ಐಐಎಚ್ ಆರ್ ಎಂನಿಂದ ಆಸ್ಪತ್ರೆ, ಆರೋಗ್ಯ ನಿರ್ವಹಣೆಯ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್ ಆರಂಭ: ಡಾ.ಜಿತು ಲಾಲ್ ಮೀನಾ

Prasthutha|

ಬೆಂಗಳೂರು; ದೇಶದ ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಸುಧಾರಣೆಯಾಗುತ್ತಿದ್ದು, ಸಾರ್ವಜನಿಕ ಆರೋಗ್ಯ ಸೇವೆಯ ಗುಣಮಟ್ಟದಲ್ಲಿ ವ್ಯಾಪಕ ಪ್ರಗತಿಯಾಗುತ್ತಿದೆ ಎಂದು ಕೇಂದ್ರದ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ [ಎನ್.ಎಚ್.ಎ]ದ ವಿಭಾಗೀಯ ಮುಖ್ಯಸ್ಥ ಡಾ. ಜಿತು ಲಾಲ್ ಮೀನಾ ಹೇಳಿದ್ದಾರೆ.

- Advertisement -

ಎಐಸಿಟಿಇ ನಿಂದ ಅನುಮೋದನೆಗೊಂಡಿರುವ ಆಸ್ಪತ್ರೆ ಮತ್ತು ಆರೋಗ್ಯ ನಿರ್ವಹಣೆ ಕುರಿತ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್ ಗೆ ಭಾರತೀಯ ಆರೋಗ್ಯ ನಿರ್ವಹಣಾ ಸಂಸ್ಥೆಯ [ಐಐಎಚ್ಎಂಆರ್] ದಕ್ಷಿಣ ಭಾಗದ ಬೆಂಗಳೂರಿನ ಕ್ಯಾಂಪಸ್ ನಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಿಗೆ ಸೀಮಿತವಾಗಿದ್ದ ಎನ್.ಎ.ಬಿ.ಎಚ್ ಮಾನ್ಯತೆ ಇದೀಗ ಸಾರ್ವಜನಿಕ ಆಸ್ಪತ್ರೆಗಳಿಗೂ ದೊರೆಯುತ್ತಿದೆ. ಅದರಲ್ಲೂ ನಿರ್ದಿಷ್ಟವಾಗಿ ಗುಜರಾತ್ ನ ಪ್ರಾಥಮಿಕ ಆರೋಗ್ಯ ಕ್ಷೇಂದ್ರದಿಂದ ಹಿಡಿದು ಹಲವು ಆಸ್ಪತ್ರೆಗಳು ಈಗಾಗಲೇ ಇಂತಹ ಮಾನ್ಯತೆಯನ್ನು ಪಡೆದುಕೊಂಡಿವೆ. ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಿಗೆ ಇದೀಗ ಸಾರ್ವಜನಿಕ ಆಸ್ಪತ್ರೆಗಳು ಸೆಡ್ಡು ಹೊಡೆಯುತ್ತಿವೆ ಎಂದರು.

ಆರೋಗ್ಯ ಕ್ಷೇತ್ರದಲ್ಲಿ ಒಂದು ಸಣ್ಣ ತಪ್ಪು ಹಲವಾರು ಜೀವ ಹಾನಿಗಳಿಗೆ, ಕುಟುಂಬಗಳ ನಾಮಾವಶೇಷಕ್ಕೆ ಕಾರಣವಾಗುತ್ತವೆ. ಈ ಕ್ಷೇತ್ರದಲ್ಲಿ ಶೇ 100ರಷ್ಟು ಗುಣಮಟ್ಟ ಅತ್ಯಂತ ಅಗತ್ಯವಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಪರಿಣಿತಿ ಸಾಧಿಸಲು ನಿರಂತರವಾಗಿ ಕಾರ್ಯನಿರ್ವಹಿಸಬೇಕಾಗುತ್ತಿದೆ. ಶಸ್ತ್ರಚಿಕಿತ್ಸಕರ ಕೈಯಲ್ಲಿ ಜೀವ ಇದ್ದರೆ ದಾದಿಯರು, ಶುಚಿತ್ವ ಸಿಬ್ಬಂದಿ ಸರಿಯಾಗಿ ಕೆಲಸ ಮಾಡದಿದ್ದರೆ ಸೋಂಕು ಹರಡುವ ಅಪಾಯ ಎದುರಾಗುತ್ತದೆ ಎಂದು ಹೇಳಿದರು.

- Advertisement -

ಆರೋಗ್ಯ ನಿರ್ವಹಣಾ ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ. ಉಷಾ ಮಂಜುನಾಥ್ ಮಾತನಾಡಿ, ಆರೋಗ್ಯ ಕ್ಷೇತ್ರದಲ್ಲಿರುವವರಿಗೆ ಈ ಕೋರ್ಸ್ ಅತ್ಯಂತ ಮಹತ್ವದ್ದಾಗಿದ್ದು, ರಕ್ಷಣಾ ವಲಯ, ಅದರಲ್ಲೂ ನಿರ್ದಿಷ್ಟವಾಗಿ ಸೇನೆಯಲ್ಲಿರುವವರಿಗೆ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗಲಿದೆ. ಕರ್ನಾಟಕ ನರ್ಸಿಂಗ್ ಅಸೋಸಿಯೇಷನ್ ಅಲ್ಲದೇ ಕರ್ನಾಟಕದ ಕೋವಿಡ್ ಕೋಶದಿಂದಲೂ  ಈ ಕೋರ್ಸ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ ಎಂದರು.

ವಿಕ್ರಂ ಆಸ್ಪತ್ರೆಯ ಸಂಸ್ಥಾಪಕ ಡಾ. ವಿಕ್ರಂ, ಜೈಪುರದ ಐಐಎಚ್ಎಂಆರ್ ಸೊಸೈಟಿಯ ಟ್ರಸ್ಟಿ ಕಾರ್ಯದರ್ಶಿ ಡಾ. ಎಸ್.ಡಿ. ಗುಪ್ತಾ ಮತ್ತಿತರರು ಉಪಸ್ಥಿತರಿದ್ದರು.

Join Whatsapp