Home ಕರಾವಳಿ ಪಣಂಬೂರು ಕಡಲ ಕಿನಾರೆಯ ಅಲೆ ಅಲೆಯಲ್ಲಿ ಕನ್ನಡದ ಕಂಪು ಬೀರಿದ ಕೋಟಿ ಕಂಠ ಗಾಯನ

ಪಣಂಬೂರು ಕಡಲ ಕಿನಾರೆಯ ಅಲೆ ಅಲೆಯಲ್ಲಿ ಕನ್ನಡದ ಕಂಪು ಬೀರಿದ ಕೋಟಿ ಕಂಠ ಗಾಯನ

ಮಂಗಳೂರು: 67ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಕನ್ನಡ ನಾಡು-ನುಡಿಯ ಹಿರಿಮೆ ಸಾರುವ ಕೋಟಿ ಕಂಠ ಗಾಯನ ಕಾರ್ಯಕ್ರಮವನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಪಣಂಬೂರು ಕಡಲ ಕಿನಾರೆಯಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್ ಅವರ ನೇತೃತ್ವದಲ್ಲಿ ಗೀತ ಗಾಯನ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.

ಶಾಸಕರಾದ ಡಾ. ವೈ. ಭರತ್ ಶೆಟ್ಟಿ, ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ. ತೀರ್ಥರಾಮ ಅಂಬೆಕಲ್ಲು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ, ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಮಾಣಿಕ್ಯ, ಸಂಚಾರ ವಿಭಾಗದ ಎಸಿಪಿ ಗೀತಾ ಕುಲಕರ್ಣಿ ವಿವಿಧ ಇಲಾಖೆಗಳ ಅಧಿಕಾರಿಗಳು, ಹಲವಾರು ಶಾಲಾ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು, ಶಿಕ್ಷಕ-ಶಿಕ್ಷಕಿಯರು ಭಾಗವಹಿಸಿದ್ದರು.

ಕವಿ ಕುವೆಂಪು ಅವರ ನಾಡಗೀತೆ ಮೂಲಕ ಕೋಟಿ ಕಂಠ ಗಾಯನವನ್ನು ಪ್ರಾರಂಭಿಸಲಾಯಿತು. ನಂತರ ಕ್ರಮವಾಗಿ ಹುಯಿಲಗೊಳ ನಾರಾಯಣ್ ರಾವ್ ಅವರ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಕುವೆಂಪು ಅವರ ರಚನೆಯ ಬಾರಿಸು ಕನ್ನಡ ಡಿಂಡಿಮವ, ಡಿ.ಎಸ್ ಕರ್ಕಿ ಅವರ ಹಚ್ಚೇವು ಕನ್ನಡದ ದೀಪ, ಚೆನ್ನವೀರ ಕಣವಿ ಅವರ ವಿಶ್ವ ವಿನೂತನ ವಿದ್ಯಾಚೇತನ ಹಾಗೂ ಕೊನೆಯಲ್ಲಿ ಹಂಸಲೇಖ ರಚನೆಯ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡನ್ನು ಹಾಡುವ ಮೂಲಕ ಕೋಟಿ ಕಂಠ ಗಾಯನವನ್ನು ಯಶಸ್ವಿಗೊಳಿಸಲಾಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ ಸ್ವಾಗತಿಸಿ, ವಂದಿಸಿದರು.

ತೇಲುವ ಹಡಗಿನಲ್ಲಿ ಮನಸೂರೆಗೊಂಡ ಕೋಟಿ ಕಂಠ ಗಾಯನ

ಮಂಗಳೂರಿನ ಹಳೇ ಬಂದರು, ಪಲ್ಗುಣಿ ಹಾಗೂ ನೇತ್ರಾವತಿ ನದಿಗಳು ಸಾಗರ ಸೇರುವ ಸಂಗಮದಲ್ಲಿ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಕರಾವಳಿ ಪ್ರಾಧಿಕಾರದ ವತಿಯಿಂದ ತೇಲುವ ಹಡಗಿನಲ್ಲಿ ಹಮ್ಮಿಕೊಂಡಿದ್ದ ಕೋಟಿ ಕಂಠ ಗಾಯನ ಕಾರ್ಯಕ್ರಮವು ಮನಸೂರೆಗೊಂಡಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮುಖ್ಯಮಂತ್ರಿಗಳ ಆಶಯದಂತೆ ಹಾಗೂ ವಿಶಿಷ್ಟ ಕಾರ್ಯಕ್ರಮಗಳ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಗಮನ ಸೆಳೆದಿರುವ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ವಿ. ಸುನಿಲ್ ಕುಮಾರ್ ಅವರ ನಿರ್ದೇಶನದಂತೆ ಈ ಬಾರಿ ತೇಲುವ ಹಡಗಿನಲ್ಲಿ ಕರಾವಳಿಯ ನದಿ ಮತ್ತು ಸಮುದ್ರ ಸಂಗಮವಾಗುವ ಸ್ಥಳದಲ್ಲಿ ಈ ರೀತಿಯ ವಿಶೇಷವಾದ ಕಾರ್ಯಕ್ರಮವನ್ನು ಸಂಯೋಜಿಸಲಾಗಿದೆ, ನದಿಗಳು ಸಂಗಮಗೊಂಡು ಸಮುದ್ರ ಸೇರುವ ಪುಣ್ಯ ತಾಣದಲ್ಲಿ ತೇಲುವ ಹಡಗಿನಲ್ಲಿ ಕನ್ನಡ ಗೀತೆಗಳನ್ನು ಮೊಳಗಿಸಲಾಗುತ್ತಿದೆ ಎಂದರು.

