ನ್ಯಾಯ ದೊರಕಿತು: ‘ಆಪರೇಷನ್​ ಸಿಂಧೂರ’​ಕ್ಕೆ ಪಹಲ್ಗಾಮ್​ ಸಂತ್ರಸ್ತ ಕುಟುಂಬಸ್ಥರ ಪ್ರಶಂಸೆ

- Advertisement -

ಹೈದರಾಬಾದ್​: ಪಾಕ್​​ ಆಕ್ರಮಿತ ಕಾಶ್ಮೀರದಲ್ಲಿರುವ (ಪಿಒಕೆ) ಒಟ್ಟು 9 ಭಯೋತ್ಪಾದಕ ಅಡಗುತಾಣಗಳನ್ನು ಗುರಿಯಾಗಿಸಿ ನಡೆಸಿರುವ ಆಪರೇಷನ್​ ಸಿಂಧೂರಕ್ಕೆ ಪಹಲ್ಗಾಮ್​ ದಾಳಿಯ ಸಂತ್ರಸ್ತರ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದು, ಉಗ್ರರ ದಾಳಿಯಲ್ಲಿ ಹತ್ಯೆಯಾದವರ ಆತ್ಮಕ್ಕೆ ಶಾಂತಿ ಸಿಕ್ಕಿದೆ ಎಂದಿದ್ದಾರೆ.

- Advertisement -

ಪಹಲ್ಗಾಮ್‌ ನಲ್ಲಿ ಮೃತರಾದ ಕುಟುಂಬದವರು ‘ನ್ಯಾಯ ದೊರಕಿತು’ ಎಂದು ಕಣ್ಣೀರಾಗಿದ್ದಾರೆ.

ಪಹಲ್ಗಾಮ್‌ನಲ್ಲಿ ಮೃತಪಟ್ಟ ಪುಣೆಯ ಸಂತೋಷ್ ಜಗದಲೆ ಎನ್ನುವವರ ಮಗಳು ಮಾತನಾಡಿ, ‘ಆಪರೇಷನ್‌ನ ಹೆಸರು ಕೇಳಿ ಖುಷಿಯಿಂದ ಕಣ್ಣೀರು ಸುರಿಸಿದ್ದೇನೆ, ಉಗ್ರರ ಗುಂಡಿಗೆ ಬಲಿಯಾದವರಿಗೆ ಸಿಕ್ಕ ನಿಜವಾದ ನ್ಯಾಯವಾಗಿದೆ ಮತ್ತು ನಿಜವಾದ ಗೌರವವಾಗಿದೆ’ ಎಂದು ಹೇಳಿದ್ದಾರೆ.

- Advertisement -

ಮೃತ ಉದ್ಯಮಿ ಶುಭಂ ದ್ವಿವೇದಿ ಪತ್ನಿ ಮಾತನಾಡಿ, ‘ನನ್ನ ಪತಿಯ ಸಾವಿಗೆ ಕಾರಣರಾದವರ ವಿರುದ್ಧ ಪ್ರತೀಕಾರ ತೀರಿಸಿದ್ದಕ್ಕೆ ಪ್ರಧಾನಿ ಮೋದಿಗೆ ಧನ್ಯವಾದ ಹೇಳುತ್ತೇನೆ. ನನ್ನ ಪತಿಯ ಸಾವಿಗೆ ಸಿಕ್ಕ ಗೌರವಾಗಿದೆ. ಅವರು ಎಲ್ಲಿದ್ದರೂ ಅವರಿಗೆ ಇಂದು ಶಾಂತಿ ದೊರಕಿಲಿದೆ’ ಎಂದಿದ್ದಾರೆ.

ಭಾರತೀಯ ನೌಕಾಪಡೆ ಅಧಿಕಾರಿ ವಿನಯ್‌ ನರ್‌ವಾಲ್‌ ತಾಯಿ ಆಶಾ ನರ್‌ವಾಲ್‌ ಮಾತನಾಡಿ, ‘ಮೋದಿ ಅವರೊಂದಿಗೆ ನನ್ನ ಇಡೀ ಕುಟುಂಬ ಇರಲಿದೆ, ದಾಳಿ ಮುಂದುವರಿಸಿ ಎಂದು ಸಶಸ್ತ್ರ ಪಡೆಗಳಿಗೆ ಹೇಳುತ್ತೇನೆ, ಪಹಲ್ಗಾಮ್‌ನಲ್ಲಿ ಜೀವತೆತ್ತ ಪ್ರತಿಯೊಬ್ಬರಿಗೂ ಇಂದು ನ್ಯಾಯ ದೊರಕಿದೆ’ ಎಂದು ಹೇಳಿದ್ದಾರೆ.

ಮೃತರಾದ ಗುಜರಾತ್‌ನ ಸುಮಿತ್‌ ಮತ್ತು ಯತಿಶ್‌ ಪರ್ಮಾರ್ ಸಂಬಂಧಿ ಮಾತನಾಡಿ, ‘ಘಟನೆ ನಡೆದ 15 ದಿನಗಳ ನಂತರ, ಭಾರತೀಯ ಸೇನೆ ಆ ಭಯೋತ್ಪಾದಕರ ಮೇಲೆ ದಾಳಿ ಮಾಡಿತು. ಭಾರತೀಯ ಸೇನೆ ಮತ್ತು ಪ್ರಧಾನಿ ಮೋದಿ ಅವರು ಹೇಳಿದಂತೆ ಮಾಡಿದ್ದಾರೆ ಎಂಬುದಕ್ಕೆ ನನಗೆ ಹೆಮ್ಮೆ ಇದೆ’ ಎಂದಿದ್ದಾರೆ.

ಉಗ್ರರ ದಾಳಿಯಲ್ಲಿ ಮೃತರಾದ ಬೆಂಗಳೂರಿನ ಭರತ್‌ ಭೂಷಣ್‌ ಸಹೋದರ ಪ್ರೀತಮ್‌ ಮಾತನಾಡಿ, ‘ಭಯೋತ್ಪಾದಕ ಸಂಘಟನೆಗಳನ್ನು ಗುರಿಯಾಗಿರಿಸಿಕೊಂಡಿರುವುದರಿಂದ ನಾವು ಸರ್ಕಾರದ ನಿರ್ಧಾರವನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇವೆ’ ಎಂದಿದ್ದಾರೆ.

- Advertisement -


Must Read

Related Articles