ಕರ್ನಾಟಕ ರಾಜ್ಯ ಕುಸ್ತಿ ಸಂಘದ ಸಮಿತಿ ಅಸ್ತಿತ್ವಕ್ಕೆ

Prasthutha|

 ►ಬೆಳ್ಳಿಪಾಡಿ ಗುಣರಂಜನ್ ಶೆಟ್ಟಿ ಅಧ್ಯಕ್ಷರಾಗಿ ಆಯ್ಕೆ

- Advertisement -

ಬೆಂಗಳೂರು: ಕರ್ನಾಟಕ ರಾಜ್ಯ ಕುಸ್ತಿ ಫೆಡರೇಷನ್ ಗೆ ಹೊಸ ಸಮಿತಿಯನ್ನು ಆಯ್ಕೆ ಮಾಡಲಾಗಿದ್ದು, ಬೆಳ್ಳಿಪಾಡಿ ಗುಣರಂಜನ್ ಶೆಟ್ಟಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಕುಸ್ತಿ  ಫೆಡರೇಷನ್ ಆಫ್ ಇಂಡಿಯಾದ ಮೇಲುಸ್ತುವಾರಿಯಲ್ಲಿ ನಡೆದ ಚುನಾವಣೆಯಲ್ಲಿ ಇಂದು ನೂತನ ಸಮಿತಿಯನ್ನು ಅವಿರೋಧವಾಗಿ ಆಯ್ಕೆಮಾಡಲಾಗಿದೆ. ಇನ್ನು ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಗುಣರಂಜನ್ ಶೆಟ್ಟಿಯವರನ್ನು ಭಾರತೀಯ ಕುಸ್ತಿ ಸಂಘದ ಅಧ್ಯಕ್ಷರಾದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅಭಿನಂದಿಸಿದರು.

- Advertisement -

“ಕಳೆದ 50 ವರ್ಷಗಳಿಂದ ರಾಜ್ಯದಲ್ಲಿ ಕುಸ್ತಿಪಟುಗಳ ಅಭ್ಯದಯಕ್ಕಾಗಿ ಸಂಸ್ಥೆ ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಚುನಾವಣಾ ಪ್ರಕ್ರಿಯೆಯನ್ನು ನಡೆಸಲಾಯಿತು. ಈ ಸಮಿತಿಯು 21 ದಿನಗಳ ಕಾಲ ಚುನಾವಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ದೇಶದ ಕುಸ್ತಿ  ಕ್ಷೇತ್ರಕ್ಕೆ ಉತ್ತಮ ಕೊಡುಗೆಯನ್ನು ನೀಡುತ್ತಾ ಬಂದಿರುವ ಕರ್ನಾಟಕ ರಾಜ್ಯಕ್ಕೆ ಹೊಸ ಉತ್ಸಾಹಿ ಸಮಿತಿಯು ಆಯ್ಕೆಯಾಗಿರುವುದು ಸಂತಸದ ವಿಷಯವಾಗಿದೆ. 2022-26 ವರೆಗೆ ಈ ಸಮಿತಿ ಕಾರ್ಯನಿರ್ವಹಿಸಲಿದೆ” ಎಂದು ಕುಸ್ತಿ  ಫೆಡರೇಷನ್ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಚುನಾವಣಾ ಸಮಿತಿಯ ಮೇಲುಸ್ತವಾರಿ ಬಿ.ಎಸ್ ಪ್ರಸೂದ್ ಹೇಳಿದರು.

ಕರ್ನಾಟಕ ಕುಸ್ತಿ ಫೆಡರೇಷನ್ ನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬೆಳ್ಳಿಪಾಡಿ ಗುಣರಂಜನ್ ಶೆಟ್ಟಿ ಅವರು ಮಾತನಾಡಿ, ಸರಿಯಾದ ನಿರ್ವಹಣೆ ಮತ್ತು ಮುತುವರ್ಜಿ ಇಲ್ಲದೆ ನಮ್ಮ ರಾಜ್ಯ ಕುಸ್ತಿಪಟುಗಳ ಕ್ಷೇತ್ರ ಸೊರಗಿದೆ. ಇದಕ್ಕೆ ಅಗತ್ಯ ಪುನಶ್ಚೇತನ ನೀಡುವ ಮೂಲಕ ರಾಜ್ಯದ ಕುಸ್ತಿಪಟುಗಳಿಗೆ ಅವಶ್ಯಕ ಸೌಲಭ್ಯಗಳನ್ನ ನೀಡುವುದು ಹಾಗೂ ಒಟ್ಟಾರೆಯಾಗಿ ನಮ್ಮ ರಾಜ್ಯದ ಕುಸ್ತಿ  ಸ್ಪರ್ಧಾ ಕ್ಷೇತ್ರವನ್ನು ಅಭಿವೃದ್ದಿಗೊಳಿಸುವ ಮಹತ್ವದ ಜವಾಬ್ದಾರಿ ನಮ್ಮ ಮೇಲಿದೆ. ಇದನ್ನ ನನ್ನ ನೇತೃತ್ವದ ತಂಡ ಸಮರ್ಥವಾಗಿ ನಿಭಾಯಿಸಲಿದೆ ಎಂದು ಹೇಳಿದರು.

