Home ಟಾಪ್ ಸುದ್ದಿಗಳು ಮೋದಿಗೆ ನೈತಿಕತೆ ಇದ್ದರೆ ರಾಜೀನಾಮೆ ನೀಡಲಿ: ಅಬ್ದುಲ್ ಮಜೀದ್

ಮೋದಿಗೆ ನೈತಿಕತೆ ಇದ್ದರೆ ರಾಜೀನಾಮೆ ನೀಡಲಿ: ಅಬ್ದುಲ್ ಮಜೀದ್

ಬೆಂಗಳೂರು: ದೇಶದಲ್ಲಿ ಬಾಬಾ ಸಾಹೇಬರ ಸಂವಿಧಾನವನ್ನು ರದ್ದು ಮಾಡುವ ಮೂಲಕ ಪ್ರಜಾಪ್ರಭುತ್ವವನ್ನು ಅಂತ್ಯಗೊಳಿಸಿ ಸರ್ವಾಧಿಕಾರವನ್ನು ಬಿಗಿಗೊಳಿಸಲು ಹೊರಟಿದ್ದ ಬಿಜೆಪಿಯ ಸಂಚಿಗೆ ದೇಶದ ಜನತೆ ಚುನಾವಣೆಯಲ್ಲಿ ಸರಿಯಾಗೆ ಕಪಾಳಮೋಕ್ಷ ಮಾಡಿದ್ದಾರೆ. ಮೋದಿ ಸರ್ಕಾರವನ್ನು ಜನತೆ ಸರಳ ಬಹುಮತಕ್ಕೆ ಬೇಕಾದ 272 ಸ್ಥಾನಗಳನ್ನೂ ನೀಡದೆ ಕೇವಲ 240 ಸ್ಥಾನಗಳನ್ನು ನೀಡಿದ್ದಾರೆ. ಆ ಮೂಲಕ ಬಿಜೆಪಿ ಮತ್ತು ಮೋದಿಯವರ ದುರಾಡಳಿತವನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಮೋದಿಯವರಿಗೆ ನೈತಿಕತೆ ಇದ್ದರೆ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ಲಾ ಮಜೀದ್ ಅವರು ತಮ್ಮ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

2024 ರ ಲೋಕಸಭಾ ಚುನಾವಣೆಗಳ ಫಲಿತಾಂಶಗಳು ದೇಶಕ್ಕೆ ಹೊಸ ಭರವಸೆಯನ್ನು ನೀಡಿವೆ. ಇಂತಹ ಫಲಿತಾಂಶಕ್ಕೆ ಕಾರಣರಾದ ದೇಶದ ಜನತೆಗೆ ನಾನು ತುಂಬು ಹೃದಯದ ಧನ್ಯವಾದ ಮತ್ತು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಅದರಲ್ಲೂ ಉತ್ತರ ಪ್ರದೇಶದ ಜನತೆ ಪ್ರಜಾಪ್ರಭುತ್ವ ವಿರೋಧಿ ಬುಲ್ಡೋಜೋರ್ ಸಂಸ್ಕೃತಿಯನ್ನು ನೆಲಕಚ್ಚಿಸಿದೆ. ಅಲ್ಲಿನ 80 ಲೋಕಸಭಾ ಕ್ಷೇತ್ರಗಳ ಪೈಕಿ 47 ಸ್ಥಾನಗಳಲ್ಲಿ ಬಿಜೆಪಿಯನ್ನು ಸೋಲಿಸುವ ಮೂಲಕ ಬುಲ್ಡೋಜೋರ್ ಬಳಸಿ ಅಸಹಾಯಕರು, ಅಲ್ಪಸಂಖ್ಯಾತರು ಮತ್ತು ಬಡವರ ಮನೆಗಳನ್ನು ನಾಶ ಮಾಡುತ್ತಿದ್ದ ಆದಿತ್ಯನಾಥ್ ಗೆ ತಕ್ಕ ಪಾಠ ಕಲಿಸಿದ್ದಾರೆ ಎಂದು ದೇಶದ ಜನರನ್ನು ಮಜೀದ್ ಅವರು ತಮ್ಮ ಪ್ರಕಟಣೆಯ ಮೂಲಕ ಅಭಿನಂದಿಸಿದ್ದಾರೆ.

ಇಷ್ಟಾದರೂ ಕೋಮುವಾದಿ ಬಿಜೆಪಿ ಉಸಿರಾಡಲು ಇನ್ನೂ ಸ್ವಲ್ಪ ಮಟ್ಟಿನ ಅವಕಾಶ ಉಳಿದಿರುವುದು ಜಾತ್ಯಾತೀತ ಎಂದು ಕರೆಸಿಕೊಳ್ಳುವ ಪಕ್ಷಗಳ ಸ್ವಾರ್ಥದ ಕಾರಣಕ್ಕೆ. ಜಾತ್ಯಾತೀತ ಮತ್ತು ಪ್ರಾದೇಶಿಕ ಪಕ್ಷಗಳು ಇನ್ನಾದರೂ ತಮ್ಮ ಸ್ವಾರ್ಥ ಮತ್ತು ಹಮ್ಮು ಭಿಮ್ಮನ್ನು ಬದಿಗೆ ಸರಿಸಿ ತ್ಯಾಗದ ಮನೋಭಾವ ತೋರಬೇಕು. ಆ ಮೂಲಕ ಎಲ್ಲರೂ ಒಟ್ಟಾಗಿ ಸೇರಿ ಬಿಜೆಪಿಯೇತರ ಸರ್ಕಾರ ರಚನೆಯಾಗುವಂತೆ ನೋಡಿಕೊಳ್ಳಬೇಕಿದೆ. ನಮ್ಮ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಸಲು ಎಲ್ಲರೂ ತ್ಯಾಗ ಮಾಡಬೇಕಿದೆ ಎಂದು ಮಜೀದ್ ಅವರು ವಿರೋಧ ಪಕ್ಷಗಳಿಗೆ ತಮ್ಮ ಪ್ರಕಟಣೆಯ ಮೂಲಕ ಕರೆಕೊಟ್ಟಿದ್ದಾರೆ.

Join Whatsapp
Exit mobile version