Home ಟಾಪ್ ಸುದ್ದಿಗಳು ಮಾಲ್ದೀವ್ಸ್‌ದೊಂದಿಗೆ ಉತ್ತಮ ಸಂಬಂಧ ಬೆಳೆಸಲು ಭಾರತದ ಎಲ್ಲ ಪ್ರಯತ್ನ: ಜೈಶಂಕರ್

ಮಾಲ್ದೀವ್ಸ್‌ದೊಂದಿಗೆ ಉತ್ತಮ ಸಂಬಂಧ ಬೆಳೆಸಲು ಭಾರತದ ಎಲ್ಲ ಪ್ರಯತ್ನ: ಜೈಶಂಕರ್

ಮಾಲೆ: ಮಾಲ್ದೀವ್ಸ್‌ ಭಾರತದ ನೆರೆಯ ರಾಷ್ಟ್ರವಷ್ಟೇ ಅಲ್ಲ. ಅದರೊಂದಿಗಿನ ಭಾರತದ ಸಂಬಂಧ ವಿಶೇಷವಾದದ್ದಾಗಿದೆ. ಆ ರಾಷ್ಟ್ರದೊಂದಿಗೆ ಉತ್ತಮ ಸಂಬಂಧ ಬೆಳೆಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಭಾರತ ನಡೆಸುತ್ತದೆ ಎಂದು ಭಾರತ ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.

ಮಾಲ್ದೀವ್ಸ್‌ಗೆ ತಮ್ಮ ಮೂರು ದಿನಗಳ ಭೇಟಿ ಕುರಿತು ಅವರು ಮಾತನಾಡಿದರು. ಭಾರತೀಯ ಮೂಲದವರು ಜಗತ್ತಿನ ಎಲ್ಲಾ ಕಡೆ ಇದ್ದಾರೆ. ಮಾಲ್ದೀವ್ಸ್‌ನಲ್ಲೂ ಭಾರತೀಯರಿದ್ದು, ಅವರ ಹಿತ ಕಾಯಲು ಬದ್ಧ ಎಂದರು.

ಮಾಲ್ದೀವ್ಸ್‌ನಲ್ಲಿ ಸುಮಾರು 27 ಸಾವಿರ ಭಾರತೀಯರು ಇದ್ದಾರೆ. ಇವರು ಹೆಚ್ಚಾಗಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇನ್ನೂ ಕೆಲವರು ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ 28 ದ್ವೀಪಗಳನ್ನು ಒಳಗೊಂಡ ಮಾಲ್ದೀವ್ಸ್‌ನಲ್ಲಿ ಭಾರತ ಕೈಗೊಂಡ 110 ದಶಲಕ್ಷ ಅಮೆರಿಕನ್ ಡಾಲರ್ ಮೊತ್ತದ ನೀರು ಮತ್ತು ನೈರ್ಮಲ್ಯ ಯೋಜನೆಗೆ ಜೈಶಂಕರ್ ಚಾಲನೆ ನೀಡಿದ್ದು, ಇದು ದೇಶದ ಶೇ 7ರಷ್ಟು ಜನಸಂಖ್ಯೆಗೆ ನೆರವಾಗಲಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಹಿಂದೂ ಮಹಾಸಾಗರದ ರಾಷ್ಟ್ರಗಳಿಗೆ ಸಾಕಷ್ಟು ಪ್ರಾಮುಖ್ಯತೆ ನೀಡಲಾಗುತ್ತಿದೆ. ‘ಸಾಗರ್‌’ ಎಂಬ ಯೋಜನೆಯನ್ನು ಭಾರತ ಕೈಗೊಂಡಿದೆ. 1988ರ ನವೆಂಬರ್‌ನಲ್ಲಿ ಭಾರತ ಇಲ್ಲಿ ಕೈಗೊಂಡ ಕಾರ್ಯಕ್ರಮಗಳು, ಕೊಡುಗೆಗಳನ್ನು, 2004ರ ಸುನಾಮಿ ಸಂದರ್ಭದಲ್ಲಿ ಮಾಲೆಯಲ್ಲಿ ಎದುರಾದ ನೀರಿನ ಸಮಸ್ಯೆಗೆ ಭಾರತದ ಪರಿಹಾರ ಕುರಿತು ಮಾಲ್ದೀವ್ಸ್‌ನ ಹಲವರು ಗಮನಕ್ಕೆ ತಂದರು. ಇದು ಉಭಯ ರಾಷ್ಟ್ರಗಳ ಬಾಂಧವ್ಯ ವೃದ್ಧಿಗೆ ಸಹಕಾರಿ ಎಂದು ಜೈಶಂಕರ್ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಹೇಳಿಕೆ ನಂತರ ಭಾರತ ಹಾಗೂ ಮಾಲ್ದೀವ್ಸ್‌ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಉಲ್ಬಣಗೊಂಡಿತ್ತು. ಹೇಳಿಕೆ ನೀಡಿದ ಮೂರು ಸಚಿವರನ್ನು ಮಾಲ್ದೀವ್ಸ್ ವಜಾಗೊಳಿಸಿತ್ತು. ಇದಾದ ಬೆನ್ನಲ್ಲೇ ಮಾಲ್ದೀವ್ಸ್‌ಗೆ ಪರ್ಯಾಯವಾಗಿ ಲಕ್ಷದ್ವೀಪವನ್ನು ದಕ್ಷಿಣ ಏಷ್ಯಾದ ಪ್ರವಾಸಿ ತಾಣವಾಗಿ ರೂಪಿಸುವ ನಿಟ್ಟಿನಲ್ಲಿ ಭಾರತ ಕ್ರಮ ಕೈಗೊಂಡಿತು. ಪ್ರಧಾನಿ ನರೇಂದ್ರ ಮೋದಿ ಅವರೂ ಭೇಟಿ ನೀಡಿದರು. ಇದಾದ ನಂತರ ಮಾಲ್ದೀವ್ಸ್‌ನಲ್ಲಿದ್ದ ಭಾರತ ಯೋಧರನ್ನು ಹಿಂದಕ್ಕೆ ಕರೆಯಿಸಿಕೊಳ್ಳಲು ಮುಯಿಝು ಅವರು ಮೇ 10ರ ಗಡುವು ನೀಡಿದ್ದರು. ಅದರಂತೆಯೇ ಭಾರತದ ಸೈನಿಕರು ಸ್ವದೇಶಕ್ಕೆ ಮರಳಿದ್ದರು. ಇವು ಉಭಯ ರಾಷ್ಟ್ರಗಳ ನಡುವೆ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದ್ದವು. ಬಳಿಕ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ಮುಯಿಝು ಅವರಿಗೂ ಭಾರತ ಆಹ್ವಾನ ನೀಡಿತ್ತು. ಮುಯಿಝು ಕಾರ್ಯಕ್ರಮದಲ್ಲಿ ಪಾಲ್ಗೊಂಡು, ನಂತರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಯೋಜಿಸಿದ್ದ ಔತಣಕೂಟದಲ್ಲೂ ಪಾಲ್ಗೊಂಡಿದ್ದರು.

Join Whatsapp
Exit mobile version