ಗೃಹ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು: ವಿ.ಎಸ್ ಉಗ್ರಪ್ಪ

Prasthutha|

ಬೆಂಗಳೂರು: ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರಕ ಪ್ರಕರಣಕ್ಕೆ ಸಂಬಂಧಿಸಿ ಸರ್ಕಾರದ ನಿರ್ಲಕ್ಷ್ಯ ಧೋರಣೆ ಎದ್ದು ಕಾಣುತ್ತಿದ್ದು, ಗೃಹ ಸಚಿವ ಅರಗ ಜ್ಞಾನೇಂದ್ರ ರಾಜೀನಾಮೆ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ ಒತ್ತಾಯಿಸಿದ್ದಾರೆ.

- Advertisement -


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಾನವೀಯ ಮೌಲ್ಯಗಳಿಗೆ ಒತ್ತು ಕೊಟ್ಟಿರುವ ರಾಜ್ಯ ಕರ್ನಾಟಕ. ಆದರೆ ಮೈಸೂರಿನಲ್ಲಿ ಮಂಗಳವಾರ ನಡೆದಿರುವ ಕೃತ್ಯ, ಅತ್ಯಂತ ಅಮಾನವೀಯ ಕೃತ್ಯ. ನಭೂತೋ, ನಭವಿಷ್ಯತಿ ಎಂಬ ರೀತಿಯಲ್ಲಿ ದೆಹಲಿಯ ನಿರ್ಭಯ, ತೆಲಂಗಾಣದ ಪ್ರಿಯಾಂಕ ರೆಡ್ಡಿ ಅವರ ಪ್ರಕರಣಕ್ಕಿಂತ ಹೀನಾಯವಾದ ಕೃತ್ಯ ಇದಾಗಿದೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಪೋಲೀಸ್ ಕಾರ್ಯವೈಖರಿ ನೋಡಿದರೆ, ಯಾವ ದೇಶದಲ್ಲಿ ರಾಮಮಂದಿರ ಕಟ್ಟಿ, ರಾಮನ ಜಪ ಮಾಡುತ್ತಿರುವ ಬಿಜೆಪಿಯು ರಾವಣನ ಕ್ರೌರ್ಯ ಮೆರೆಯುತ್ತಿದೆ. ಸರ್ಕಾರದ ಘನತೆ ಉಳಿಸಿಕೊಳ್ಳುವ ಸಲುವಾಗಿ ಈ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.


ಮಂಗಳವಾರ ರಾತ್ರಿ ಈ ಪೈಶಾಚಿಕ ಕೃತ್ಯ ನಡೆದಿದ್ದು, ನಂತರ ಸುಮಾರು 11 ಗಂಟೆಗೆ ಸಂತ್ರಸ್ತ ಹೆಣ್ಣು ಮಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಯ ಅಂಗಾಗಗಳ ಮೇಲೆ ತೀವ್ರವಾಗಿ ದಾಳಿ ನಡೆದಿರುವ ಗಾಯಗಳಾಗಿವೆ. ಬುಧವಾರ ಸಂಜೆ 4 ಗಂಟೆವರೆಗೂ ಪ್ರಕರಣ ದಾಖಲಾಗುವುದಿಲ್ಲ. ನಂತರ ಪೊಲೀಸರು 354ಎ ಸೆಕ್ಷನ್ ನಲ್ಲಿ ಲೈಂಗಿಕ ದೌರ್ಜನ್ಯ ಹಾಗೂ ಅದಕ್ಕೆ ಶಿಕ್ಷೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆಯೇ ಹೊರತು. 376 ಸೆಕ್ಷನ್ ಅಡಿಯಲ್ಲಿ ಪ್ರಕರಣವನ್ನು ಯಾಕೆ ದಾಖಲಿಸಿಲ್ಲ. ಪೊಲೀಸರ ಮಾಹಿತಿ ಪ್ರಕಾರ ಇದನ್ನು ಸಾಮೂಹಿಕ ಅತ್ಯಾಚಾರ ಎಂದು ಪ್ರಕರಣ ದಾಖಲಿಸಿದರೆ, ದೆಹಲಿ ಹಾಗೂ ತೆಲಂಗಾಣದ ಪ್ರಕರಣಕ್ಕಿಂತ ಗಂಭೀರವಾಗಲಿದೆ ಎಂಬ ಕಾರಣಕ್ಕೆ ಈ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಲ್ಲ ಎಂಬ ಮಾಹಿತಿ ಬಂದಿದೆ ಎಂದು ಉಗ್ರಪ್ಪ ಆರೋಪಿಸಿದರು.

