Home ಟಾಪ್ ಸುದ್ದಿಗಳು ಪ್ರಜ್ವಲ್ ರೇವಣ್ಣ ಮುಸ್ಲಿಂ ಆಗಿದ್ದರೆ ಪ್ರಧಾನಿ ಮೋದಿ ಮಾತನಾಡುತ್ತಿದ್ದರು: ಭವ್ಯ ನರಸಿಂಹ ಮೂರ್ತಿ

ಪ್ರಜ್ವಲ್ ರೇವಣ್ಣ ಮುಸ್ಲಿಂ ಆಗಿದ್ದರೆ ಪ್ರಧಾನಿ ಮೋದಿ ಮಾತನಾಡುತ್ತಿದ್ದರು: ಭವ್ಯ ನರಸಿಂಹ ಮೂರ್ತಿ

ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಮಾಡಿದ್ದು ಇಡೀ ಭಾರತದ ಇತಿಹಾಸದಲ್ಲೇ ಅತ್ಯಂತ ಕ್ರೌರ್ಯವಾದ ಘಟನೆಯಾಗಿದೆ. ಅತ್ಯಾಚಾರಕ್ಕೆ ಒಳಗಾದ ಸಾವಿರಾರು ಹೆಣ್ಣುಮಕ್ಕಳು ಧ್ವನಿ ಇಲ್ಲದವರು. ಅಡುಗೆ ಕೆಲಸ ಮಾಡೋ ಅಜ್ಜಿಯನ್ನೂ ಆತ ಬಿಟ್ಟಿಲ್ಲ. ಆದರೆ ಪ್ರಜ್ವಲ್ ರೇವಣ್ಣ ಮಾಡಿದ ದೌರ್ಜನ್ಯ ಯಾವ ಜನಪ್ರತಿನಿಧಿಯೂ ಮಾಡಿಲ್ಲ. ಕರ್ನಾಟಕದಲ್ಲಿರುವ ಪ್ರಧಾನಿ ಮೋದಿಯವರೂ ಮಾತನಾಡಿಲ್ಲ.ಪ್ರಜ್ವಲ್ ರೇವಣ್ಣ ಮುಸ್ಲಿಂ ಆಗಿದ್ದರೆ ಪ್ರಧಾನಿ ಮಾತನಾಡುತ್ತಿದ್ದರು ಎನಿಸುತ್ತದೆ ಎಂದು ಕಾಂಗ್ರೆಸ್ ವಕ್ತಾರೆ ಭವ್ಯ ನರಸಿಂಹಮೂರ್ತಿ ಕಿಡಿಗಾರಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಕೃತ್ಯದ ಬಗ್ಗೆ ಬಿಜೆಪಿಯವರು ಸಹ ಉತ್ತರ ನೀಡಬೇಕು. ಒಬ್ಬನೇ ಒಬ್ಬ ಬಿಜೆಪಿ ನಾಯಕಿಯರು ಮಾತನ್ನೇ ಆಡಿಲ್ಲ. ನಾಯಕರು ಬಾಯಿ ಬಿಟ್ಟಿಲ್ಲ. ತನ್ನ ಅಧಿಕಾರದ ದರ್ಪ ಬಳಸಿಕೊಂಡು ಹೀನ ಕೃತ್ಯ ಎಸಗಿರುವ ಈ ವ್ಯಕ್ತಿ ವಿರುದ್ಧ ಮೊದಲು ಮಾತನಾಡಬೇಕಿರುವುದು ಈ ದೇಶದ ಗೃಹಸಚಿವ ಅಮಿತ್ ಶಾ ಎಂದರು.

ಹೆಣ್ಣಿಗೆ ಯಾವುದೇ ಜಾತಿ, ಧರ್ಮ ಎಂಬುದಿಲ್ಲ. ನಾವು ಹೆಣ್ಣುಮಕ್ಕಳ ಪರವಾಗಿ ಮಾತನಾಡುತ್ತೇವೆ. ಬಿಜೆಪಿಯಂತೆ ಕೇವಲ ಪಕ್ಷಪಾತಿಗಳಾಗಿ ಮಾತನಾಡುವುದಿಲ್ಲ. ನಮಗೆ ನೇಹಾ, ರುಕ್ಷನಾ ಹಾಗೂ ಈ ನೀಚ ಸಂಸದನಿಂದ ಶೋಷಣೆಗೆ ಒಳಗಾಗಿರುವ ಎಲ್ಲಾ ಹೆಣ್ಣುಮಕ್ಕಳ ಪರವಾಗಿ ನಮ್ಮದು ಒಂದೇ ಹೋರಾಟದ ಧ್ವನಿ ಎಂದರು.

