ಗೋ ಕಳ್ಳರಿಗೆ ಬೆಂಬಲ ನೀಡಿದ ಪೊಲೀಸರ ವಿರುದ್ಧ ಮಾತನಾಡಿದ್ದೇನೆಯೇ ಹೊರತು ಎಲ್ಲ ಪೊಲೀಸರ ವಿರುದ್ಧವಲ್ಲ: ಸ್ಪಷ್ಟನೆ ನೀಡಿದ ಗೃಹ ಸಚಿವ

Prasthutha|

ಬೆಂಗಳೂರು: ನಾನು ಎಲ್ಲಾ ಪೊಲೀಸರ ವಿರುದ್ಧ ಮಾತನಾಡಿಲ್ಲ. ಗೋ ಕಳ್ಳರಿಗೆ ಬೆಂಬಲ ನೀಡುವ ಪೊಲೀಸರ ಬಗ್ಗೆಯಷ್ಟೇ ಮಾತನಾಡಿದ್ದೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ. ಪೊಲೀಸರ ಬಗ್ಗೆ ನನಗೆ ಗೌರವ ಇದೆ. ಮೊನ್ನೆ ಗೋ ಕಳ್ಳರನ್ನು ಹಿಡಿಯಲು ಹೋದವರ ಮೇಲೆಯೇ ಕಾರು ಹತ್ತಿಸಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡವರು ಆಸ್ಪತ್ರೆಗೆ ದಾಖಲಾಗಿದ್ದು ಅವರು ಬದುಕುಳಿದಿರುವುದು ಪವಾಡ. ಈ ಘಟನೆಯಿಂದ ಬೇಸರವಾಗಿ ಕೆಲವು ಪೊಲೀಸರ ಬಗ್ಗೆ ಮಾತನಾಡಿದ್ದೇನೆ ಎಂದು ಸ್ಪಷ್ಟನೆ ನೀಡಿದರು.

- Advertisement -


ಪೊಲೀಸರ ಮೇಲೆ ನನಗೆ ಗೌರವ ಇದೆ. ಎಲ್ಲಾ ಪೊಲೀಸರು ಒಂದೇ ರೀತಿ ಇರುವುದಿಲ್ಲ. ಕರ್ನಾಟಕದಲ್ಲಿ ದಕ್ಷ ಪೊಲೀಸರೂ ಇದ್ದಾರೆ ಎಂದು ಸುದ್ದಿಗಾರರಿಗೆ ತಿಳಿಸಿದರು. ಶಾಸಕ ಎಸ್.ಆರ್.ವಿಶ್ವನಾಥ್ ಕೊಲೆ ಸಂಚು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಯಾವ ಶಾಸಕರಿಗೂ ಹಾಗೆ ಆಗಬಾರದು. ಮುಖವಾಡ ಕಳಚುವಂತೆ ಮಾಡುತ್ತೇವೆ. ಪೊಲೀಸ್ ಕಾಯಿದೆ ಪ್ರಕಾರ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಶಾಸಕ ವಿಶ್ವನಾಥ್ ಅವರಿಗೆ ಎಲ್ಲಾ ಭದ್ರತೆ ನೀಡಲಾಗಿದೆ ಎಂದರು.


ಓಮಿಕ್ರಾನ್ ಹೊಸ ವೈರಸ್ ಬಗ್ಗೆ ಹೆಚ್ಚು ಮಾತನಾಡುವುದು ಬೇಡ, ಎಚ್ಚರಿಕೆ ಬೇಕು. ಗೈಡ್ ಲೈನ್ ಏನ್ ಬರುತ್ತೋ, ಅದಕ್ಕೆ ನಮ್ಮ ಇಲಾಖೆ ಸಹಕಾರ ನೀಡುತ್ತದೆ. ಇದು ಸಾವು, ಬದುಕಿನ ಪ್ರಶ್ನೆ. ಪೊಲೀಸರು ಏನೆಲ್ಲಾ ಮಾಡಬೇಕು ಎಂದು ನಾವು ಸೂಚಿಸುತ್ತೇವೆ ಎಂದು ಪ್ರತಿಕ್ರಿಯಿಸಿದರು.

Join Whatsapp