ತಮಿಳುನಾಡಿನ ಅಣ್ಣಾಮಲೈ ವಿ.ವಿ ಯೊಂದಿಗೆ ಜಯಲಲಿತಾ ವಿ.ವಿ. ವಿಲೀನ | ಮಸೂದೆ ಅಂಗೀಕಾರ

Prasthutha|

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಜಯಲಲಿತಾ ವಿಶ್ವವಿದ್ಯಾಲಯದ ವಿಲೀನಕ್ಕೆ ಸಂಬಂಧಿಸಿದ ಮಸೂದೆಯನ್ನು ಮಂಗಳವಾರ ವಿಧಾನಸಭೆಯಲ್ಲಿ ಅಂಗೀಕರಿಸಿದ್ದು, ಈ ಕ್ರಮಕ್ಕೆ ವಿರೋಧ ಪಕ್ಷಗಳಿಂದ ಭಾರಿ ವಿರೋಧ ವ್ಯಕ್ತವಾಗಿದೆ.

- Advertisement -

ಉನ್ನತ ಶಿಕ್ಷಣ ಸಚಿವ ಕೆ.ಪೊನ್‌ಮುಡಿ ಅವರು ಮಸೂದೆಯನ್ನು ಮಂಡಿಸುತ್ತಿದ್ದಂತೆಯೇ, ಎಐಡಿಎಂಕೆ ಸದಸ್ಯರು ವಿರೋಧ ವ್ಯಕ್ತಪಡಿಸಿ ಸಭಾತ್ಯಾಗ ಮಾಡಿದರು. ನಂತರ, ಎಐಎಡಿಎಂಕೆ ನಾಯಕ ಪನ್ನೀರ್‌ ಸೆಲ್ವಂ ಅವರ ನೇತೃತ್ವದಲ್ಲಿ ಶಾಸಕರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.ತಮಿಳುನಾಡಿನ ವಿಲ್‌ಪುರಂನಲ್ಲಿರುವ ಜೆ.ಜಯಲಿತಾ ವಿಶ್ವವಿದ್ಯಾಲಯವನ್ನು ಅಣ್ಣಾಮಲೈ ವಿಶ್ವವಿದ್ಯಾಲಯದ ಜೊತೆಗೆ ವಿಲೀನಗೊಳಿಸುವ ಈ ಮಸೂದೆಗೆ ಆಕ್ಷೇಪ ವ್ಯಕ್ತಪಡಿಸಿರುವ ಎಐಡಿಎಂಕೆ ‘ಇದೊಂದು ರಾಜಕೀಯ ದ್ವೇಷದ ಕ್ರಮ’ ಎಂದು ದೂರಿದೆ. ಎಐಎಡಿಎಂಕೆಯ ಮಿತ್ರ ಪಕ್ಷ ಬಿಜೆಪಿ ಕೂಡ ಈ ಕ್ರಮವನ್ನು ವಿರೋಧಿಸಿದೆ.

‘ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಉಂಟು ಮಾಡಿದ್ದಾರೆ. ಅವರು ಶೈಕ್ಷಣಿಕ ಅಭಿವೃದ್ಧಿಗಾಗಿ ಉಚಿತ ಲ್ಯಾಪ್‌ಟಾಪ್‌ ಸೇರಿದಂತೆ ಹಲವು ಯೋಜನೆಗಳನ್ನು ಪರಿಚಯಿಸಿದ್ದರು. ಇಂತಹ ಕ್ರಮಗಳಿಂದಾಗಿಯೇ ತಮಿಳುನಾಡಿನಲ್ಲಿ ಶಾಲಾ ದಾಖಲಾತಿ ಪ್ರಮಾಣವು ದ್ವಿಗುಣಗೊಂಡಿತ್ತು. ಜಯಲಲಿತಾ ವಿಶ್ವವಿದ್ಯಾಲಯವನ್ನು ಅಣ್ಣಾಮಲೈ ವಿ.ವಿ. ಜೊತೆಗೆ ವಿಲೀನಗೊಳಿಸುವ ತೀರ್ಮಾನವನ್ನು ನಾವು ಪ್ರಾಥಮಿಕ ಹಂತದಲ್ಲಿಯೇ ವಿರೋಧಿಸಿದೆವು. ರಾಜಕೀಯ ದ್ವೇಷದ ತೀರ್ಮಾನ ವಿರೋಧಿಸಿದ ನಾವು ಕಲಾಪ ಬಹಿಷ್ಕರಿಸಿದೆವು’ ಎಂದು ಪನ್ನೀರ್‌ ಸೆಲ್ವಂ ಹೇಳಿದ್ದಾರೆ.

Join Whatsapp