- Advertisement -

ನಿರ್ಭಯ ಕೇಸ್ ನಡೆದಾಗ ಮೋದಿ ಹಾಗೂ ಬಿಜೆಪಿ ನಾಯಕರು ಪ್ರಧಾನಮಂತ್ರಿಗಳ ರಾಜೀನಾಮೆ ಕೇಳಿದ್ದಿರಿ. ಇಂದು ಅರಗ ಜ್ಞಾನೆಂದ್ರ ಅವರ ಕ್ಷೇತ್ರದಲ್ಲಿ ನಂದಿತಾ ಎಂಬ ಹುಡುಗಿ ಅತ್ಯಾಚಾರಕ್ಕೆ ಒಳಗಾಗಿ ಹತ್ಯೆಯಾದಾಗ ಅದಕ್ಕೆ ಒಂದು ವರ್ಗ ಕಾರಣ ಎಂದು ರಾಜೀನಾಮೆ ಕೇಳಿದ್ದರು. ಆದರೆ ಇಂದು ಯಾವ ಮುಖ ಇಟ್ಟುಕೊಂಡು ಸಮರ್ಥನೆ ಮಾಡಿಕೊಳ್ಳುತ್ತಿದ್ದೀರಿ. ಇನ್ನು ಮೈಸೂರಿನ ಪೊಲೀಸ್ ಆಯುಕ್ತರು ಇಂತಹ ಘಟನೆ ಇದೇ ಮೊದಲಲ್ಲ ಎಂಬ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಹಾಗಾದರೆ ಕಳೆದ 2 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಸರ್ಕಾರದಲ್ಲಿ ಮುಖ್ಯಮಂತ್ರಿಗಳೇ ಗೃಹ ಸಚಿವರಾಗಿದ್ದರು. ಅಲ್ಲಿ ಇಂತಹ ಘಟನೆ ನಡೆಯುತ್ತಿದ್ದರೂ ಕ್ರಮ ಜರುಗಿಸದಿದ್ದರೆ, ಸರ್ಕಾರದ ನಿರ್ಲಕ್ಷ್ಯ ಧೋರಣೆ ಎದ್ದು ಕಾಣುತ್ತದೆ. ಈ ಬಗ್ಗೆ ಮುಖ್ಯಮಂತ್ರಿಗಳೇ ಉತ್ತರಿಸಬೇಕು ಎಂದು ಹೇಳಿದರು.

ಕಳೆದ ಮೂವತ್ತು ದಿನಗಳಲ್ಲಿ ಮೈಸೂರಿನಲ್ಲಿ 3 ಹತ್ಯೆಗಳು ನಡೆದಿವೆ. 1 ಶೂಟೌಟ್ ಆಗಿದೆ. ಸುಮಾರು 16 ಸುಲಿಗೆಗಳು, 3 ದರೋಡೆ, ಇಂದು ಬೆಳಗ್ಗೆ ಸರಸ್ವತಿಪುರಂ ಠಾಣೆ ವ್ಯಾಪ್ತಿಯಲ್ಲಿ 12 ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆದಿದೆಎಂದು ಪ್ರಕರಣ ದಾಖಲಾಗಿದೆ. ಆ ಜಿಲ್ಲಾ ಮಂತ್ರಿಗಳು, ರಾಜ್ಯದ ಗೃಹಸಚಿವರು, ರಾಜ್ಯದ ಮುಖ್ಯಮಂತ್ರಿಗಳು ಏನು ಮಾಡುತ್ತಿದ್ದಾರೆ? ಎಂದು ಪ್ರಶ್ನಿಸಿದರು.


ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವುದು ಒಂದೆಡೆಯಾದರೆ, ಇದರ ನೈತಿಕತೆ ಹೊರಬೇಕಾದವರು ಯಾರು? ರಾಮನ ಜಪ ಮಾಡುತ್ತಿರುವವರು ಹೆಣ್ಣು ಮಕ್ಕಳ ರಕ್ಷಣೆ ಮಾಡುತ್ತಿದ್ದಾರಾ? ಈ ದೇಶದ ಪ್ರಧಾನ ಮಂತ್ರಿಗಳು ಅವರ ಮನೆಯ ಹೆಣ್ಣುಮಕ್ಕಳಿಗೆ ರಕ್ಷಣೆ ನೀಡಲು ಆಗುತ್ತಿಲ್ಲ. ಅವರ ಶ್ರೀಮತಿ ಅವರಿಗೆ ಜೀವನಾಂಶ ಹಾಗೂ ರಕ್ಷಣೆ ನೀಡುತ್ತಿಲ್ಲ. ಇನ್ನು ದೇಶದಲ್ಲಿ ಹೆಣ್ಣು ಮಕ್ಕಳಿಗೆ ಹೇಗೆ ರಕ್ಷಣೆ ಸಿಗುತ್ತದೆ? ಈ ಹಿಂದೆ ಅರಗ ಜ್ಞಾನೇಂದ್ರ ಅವರೇ ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ರಾಜೀನಾಮೆ ಕೇಳಿದ್ದರು. ಅವರಿಗೆ ಬದ್ಧತೆ ಇದ್ದರೆ ಕೂಡಲೇ ರಾಜೀನಾಮೆ ನೀಡಬೇಕು.

ಹೆಣ್ಣು ಮಕ್ಕಳನ್ನು ಎರಡನೇ ದರ್ಜೆಯಲ್ಲಿ ಕಾಣುತ್ತಿರುವ ಬಿಜೆಪಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಆಡಳಿತ ನಡೆಸುತ್ತಿರುವುದೇ ಇಂತಹ ಪರಿಸ್ಥಿತಿಗೆ ಕಾರಣ. ಬಿಜೆಪಿ ಶಾಸಕರು, ಮಂತ್ರಿಗಳು ರೇಪ್ ಮಾಡಿದ್ದಾರೆ ಎಂದು ಆರೋಪಿಸಿದ ಹೆಣ್ಣಿನ ಮೇಲೆ ಸರ್ಕಾರ ಪ್ರಕರಣ ದಾಖಲಿಸುತ್ತದೆ. ಆಕೆಯ ಆರೋಪದ ಮೇಲೆ ತನಿಖೆ ನಡೆಯುತ್ತಿಲ್ಲ. ಆರೋಪ ಹೊತ್ತಿರುವ ಶಾಸಕರ ಮೇಲೆ ಆರೋಪಪಟ್ಟಿ ಅಥವಾ ಬಿ ರಿಪೋರ್ಟ್ ಯಾಕೆ ದಾಖಲಿಸಿಲ್ಲ. ಇದು ರಾಜ್ಯದಲ್ಲಿ ಯಾರೇ ಅತ್ಯಾಚಾರ ಮಾಡಿದರೂ ಅವರಿಗೆ ಏನೂ ಮಾಡುವುದಿಲ್ಲ ಎಂಬ ಸಂದೇಶ ರವಾನೆಯಾಗಿದೆ. ಇದೇ ಕಾರಣಕ್ಕೆ ಈ ರೀತಿ ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ ಎಂದು ಹೇಳಿದರು.


