ಸಿದ್ದರಾಮಯ್ಯ ಇಲ್ಲಿಗೆ ನಿಲ್ಲಿಸಿ, ನೀವು ನಿಲ್ಲಿಸದಿದ್ದರೆ ನಾನು ನಿಲ್ಲಿಸುವುದಿಲ್ಲ: ಹೆಚ್ ಡಿಕೆ

Prasthutha|

ಬಿಡದಿ: “ಸಿದ್ದರಾಮಯ್ಯನವರೇ ಇಷ್ಟು ದಿನ ನನ್ನ ಬಗ್ಗೆ ಮತ್ತು ನನ್ನ ಪಕ್ಷದ ಬಗ್ಗೆ ಮಾತನಾಡಿದ್ದು ಸಾಕು. ಎಲ್ಲವನ್ನೂ ಇಲ್ಲಿಗೆ ನಿಲ್ಲಿಸಿ. ನೀವು ನಿಲ್ಲಿಸದಿದ್ದರೆ ನಾನೂ ಮಾತನಾಡುವುದನ್ನು ಮುಂದುವರೆಸಬೇಕಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎಚ್ಚರಿಸಿದ್ದಾರೆ.

- Advertisement -

ಬಿಡದಿ ತೋಟದಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು; ಸಿದ್ದರಾಮಯ್ಯ ಅವರು ಮೊದಲು ನಮ್ಮ ಬಗ್ಗೆ ಮಾತನಾಡುವುದನ್ನು ನಿಲ್ಲಿಸಲಿ. ಆಮೇಲೆ ನಾನು ಮಾತನಾಡುವುದನ್ನು ನಿಲ್ಲಿಸುತ್ತೇನೆ ಎಂದರು.

ತಮ್ಮ ಮಾತಿನುದ್ದಕ್ಕೂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಹೆಚ್ ಡಿಕೆ ಅವರು ಹೇಳಿದ ಮಾತುಗಳು ಹೀಗಿವೆ;
*ಸಿದ್ದರಾಮಯ್ಯ ವಿಶ್ವಾಸಕ್ಕೆ ಅರ್ಹವಲ್ಲದ ವ್ಯಕ್ತಿ. ಅವರು ನಮ್ಮ ಪಕ್ಷದ ವಿರುದ್ಧ ಸರಣಿ ಹೇಳಿಕೆಗಳನ್ನು ನೀಡುತ್ತಿರುವುದು ಒಂದೆಡೆ ಆಗುತ್ತಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ಪಕ್ಷವನ್ನು ಕುತಂತ್ರದಿಂದ ಅವರೇ ಮತ್ತಷ್ಟು ಮುಳುಗಿಸುತ್ತಿದ್ದಾರೆ.