ಡಿಸೆಂಬರ್ 10 ರಂದು ಹರಿಹರದಲ್ಲಿ ಸೀನಿಯರ್ ಕುಸ್ತಿ  ಚಾಂಪಿಯನ್ ಶಿಪ್ ಟ್ರಯಲ್ಸ್:

ಡಿಸೆಂಬರ್ 21 ರಿಂದ 25 ರ ವರೆಗೆ ಆಂಧ್ರಪ್ರದೇಶದ ವೈಜಾಗ್ ನಲ್ಲಿ ಸೀನಿಯರ್ಸ್  ಕುಸ್ತಿ ಚಾಂಪಿಯನ್ ಶಿಪ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಇದಕ್ಕೆ ನಮ್ಮ ರಾಜ್ಯದ ಕುಸ್ತಿಪಟುಗಳ ಆಯ್ಕೆಗಾಗಿ ಡಿಸೆಂಬರ್ 10 ರಂದು ಹರಿಹರದಲ್ಲಿ ಸೀನಿಯರ್  ಕುಸ್ತಿ ಚಾಂಪಿಯನ್ ಶಿಪ್ ಟ್ರಯಲ್ಸ್ ಆಯೋಜಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.

ಈ ಸಂಧರ್ಭದಲ್ಲಿ ಕರ್ನಾಟಕ ಕುಸ್ತಿ ಅಸೋಷಿಯೇಷನ್ ಅಡ್ಹಾಕ್ ಸಮಿತಿಯ ಅಧ್ಯಕ್ಷರಾದ ವಿ.ಎನ್ ಪ್ರಸೂದ್, ಸಂಚಾಲಕರಾದ ಆರ್. ಕೆ ಪುರಷೊತ್ತಮ್, ಸಮಿತಿಯ ಸದಸ್ಯರಾದ ಎಂ. ಲೋಗನಾಥನ್ ಉಪಸ್ಥಿತರಿದ್ದರು.

ಕುಸ್ತಿಪಟುಗಳ ಅಭಿವೃದ್ದಿಗೆ ಸರಕಾರದ ಜೊತೆಗೆ ಖಾಸಗಿ ಸಹಭಾಗಿತ್ವ:

ರಾಜ್ಯದ ಕುಸ್ತಿಪಟುಗಳ ಅಭಿವೃದ್ದಿಗಾಗಿ ಸರಕಾರದ ಜೊತೆಗೆ ಕುಸ್ತಿ ಸ್ಪರ್ಧೇಯ ಬಗ್ಗೆ ಆಸಕ್ತಿ ಹೊಂದಿರುವ ಖಾಸಗಿ ಸಂಸ್ಥೆಗಳು ಹಾಗೂ ವ್ಯಕ್ತಿಗಳ ಸಹಕಾರವನ್ನು ತಗೆದುಕೊಳ್ಳಲಾಗುವುದು. ಸದ್ಯದಲ್ಲೇ ಅಸೋಷಿಯೇಷನ್ ಕಚೇರಿಯನ್ನು ಪ್ರಾರಂಭಿಸಲಿದ್ದೇವೆ. ಕುಸ್ತಿ ಸ್ಪರ್ಧೆಗಳಲ್ಲಿ ಭಾಗವಹಿಸುವವರು ಹೆಚ್ಚಾಗಿ ಗ್ರಾಮೀಣ ಪ್ರದೇಶದವರು. ಅವರು ಸ್ಪರ್ಧೆಗೆ ತೆರಳಿದಾದ ಗೌರವದಿಂದ ಭಾಗವಹಿಸಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ನಮ್ಮ ಸಮಿತಿಯು ಹೆಚ್ಚಿನ ಕಾಳಜಿಯನ್ನು ವಹಿಸಲಿದೆ ಎಂದರು. ಇನ್ನು ಕೆಲವೇ ದಿನಗಳಲ್ಲಿ ಕರ್ನಾಟಕ ರಾಜ್ಯ ಕುಸ್ತಿ  ಫೆಡರೇಷನ್ ವತಿಯಿಂದ ರಾಜ್ಯ ಮತ್ತು ದೇಶೀಯ ಮಟ್ಟದ ಸ್ಪರ್ಧೆಗಳನ್ನು ನಡೆಸಲಿದ್ದೇವೆ ಎಂದು ಹೇಳಿದರು.

Join Whatsapp