳಿಯ ಶ್ರೀಕಾಂತ್ ಎಂದು ಗುರುತಿಸಲಾಗಿದೆ. ಸದ್ಯ ಅರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವ ಪೊಲೀಸರು, ಆರೋಪಿಗಳು ಕಿಡ್ನಾಪ್​ ಹಿಂದಿನ ಉದ್ದೇಶವೇನು? ಕಿಡ್ನಾಪ್​ ಹಿಂದೆ ಯಾರಿದ್ದಾರೆ ಎನ್ನುವ ಮಾಹಿತಿ ಕಲೆ ಹಾಕಲಿದ್ದಾರೆ. ಸದ್ಯ ಮಿಂಚಿನ ಕಾರ್ಯಾಚರಣೆ ನಡೆಸಿದ ಕೋಲಾರ ಪೊಲೀಸರಿಗೆ ಯಶ್ವಿತ್ ಗೌಡ ಕುಟುಂಬಸ್ಥರು ಹಾಗೂ ಕೋಲಾರದ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ. ಇನ್ನು ಪೊಲೀಸ್​ ಸಿಬ್ಬಂದಿಯ ಕಾರ್ಯವೈಕರಿಯನ್ನು ಕೋಲಾರ ಎಸ್ಪಿ ನಾರಾಯಣ್​ ಕೂಡಾ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.



Join Whatsapp
Exit mobile version