- Advertisement -

*ನನ್ನ ನೇತೃತ್ವದ ಸಮ್ಮಿಶ್ರ ಸರಕಾರ ಬೀಳಲು ನೇರ ಕಾರಣ ಸಿದ್ದರಾಮಯ್ಯ ಅವರೇ. ಅವರೇ ಶಾಸಕರನ್ನು ಬಿಜೆಪಿಗೆ ಕಳಿಸಿದ್ದು.
*ಸಮ್ಮಿಶ್ರ ಸರಕಾರ ಬಂದ ಒಂದೇ ತಿಂಗಳಲ್ಲಿ ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾಲಯದಲ್ಲಿ (ಸಿದ್ದವನ) ಕೂತುಕೊಂಡು ಸಿದ್ದ ಸೂತ್ರ ರೂಪಿಸಿದ್ದು ಯಾರು? ತಮ್ಮ ಬೆಂಬಲಿಗರನ್ನು ಅಲ್ಲಿಗೆ ಕರೆಸಿಕೊಂಡು ಇನ್ನೊಂದು ವರ್ಷ ಈ ಸರಕಾರ ಇರುತ್ತೆ, ಆಮೇಲೆ ನೋಡೋಣ ಅಂದಿದ್ದು ಯಾರು? ಒಂದು ವಿಡಿಯೋ ವೈರಲ್ ಆಗಿತ್ತಲ್ಲ ಸಿದ್ದರಾಮಯ್ಯನವರೇ.
*ನನ್ನ ಸರಕಾರವನ್ನು ತೆಗೆಯಲು ಸಿದ್ಧಸೂತ್ರ ಸಿದ್ಧಪಡಿಸಿದ್ದೇ ನೀವು. ಸರಕಾರ ಇನ್ನೂ ಟೇಕಾಫ್ ಆಗುವ ಮುನ್ನವೇ ಅದನ್ನು ಉರುಳಿಸಲು ಪ್ಲಾನ್ ಮಾಡಿದ ನೀವು ಈಗ ನನ್ನ ಬಗ್ಗೆ ಹೇಳಿಕೆ ನೀಡುತ್ತಿದ್ದೀರಿ. ಇದಕ್ಕಿಂತ ದೊಡ್ಡ ವಿಕೃತಿ ಇನ್ನೇನಿದೆ?
*ನಿಮ್ಮ ಶಾಸಕರ ವಿಚಾರಲ್ಲಿ ನಾನು ಯಾವ ರೀತಿ ನಡೆದುಕೊಂಡೆ ಎಂಬುದು ನನಗೆ ಮಾತ್ರ ಗೊತ್ತು. ನೀವು ಅಧಿಕಾರದಿಂದ ಕೆಳಗಿಳಿದ ನಂತರವೂ ನನಗೆ ನೀವು ಅಧಿಕೃತ ನಿವಾಸ ಬಿಟ್ಟುಕೊಡಲಿಲ್ಲ. ಜೆ ಪಿ ನಗರದಿಂದ ದಿನವೂ ನಾನು ಓಡಾಡುವುದು ಜಾರಿಗೆ ತೊಂದರೆ ಆಗುತ್ತಿತ್ತು. ಆ ಕಾರಣಕ್ಕೆ ನಾನು ವೆಸ್ಟ್ ಎಂಡ್ ಹೋಟೆಲ್ ಗೆ ಮಧ್ಯಾಹ್ನದ ಊಟಕ್ಕೆ ಹೋಗಬೇಕಾಯಿತು. ಅಲ್ಲಿ ನಾನು ಮೋಜು ಮಾಸ್ತಿ ಮಾಡಲು ಹೋಗಲಿಲ್ಲ. ಉಳಿಯಲೂ ಇಲ್ಲ. ಬೆಳಗ್ಗೆ 9 ಗಂಟೆಗೆ ಕೆಲಸ ಶುರು ಮಾಡಿದರೆ ರಾತ್ರಿ 12 ಗಂಟೆವರೆಗೂ ಕೃಷ್ಣ ಕಚೇರಿಯಲ್ಲಿ ಅಧಿಕಾರಿಗಳ ಜತೆ ಸಭೆ ಮಾಡುತ್ತಿದ್ದೆ. ಎಲ್ಲಕ್ಕೂ ದಾಖಲೆ ಇರುತ್ತದೆ, ಪರಿಶೀಲನೆ ಮಾಡಿಕೊಳ್ಳಿ ಸಿದ್ದರಾಮಯ್ಯನವರೇ. ನೀವೆಲ್ಲ ಸೇರಿ ಸರಕಾರವನ್ನು ಕೆಡವಲು ಸ್ಕೆಚ್ ಹಾಕಿದಾಗ ನಾನು ಅಮೆರಿಕದಲ್ಲಿ ಇದ್ದೆ, ನಿಜ. ಅಂದು ಆದಿಚನಗಿರಿ ಶ್ರೀಗಳು ಅಮೆರಿಕದಲ್ಲಿ ಶ್ರೀ ಕಾಲಭೈರವೇಶ್ವರ ದೇಗುಲ ನಿರ್ಮಾಣಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮ ಇಟ್ಟುಕೊಂಡಿದ್ದರು. ಆಗ ಸ್ವಾಮೀಜಿ ಅವರು ಕರೆದ ಕಾರಣ ನಾನು ಅಮೆರಿಕಕ್ಕೆ ಹೋಗಬೇಕಾಯಿತು.


