ಜಮ್ಮು ಕಾಶ್ಮೀರ ಮೇಘಸ್ಫೋಟ: ರಾತ್ರೋರಾತ್ರಿ ಮಾರುಕಟ್ಟೆಯೇ ಕಣ್ಮರೆ!

- Advertisement -

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಹವಾಮಾನ ಬದಲಾವಣೆಯಿಂದಾಗಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಭಾನುವಾರ ರಾಂಬನ್ ಜಿಲ್ಲೆಯ ಬಾಗ್ನಾ ಪ್ರದೇಶದಲ್ಲಿ ಸಂಭವಿಸಿದ ಮೇಘಸ್ಫೋಟದಲ್ಲಿ ಮೂವರು ಮೃತಪಟ್ಟಿದ್ದಾರೆ.

- Advertisement -

ಆದರೆ, ಏಕಾಏಕಿ ಸುರಿದ ವರ್ಷಧಾರೆಯಿಂದ ಸೃಷ್ಟಿಯಾದ ಪ್ರವಾಹ ಅನೇಕ ಅವಾಂತರಗಳನ್ನು ಸೃಷ್ಟಿಸಿದೆ. ಹಲವು ಕಟ್ಟಡಗಳು ಮತ್ತು ವಾಹನಗಳಿಗೆ ಹಾನಿಯಾಗಿದೆ. ಹಲವು ಕಡೆ ರಸ್ತೆಗಳು ಬಂದ್ ಆಗಿವೆ. ಕೇವಲ ಒಂದು ರಾತ್ರಿಯಲ್ಲಿ ಆ ಪ್ರದೇಶದ ಜನರು ಭಾರಿ ನಷ್ಟವನ್ನು ಅನುಭವಿಸಿದ್ದಾರೆ. ಅನೇಕ ಜನರ ಮನೆಗಳು ಮತ್ತು ಅಂಗಡಿಗಳು ಸಂಪೂರ್ಣವಾಗಿ ನಾಶವಾಗಿವೆ. ರಾತ್ರೋರಾತ್ರಿ ಮಾರುಕಟ್ಟೆಯೇ ಜಲಾವೃತಗೊಂಡು ಕಣ್ಮರೆಯಾಗಿದೆ.

ರಾಂಬನ್​​ ನ ಧಾರ್ಮಿಕ ಸ್ಥಳದಿಂದ ಸುಮಾರು 100 ಜನರನ್ನು ರಕ್ಷಿಸಲಾಗಿದೆ ಎಂದು ಎಸ್‌ ಎಸ್‌ಪಿ ರಂಬನ್ ಕುಲ್ಬೀರ್ ಸಿಂಗ್ ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಅಧಿಕಾರಿಗಳು ಸ್ಥಳೀಯ ಆಡಳಿತದೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ರಂಬನ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ 44 ಜಲಾವೃತಗೊಂಡು ಸಂಚಾರ ಬಂದ್ ಆಗಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮಾಹಿತಿ ನೀಡಿದ್ದಾರೆ.

- Advertisement -

ಮೇಘಸ್ಫೋಟ ಹಾಗೂ ಏಕಾಏಕಿ ಮಳೆ ಸುರಿದ ಬಗ್ಗೆ ರಾಂಬನ್ ನಿವಾಸಿ ಓಂ ಸಿಂಗ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ನಾನು ಅಂಗಡಿಯ ಅನತಿ ದೂರದಲ್ಲಿ ನದಿಯ ಇನ್ನೊಂದು ಬದಿಯಲ್ಲಿ ವಾಸಿಸುತ್ತಿದ್ದೇನೆ. ಮಳೆಯ ನಂತರ ಅಂಗಡಿ ಇದ್ದ ಸ್ಥಳಕ್ಕೆ ತಲುಪಿ ನೋಡಿದಾಗ, ಅಂಗಡಿ ಸೇರಿದಂತೆ ಇಡೀ ಮಾರುಕಟ್ಟೆ ಕಣ್ಮರೆಯಾಗಿತ್ತು. ಈ ರೀತಿ ಮಳೆಯಾಗಿದ್ದನ್ನು ನೋಡುತ್ತಿರುವುದು ಇದೇ ಮೊದಲು ಎಂದಿದ್ದಾರೆ.

- Advertisement -


Must Read

Related Articles