ಅತಿಥಿಗಳಾಗಿದ್ದ ಭಾಗವಹಿಸಿದ್ದ ಎಎಸ್ ಪಿಇಎನ್ ಕಂಪೆನಿ (ಎಸ್ಇಝಡ್) ಜನರಲ್ ಮ್ಯಾನೇಜರ್ ಅಶೋಕ್ ಕುಮಾರ್ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ನೌಕರರ ಸಹಕಾರ ಬ್ಯಾಂಕ್ ಅಧ್ಯಕ್ಷ ಪ್ರಕಾಶ್ ನಾಯಕ್ ಶುಭ ಹಾರೈಸಿದರು.

ಬೋಳೂರು ಪರಿಸರದಿಂದ ನೇತ್ರಾವತಿ ಸೇತುವೆ ವರೆಗೆ ಚಲಿಸುವ ಹಡಗಿನಲ್ಲಿ ಎರಡೂವರೆ ಗಂಟೆಗಳ ಕಾಲ ಗಾಯಕರಾದ ಸೌಮ್ಯ ಭಟ್ ಕಟೀಲು, ರಾಕೇಶ್ ದಿಲ್ಸೆ, ಬಾಲಕೃಷ್ಣ ನೆಟ್ಟಾರು, ಶಮೀರ್ ಮುಲ್ಕಿ, ದೀಪ್ತಿ ದಿಲ್ಸೆ ಅವರ ತಂಡ ನಾಡಗೀತೆ ಸಹಿತ ಕನ್ನಡದ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು.

ಇದೇ ಸಂದರ್ಭದಲ್ಲಿ ಮಾತೃ ಭಾಷೆ ಕನ್ನಡದಲ್ಲೇ ವ್ಯವಹರಿಸುವ ಬಗ್ಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರದೀಪ್ ಡಿಸೋಜ ಸ್ವಾಗತಿಸಿದರು, ಪ್ರಾಧಿಕಾರದ ವಲಯ ಅಧಿಕಾರಿ ಜನಾರ್ದನ್ ವಂದಿಸಿದರು.

ಬಾನೆತ್ತರಕ್ಕೆ ಮೊಳಗಿದ ಕೋಟಿಕಂಠ ಗಾಯನ

67ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನನ್ನ ನಾಡು ನನ್ನ ಹಾಡು ಕೋಟಿ ಕಂಠ ಗಾಯನ ಕಾರ್ಯಕ್ರಮವನ್ನು ಶುಕ್ರವಾರ ಮಂಗಳೂರು ತಾಲೂಕು ಪಂಚಾಯತ್ ಹಾಗೂ ತಾಲೂಕು ಆಡಳಿತ ಸೌಧ (ಮಿನಿ ವಿಧಾನ ಸೌಧ) ಆವರಣದಲ್ಲಿ ಹಾಡಲಾಯಿತು.

ಕವಿ ಕುವೆಂಪು ಅವರ ನಾಡಗೀತೆ ಮೂಲಕ ಕೋಟಿ ಕಂಠ ಗಾಯನವನ್ನು ಪ್ರಾರಂಭಿಸಲಾಯಿತು. ನಂತರ ಕ್ರಮವಾಗಿ ಹುಯಿಲಗೊಳ ನಾರಾಯಣ್ ರಾವ್ ಅವರ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಕುವೆಂಪು ಅವರ ರಚನೆಯ ಬಾರಿಸು ಕನ್ನಡ ಡಿಂಡಿಮವ, ಡಿ.ಎಸ್ ಕರ್ಕಿ ಅವರ ಹಚ್ಚೇವು ಕನ್ನಡದ ದೀಪ, ಚೆನ್ನ ವೀರ ಕಣವಿ ಅವರ ವಿಶ್ವ ವಿನೂತನ ವಿದ್ಯಾಚೇತನ ಹಾಗೂ ಕೊನೆಯಲ್ಲಿ ಹಂಸಲೇಖ ರಚನೆಯ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡನ್ನು ಹಾಡಲಾಯಿತು.

ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಮದನ್ ಮೋಹನ್, ತಾಲೂಕು ಉಪ ತಹಶೀಲ್ದಾರÀ ಪುಟ್ಟರಾಜ್, ತಾಲೂಕು ಪಂಚಾಯತ್ ಅಧಿಕಾರಿ ವರ್ಗ ಹಾಗೂ ಸಿಬ್ಬಂದಿಗಳು, ತಾಲೂಕು ಆಡಳಿತ ಸೌಧದ ಅಧಿಕಾರಿ ವರ್ಗ ಹಾಗೂ ಸಿಬ್ಬಂದಿಗಳು, ದೂರದೃಷ್ಟಿ ಪ್ರಶಿಕ್ಷಾಣಾರ್ಥಿಗಳು ಭಾಗವಹಿಸಿದ್ದರು.

ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಲೋಕೇಶ್ ಸಿ ಸ್ವಾಗತಿಸಿದರು.

Join Whatsapp
Exit mobile version