*ಆಗ ನಾನು ಅಮೆರಿಕದಲ್ಲಿ ಇದ್ದ ಕುಮಾರಸ್ವಾಮಿ ಅವರಿಗೆ ಕರೆ ಮಾಡಿ, ಬೇಗ ವಾಪಸ್ ಬನ್ನಿ ಕುಮಾರಸ್ವಾಮಿ. ಇಲ್ಲಿ ಆಪರೇಷನ್ ಕಮಲ ನಡೀತಿದೆ ಎಂದು ಕರೆ ಮಾಡಿದ್ದೆ ಎಂದು ಹೇಳಿದ್ದೀರಿ. ಯಾರಿಗೆ ಕರೆ ಮಾಡಿದ್ದೀರಿ? ಯಾವ ನಂಬರ್ ಗೆ ಕರೆ ಮಾಡಿದ್ದೀರಿ? ಸ್ವಲ್ಪ ಆ ನಂಬರ್ ಇದ್ದರೆ ಕೊಡುತ್ತೀರಾ?
*ಸುಳ್ಳು ಹೇಳುವುದಕ್ಕೂ ಒಂದು ಮಿತಿ ಬೇಡವೇ. ಇಂತ ಹಸಿಸುಳ್ಳು ಯಾಕೆ ಹೇಳುತ್ತೀರಿ? ನಿಮ್ಮ ಪಕ್ಷದಿಂದ ಉಪ ಮುಖ್ಯಮಂತ್ರಿ ಆಗಿದ್ದವರು ಮಾತ್ರ ಕರೆ ಮಾಡಿ, ಇಲ್ಲಿ ಅಂತದ್ದೇನು ಆಗುತ್ತಿಲ್ಲ ಕುಮಾರಸ್ವಾಮಿ ಅವರೇ. ನೀವು ಆರಾಮವಾಗಿ ಬನ್ನಿ ಎಂದು ಹೇಳಿದ್ದರು. ಆದರೆ, ನಿಮ್ಮ ಕ್ಯಾಂಪಿನಲ್ಲಿ ಬೇರೆಯದ್ದೇ ನಡೆಯುತ್ತಿತ್ತು. ಅಷ್ಟೂ ಮಾಹಿತಿ ನಂಗೆ ಇರಲ್ಲ ಎನ್ನುವಷ್ಟು ಹುಂಬತನವೇ ನಿಮಗೆ?
*ಮೈತ್ರಿ ಸರ್ಕಾರ ನಡೆಸಲು ನನಗೂ ಕೂಡ ಇಷ್ಟ ಇರಲಿಲ್ಲ? ಯಾವಾಗ ಅಧಿಕೃತ ನಿವಾಸ ಸಿಗದೇ ಇದ್ದಾಗಲೇ ಇವರು ನನ್ನ ಸರಕಾರ ತೆಗಿತಾರೆ ಎನ್ನುವ ಅನುಮಾನ ನನಗಿತ್ತು. ಅದಕ್ಕೆ ನಾನು ಸರಕಾರದ ಕಾರನ್ನು ಕೂಡ ಬಳಕೆ ಮಾಡಿಕೊಳ್ಳಲಿಲ್ಲ. ಕೊನೆಪಕ್ಷ ಭತ್ಯೆಗಳನ್ನು ಕೂಡ ಪಡೆಯಲಿಲ್ಲ.


*ನಿಮ್ಮ ಶಾಸಕರು ನನ್ನ ಬಳಿ ಬಂದು ಪತ್ರಗಳನ್ನು ಹೇಗೆ ಕೊಡುತ್ತಿದ್ದರು ಎನ್ನುವ ಮಾಹಿತಿ ಎಲ್ಲರಿಗೂ ಗೊತ್ತಿದೆ. ಒಬ್ಬ ಮುಖ್ಯಮಂತ್ರಿ ಮುಂದೆ ಮನವಿ ಪತ್ರಗಳನ್ನು ಬಿಸಾಡುತ್ತಿದ್ದರು. ಅದಕ್ಕೆಲ್ಲಾ ಕುಮ್ಮಕು ನೀಡಿದ್ದು ಯಾರು?
*ಎಂಟಿಬಿ ನಾಗರಾಜು ಹೇಳ್ತಾ ಇದ್ರು. ನನ್ನ ಎದೆ ಬಗೆದರೆ ಸಿದ್ದರಾಮಯ್ಯ ಕಾಣ್ತಾರೆ ಅಂತಿದ್ರು. ಅಂತ ವ್ಯಕ್ತಿ ಬಿಜೆಪಿಗೆ ಹೋಗಿದ್ದು ಹೇಗೆ? ನಿಮಗೆ ಏನೂ ಗೊತ್ತಿಲ್ಲವೆ ಸಿದ್ದರಾಮಯ್ಯ?
*ನಮ್ಮ ಪಕ್ಷದ ಶಾಸಕರು 3 ಜನ ಪಕ್ಷ ಬಿಟ್ಟು ಹೋದರು ನಿಜ. ಅದಕ್ಕೆ ಮೂಲ ಕಾರಣರು, ಅದಕ್ಕೆ ಸಿದ್ಧಸೂತ್ರಗಳನ್ನು ರೂಪಿಸಿದವರು ಯಾರು ಎನ್ನುವುದು ನನಗಿಂತ ನಿಮಗೆ ಚೆನ್ನಾಗಿ ಗೊತ್ತು.


