October 21, 2020
ಹಥ್ರಾಸ್ ‘ಸಂಚು’ ಪ್ರಕರಣ: ಪತ್ರಕರ್ತ ಕಪ್ಪನ್ ಕುಟುಂಬದಿಂದ ರಾಹುಲ್ ಗಾಂಧಿ ಭೇಟಿ

ತಿರುವನಂತಪುರ: ತನ್ನ ಪತಿಯನ್ನು ಬಿಡುಗಡೆಗೊಳಿಸುವುದಕ್ಕಾಗಿ ಬೇಕಾದ ಎಲ್ಲಾ ರೀತಿಯ ನೆರವು ನೀಡಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಪ್ಪಿದ್ದಾರೆ ಎಂದು ಹಥ್ರಾಸ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಲು ತೆರಳಿದ್ದಾಗ ಬಂಧನಕ್ಕೊಳಗಾದ ಪತ್ರಕರ್ತ ಸಿದ್ದೀಕ್ ಕಪ್ಪನ್ ರವರ ಪತ್ನಿ ಹೇಳಿರುವುದಾಗಿ ಎ.ಎನ್.ಐ ವರದಿ ಮಾಡಿದೆ.
“ಅವರನ್ನು ಭೇಟಿಯಾಗಲು ವಕೀಲರಿಗೂ ಸಾಧ್ಯವಾಗದಿರುವುದರಿಂದ ಆತಂಕಗೊಂಡಿದ್ದೇವೆ” ಎಂದು ಅವರ ಕುಟುಂಬ ಸದಸ್ಯೆ ರೆಹಾನತ್ ಹೇಳಿದ್ದಾರೆ.
ಸಿದ್ದೀಕ್ ಕಪ್ಪನ್ ರ ಕುಟುಂಬವು ಕಳೆಪಟ್ಟದಲ್ಲಿರುವ ವಿಶ್ರಾಂತಿ ಗೃಹವೊಂದರಲ್ಲಿ ಕಾಂಗ್ರೆಸ್ ನಾಯಕ ಮತ್ತು ವಯನಾಡ್ ಸಂಸದ ರಾಹುಲ್ ಗಾಂಧಿಯವರನ್ನು ಇಂದು ಭೇಟಿಯಾಗಿದೆ.
ಹಥ್ರಾಸ್ ನಲ್ಲಿ ಮೇಲ್ಜಾತಿ ಠಾಕೂರ್ ಗಳಿಂದ ಅತ್ಯಾಚಾರ ಮತ್ತು ಹತ್ಯೆಗೊಳಗಾದ ಯುವತಿಯ ಕುಟುಂಬಸ್ಥರನ್ನು ಭೇಟಿಯಾಗುವುದಕ್ಕಾಗಿ ತೆರಳಿದ್ದ ಸಂದರ್ಭದಲ್ಲಿ ಟೋಲ್ ಬೂತ್ ಬಳಿ ಯುಪಿ ಪೊಲೀಸರು ಸಿದ್ದೀಕ್ ಕಪ್ಪನ್ ರನ್ನು ಬಂಧಿಸಿದ್ದು, ಅವರ ಮೇಲೆ ದೇಶದ್ರೋಹ ಮತ್ತು ಯುಎಪಿಎ ಪ್ರಕರಣಗಳನ್ನು ದಾಖಲಿಸಿದ್ದರು.