ಪ್ರಜ್ವಲ್ ರೇವಣ್ಣ ನಡೆಸಿರುವ ಕೃತ್ಯ ಇಡೀ ದೇಶದಲ್ಲೇ ಯಾವ ಜನಪ್ರತಿನಿದಿಯೂ ನಡೆಸದ ಕೃತ್ಯ. ಶೋಷಣೆಗೆ ಒಳಗಾಗಿರುವ ಮಹಿಳೆಯರು ದನಿ ಇಲ್ಲದ ಮಹಿಳೆಯರು. ಅವರ ದನಿಯಾಗಿ ನಾವು ಇಂದು ಇಲ್ಲಿ ಸೇರಿದ್ದೇವೆ. ಈ ಆರೋಪಿಗೆ ತಕ್ಕ ಶಿಕ್ಷೆ ಆಗಬೇಕು ಎಂದರೆ ಮಾಧ್ಯಮಗಳ ಸಹಕಾರ ಬೇಕು. ದೇಶದ ಯಾವುದೇ ರಾಜಕಾರಣಿ ಹೆಣ್ಣುಮಕ್ಕಳ ಬಗ್ಗೆ ಕೆಟ್ಟದಾಗಿ ಯೋಚನೆ ಮಾಡುವ ಕೃತ್ಯ ಈ ಘಟನೆಯಿಂದ ಹೋಗಬೇಕು. ಇಂದೇ ನಾವೆಲ್ಲ ದೊಡ್ಡ ಹೋರಾಟಕ್ಕೆ ನಾಂದಿ ಹಾಡಬೇಕು. ಇತಿಹಾಸ ಸೃಷ್ಟಿ ಮಾಡಬೇಕು ಎಂದು ಭವ್ಯ ನರಸಿಂಹಮೂರ್ತಿ ಹೇಳಿದರು.

ರೇಪಿಸ್ಟ್ ಗಳ ವಿರುದ್ಧ ಮೋದಿ ಒಂದು ಸಲವು ಮಾತನಾಡಿಲ್ಲ. ಬಿಜೆಪಿ ಮುಖಂಡ ದೇವರಾಜೆ ಗೌಡ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಳ್ಳಬೇಡಿ ಲೈಂಗಿಕ ಹಗರಣದ ವಿಡಿಯೋಗಳು ಇವೆ ಎಂದು ಮೋದಿ ಅವರಿಗೆ ಪತ್ರ ಬರೆದಿದ್ದರು. ಆದರೂ ಮೈತ್ರಿ ಮಾಡಿ ಕೊಂಡಿದ್ದು ಏಕೆ? ಕರ್ನಾಟಕದ ಹೆಣ್ಣುಮಕ್ಕಳ ಗೌರವವನ್ನು ಲೆಕ್ಕ ಹಾಕದೆ ನೀಚ ಮನುಷ್ಯನಿಗೆ ಟಿಕೆಟ್ ಕೊಟ್ಟಿದೆ ಬಿಜೆಪಿ. ಇದರಲ್ಲಿ ಜೆಡಿಎಸ್ ಕಾರ್ಯಕರ್ತರು ಇದ್ದಾರೆ. ಮನೆಕೆಲಸದ ಮಹಿಳೆ ಇದ್ದಾರೆ. ನಿಮ್ಮ ತಂದೆ, ತಾತನಿಗೆ ಊಟ ಬಡಿಸಿದ್ದೇನೆ ಎಂದರೂ ಆ ವ್ಯಕ್ತಿ ಬಿಟ್ಟಿಲ್ಲ. ರಕ್ಷಕನೇ ಭಕ್ಷಕನಾಗಿದ್ದಾನೆ ಎಂದು ಕಾಂಗ್ರೆಸ್ ವಕ್ತಾರೆ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷ ಈ ವಿಷಯದಲ್ಲಿ ಹೋರಾಟ ಮಾಡುತ್ತದೆ. ಮಹಿಳೆಯರಿಗೆ ನ್ಯಾಯ ದೊರೆಯುವಂತೆ ನೋಡಿಕೊಳ್ಳುತ್ತದೆ ಎಂದು ಭವ್ಯ ನರಸಿಂಹಮೂರ್ತಿ ಇದೇ ಸಂದರ್ಭ ಹೇಳಿದರು.

Join Whatsapp
Exit mobile version