ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯರಿಂದ ಬಡ ಮಹಿಳೆಯ ಮನೆ ದುರಸ್ಥಿ

Prasthutha|

►SDPI ಸದಸ್ಯ ನಾಗೇಶ್ ಕುರಿಯ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ
ಬಡ ಒಂಟಿ ಮಹಿಳೆಯ ಮನೆ ದುರಸ್ಥಿ ಮಾಡಿ ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯರಾದ ನಾಗೇಶ್ ಕುರಿಯ ವ್ಯಾಪಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕುರಿಯ ಗ್ರಾಮದ ಅಜಿಲಾಡಿ ಜನತಾ ಕಾಲನಿಯಲ್ಲಿ ಹಲವಾರು ವರ್ಷಗಳಿಂದ ವಾಸಿಸುತ್ತಿರುವ ತೀರಾ ಬಡತನದಲ್ಲಿರುವ ಸರೋಜಿನಿ ರೈ ಎಂಬ ಒಂಟಿ ಮಹಿಳೆಯ ಮನೆ ಕುಸಿಯುವ ಸ್ಥಿತಿಯಲ್ಲಿದ್ದು, ಹಲವಾರು ಜನಪ್ರತಿನಿಧಿಗಳು ಮತ್ತು ಪರಿಚಯಸ್ಥರಲ್ಲಿ ಮನೆ ನಿರ್ಮಿಸಲು ಸಹಕರಿಸುವಂತೆ ಕೋರಿಕೊಂಡಿದ್ದರು.

- Advertisement -
ಪಂಚಾಯತ್ ಸದಸ್ಯ ನಾಗೇಶ್ ಕುರಿಯ

ಬಹಳಷ್ಟು ಜನ ಭರವಸೆ ಕೊಟ್ಟಿರುವುದೇ ವಿನಃ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಗೆ ಆ ಬಡ ಮಹಿಳೆ ಎಸ್ಡಿಪಿಐ ಬೆಂಬಲಿತ ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯರಾದ ನಾಗೇಶ್ ಕುರಿಯ ಅವರಲ್ಲಿ ತನ್ನ ಕಷ್ಟವನ್ನು ತಿಳಿಸಿದಾಗ ತಕ್ಷಣ ಸ್ಪಂದಿಸಿದ ನಾಗೇಶ್ ಕುರಿಯ ಅವರು ತಮ್ಮ ಪಕ್ಷದ ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರ ಜೊತೆ ಚರ್ಚಿಸಿ ಮನೆಯ ದುರಸ್ಥಿ ಕಾರ್ಯಗಳನ್ನು ಪೂರ್ಣಗೊಳಿಸಿ ಊರಿನ ಸರ್ವ ಧರ್ಮೀಯರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಮಹಿಳೆ, ಊರಿನ ಹಲವರ ಬಳಿ ಮನೆ ದುರಸ್ಥಿ ಮಾಡಿಕೊಡಲು ಕೇಳಿಕೊಂಡರೂ ಯಾರೂ ಪ್ರತಿಕ್ರಿಯಿಸಲೇ ಇಲ್ಲ. ಈ ಹಿನ್ನೆಲೆಯಲ್ಲಿ ಪಂಚಾಯತ್ ಸದಸ್ಯರಾದ ನಾಗೇಶ್ ಕುರಿಯ ಅವರ ಬಳಿ ಕೇಳಿಕೊಂಡಾಗ ತಕ್ಷಣ ಸ್ಪಂದಿಸಿ ಮನೆ ದುರಸ್ಥಿ ಕಾರ್ಯ ಮಾಡಿಕೊಟ್ಟಿದ್ದಾರೆ ಎಂದರು.

- Advertisement -

ಮನೆ ದುರಸ್ಥಿ ಕಾರ್ಯದಲ್ಲಿ ಎಸ್ಡಿಪಿಐ ವಲಯ ಅಧ್ಯಕ್ಷರಾದ ಬಶೀರ್, ಪಿಎಫ್ಐ ಸಂಪ್ಯ ವಲಯ ಅಧ್ಯಕ್ಷರಾದ ಅಶ್ರಫ್ ಸಂಟ್ಯಾರ್, ಕುರಿಯ ಬ್ರಾಂಚ್ ಅಧ್ಯಕ್ಷರಾದ ಅಶ್ರಫ್ ಕುರಿಯ, ಕಾರ್ಯದರ್ಶಿಗಳಾದ ಸಮೀರ್ ಕುರಿಯ ಮತ್ತಿತರರು ಉಪಸ್ಥಿತರಿದ್ದರು.

Join Whatsapp