ಕಾಯಾರ್ ಕುಟುಂಬ ಸಮ್ಮಿಲನ: ವೈವಿಧ್ಯಮಯ ಕಾರ್ಯಕ್ರಮ

Prasthutha|

ಮಂಗಳೂರು: ಕಾಯಾರ್ ಕುಟುಂಬ ಸಮ್ಮಿಲನ ಭಾನುವಾರ ಬಂಟ್ವಾಳದ ಹೂವುಹಾಕುವಕಲ್ಲು ಬಳಿಯ SK ಹಾಲ್ ನಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ರಫೀಕ್ ಮಾಸ್ಟರ್ ಮಾತನಾಡಿ, ಕುಟುಂಬ ಸಮ್ಮಿಲನದಿಂದ ಪ್ರೀತಿ ವಿಶ್ವಾಸ ಅನ್ಯೋನ್ಯತೆ ಸೌಹಾರ್ದತೆ ಬೆಳೆಯುತ್ತದೆ. ಈ ಸಮ್ಮಿಲನ ಕೇವಲ ಮನೋರಂಜನೆಗಾಗಿ ನಡೆಯಬಾರದು. ಅದು ಒಡೆದ ಮನಸ್ಸುಗಳನ್ನು ಒಂದಾಗಿಸಬೇಕು ಎಂದರು.

- Advertisement -


ಇಂತಹ ಕುಟುಂಬ ಸಮ್ಮಿಲನಗಳು ದೂರವಿರುವ ಕುಟುಂಬಗಳನ್ನು ಹತ್ತಿರವಾಗಿಸಬೇಕು. ಕುಟುಂಬ ಸಂಬಂಧಗಳನ್ನು ಬಲಪಡಿಸಬೇಕು. ಅಲ್ಲಿ ಭಾವುಕತೆ ಇರಬೇಕು. ಕ್ಷಮಾಪಣೆ ಇರಬೇಕು. ಯೋಜನೆ ಮತ್ತು ಯೋಚನೆ ಇರಬೇಕು. ಬಡವರು ಮತ್ತು ಶ್ರೀಮಂತರ ಅಂತರ ಕಡಿಮೆಯಾಗಿ ಅವರೆಲ್ಲರೂ ಒಂದಾಗಬೇಕು ಎಂದು ಹೇಳಿದರು.



ಬೆಳಿಗ್ಗೆ ಸುಮಾರು 10 ಗಂಟೆಯಿಂದ ಪ್ರಾರಂಭವಾದ ಕಾರ್ಯಕ್ರಮವು ಸಂಜೆ 6 ಕ್ಕೆ ಮುಕ್ತಾಯಗೊಂಡಿತು. ಕಾಯಾರ್ ಕುಟುಂಬದ ಪ್ರತಿಯೊಬ್ಬ ಹಿರಿಯ/ಕಿರಿಯ ಸದಸ್ಯನಿಗೂ ಈ ದಿನ ಹಬ್ಬದ ದಿನವಾಗಿತ್ತು. ವಯೋಮಿತಿಗೆ ಅನುಸಾರವಾಗಿ ವಿವಿಧ ರೀತಿಯ ಆಟೋಟ ಸ್ಪರ್ಧೆಗಳು, ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಕ್ವಿಝ್ ಸ್ಪರ್ಧೆ, ಹಾಡುಗಳು, ಬುರ್ದಾ ಮಜ್ಲಿಸ್, ಮೌಲೀದ್ ಮಜ್ಲಿಸ್, ಮರಣ ಹೊಂದಿದ ಕುಟುಂಬ ಸದಸ್ಯರಿಗೆ ವಿಶೇಷ ಪ್ರಾರ್ಥನಾ ಮಜ್ಲಿಸ್ ನೆರವೇರಿತು.

- Advertisement -

ಕಾಯಾರ್ ಕುಟುಂಬದ ಸ್ವಾಗತ ಸಮಿತಿಯ ಚೇರ್ಮೆನ್ ಡಿಐ ಅಬೂಬಕ್ಕರ್ ಕೈರಂಗಳ ಸ್ವಾಗತಿಸಿದರು. ಹೂಹಾಕುವ ಕಲ್ಲು ಜುಮಾ ಮಸ್ಜಿದ್ ಖತೀಬರಾದ ಇಕ್ಬಾಲ್ ಫಾಳಿಲಿ ದುಆ ನೆರವೇರಿಸಿದರು. ಮುಹಮ್ಮದ್ ಮದನಿ ಸಾಮಣಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾಯಾರ್ ಕುಟುಂಬದ ಒಗ್ಗೂಡುವಿಕೆಯ ರೂವಾರಿ ಹಾಗೂ ಸಮಿತಿಯ ಕನ್ವೀನರ್ ಸಿದ್ದೀಕ್ ಸಖಾಫಿ ಕಾಯಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಕ್ಬಾಲ್ ಕೈರಂಗಳ ಕಾರ್ಯಕ್ರಮ ನಿರೂಪಿಸಿದರು.


ಕಾಯಾರ್ ಶೇಕಬ್ಬ ಉಪ್ಪಾಪರ ಎಂಟು ತಲೆಮಾರಿನ ಸುಮಾರು 2000ಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Join Whatsapp