ಕಾಂಗ್ರೆಸ್ ಮುಖಂಡ ಎಚ್.ಎಂ ರೇವಣ್ಣ ಮಾತನಾಡಿ, ‘ಈ ಬಿಜೆಪಿ ಸರ್ಕಾರದ ಅವಧಿಯಲ್ಲಿನ ಘಟನೆ ನೆನೆಸಿಕೊಂಡರೆ ಆಘಾತವಾಗುತ್ತದೆ. ಒಮ್ಮೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಪತ್ರಕರ್ತೆ ಪ್ರಶ್ನೆ ಮಾಡಿದಾಗ ಸಚಿವ ಈಶ್ವರಪ್ಪ ಅವರು, ನಿನ್ನ ಮೇಲೆ ರೇಪ್ ಆಗಿದೆಯಾ? ಎಂದು ಕೇಳುತ್ತಾರೆ. ಇಂತಹ ನಾಯಕರನ್ನು ನಾವು ಪಡೆದಿದ್ದೇವೆ. ವಿಧಾನಸೌಧದಲ್ಲಿ ಬ್ಲೂಫಿಲಂ ನೋಡಿದವರು ಇಂದು ಮತ್ತೆ ಮಂತ್ರಿಯಾಗಿ ಆಡಳಿತ ನಡೆಸುತ್ತಿದ್ದಾರೆ.

ಇದೇ ವೇಳೆ ರಘುಪತಿ ಭಟ್ ಅವರ ಪ್ರಕರಣ ನೆನಪಿಗೆ ಬರುತ್ತದೆ. ಅರಗ ಜ್ಞಾನೇಂದ್ರ ಅವರು ತೀರ್ಥಹಳ್ಳಿಯಲ್ಲಿ ನಂದಿತಾ ಅವರ ಪ್ರಕರಣ ಸಂದರ್ಭದಲ್ಲಿ ಕಿಮ್ಮನೆ ರತ್ನಾಕರ ಅವರ ಪ್ರವೇಶಕ್ಕೆ ಅಡ್ಡಿ ಮಾಡಿ ರಾದ್ಧಾಂತ ಮಾಡಿದ್ದರು. ಈಗ ಗೃಹ ಸಚಿವರಾಗಿರುವ ಅವರು ತಾವು ಹೋಗುವವರೆಗೂ ಯಾವುದೇ ಹೇಳಿಕೆ ನೀಡುವಂತಿಲ್ಲ ಎಂಬ ಆದೇಶ ಕೊಟ್ಟಿದ್ದಾರೆ. ಇವರು ಯಾವರೀತಿ ಕಾರ್ಯ ಮಾಡುತ್ತಿದ್ದಾರೆ ಎಂಬ ಅನುಮಾನ ಮೂಡುತ್ತದೆ. ಇದು ಪ್ರಕರಣ ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ. ನಿನ್ನೆಯಿಂದ ನಮ್ಮ ವಿವಿಧ ಘಟಕಗಳು ಪ್ರತಿಭಟನೆ ನಡೆಸುತ್ತಿದ್ದು, ಮನುಷ್ಯತ್ವ ಇರುವ ಎಲ್ಲರೂ ಇದಕ್ಕೆ ಬೆಂಬಲ ನೀಡಬೇಕು. ನಿರ್ಭಯಾ ಪ್ರಕರಣದಲ್ಲಿ ವರ್ಮಾ ಆಯೋಗ ಇಂತಹ ಪ್ರಕರಣದಲ್ಲಿ ದೂರು ದಾಖಲಾಗದಿದ್ದರೂ ಸುಮೋಟೋ ಪ್ರಕರಣ ದಾಖಲಿಸಬೇಕು ಎಂದು ಹೇಳಿತ್ತು. ಆದರೆ ಇಲ್ಲಿ ಘಟನೆ ನಡೆದ 48 ಗಂಟೆ ನಡೆದರೂ ಸರಿಯಾದ ಕ್ರಮ ಕೈಗೊಳ್ಳದಿರುವುದು ಪೊಲೀಸರು ಇದನ್ನು ಮುಚ್ಚಿಹಾಕುವುದರಲ್ಲಿ ಶಾಮೀಲಾಗಿದ್ದಾರೆ ಎಂಬುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.

Join Whatsapp