*ನೀವೆಲ್ಲಾ ಮಾಡಿದ ಹುನ್ನಾರಕ್ಕೆ ಸರ್ಕಾರ ಪತನವಾಯಿತು. ಬಡವರಿಗೆ ಸುಲುಭವಾಗಿ ನಾನು ಸಿಎಂ ಆಗಿ ಎಲ್ಲರಿಗೂ ಸಿಗುತ್ತಿದ್ದೆ. ಆದರೆ, ನೀವು ಸಿಎಂ ಆಗಿದ್ದಾಗ ಸಂಜೆ 6 ಗಂಟೆ ಮೇಲೆ ಸಿಕ್ತಾ ಇರಲಿಲ್ಲ. ಎಲ್ಲಿ ಹೋಗ್ತಾ ಇದ್ರಿ ಸಿದ್ದರಾಮಯ್ಯನವರೇ. ಗಡದ್ದಾಗಿ ಊಟ ಮಾಡಿ ನಿದ್ದೆ ಮಾಡ್ಕೊಂಡು ಇರ್ತಿದ್ರಾ, ಹೇಗೆ?
*ರಮೇಶ್ ಜಾರಕಿಹೊಳಿಗೂ ನನಗೂ ಭಿನ್ನಮತ ಇತ್ತಾ? ಅದು ನಿಮ್ಮ ಪಕ್ಷದಲ್ಲಿ ಶುರುವಾದ ಸಮಸ್ಯೆ. ಒಮ್ಮೆ ಶಾಸಕಾಂಗ ಪಕ್ಷ ಸಭೆ ಕರೆದು ಸರಿ ಮಾಡಬಹುದಿತ್ತು. ಹಾಗೆ ನೀವು ಮಾಡಲಿಲ್ಲ. ಸಮನ್ವಯ ಸಮತಿ ಅಧ್ಯಕ್ಷ ರಾಗಿ ನೀವು ಮಾಡಿದ್ದೇನು ಸಿದ್ದರಾಮಯ್ಯ?

*ನಾನು ಜನಪರ ಕೆಲಸ ಮಾಡಲಿಲ್ಲ ಅಂತ ಹೇಳಿದ್ದೀರಿ. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 109 ಕೋಟಿ ಕೊಟ್ಟಿದ್ದೇನೆ. ಬಡವರ ಬಗ್ಗೆ ಕಾಳಜಿ ಇಲ್ಲದಿದ್ದರೆ ಇಷ್ಟು ಮಾಡುತ್ತಿದ್ದೇನೆ.
*ನಮ್ಮ ಪಕ್ಷದ ಕೋಟದಲ್ಲೆ ರಾಮಲಿಂಗಾ ರೆಡ್ಡಿ, ರಮೇಶ್ ಜಾರಕಿಹೊಳಿ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು ಎಂದು ನಾನು ಹೇಳಿದಾಗ ನೀವು ಮಾಡಿದ್ದೇನು ಎನ್ನುವುದು ನನಗೆ ಗೊತ್ತಿದೆ. ಅವರಿಬ್ಬರಿಗೆ ಅಡ್ಡಿ ಮಾಡಿದವರು ಯಾರು?
*ಧರ್ಮಸಿಂಗ್ ಅವರ ಸರಕಾರ ಬೀಳಲು ಕಾರಣ ಯಾರು? ಆ ಸರಕಾರದಲ್ಲಿ ಡಿಸಿಎಂ ಆಗಿದ್ದುಕೊಂಡು ರಾಜಕೀಯ ಬದುಕು ಕೊಟ್ಟ ಮಾತೃಪಕ್ಷಕ್ಕೆ ಹಳ್ಳ ಅಗೆಯುವುದು ಎಷ್ಟು ಸರಿ. ಆಗ ನನಗೆ ಪಕ್ಷ ಉಳಿಸುವುದು ಮುಖ್ಯವಾಗಿತ್ತು. ನಿಮ್ಮ ನಡವಳಿಕೆಯಿಂದಲೆ ಆ ಸರ್ಕಾರ ಹೋಯ್ತು ಸಿದ್ದರಾಮಯ್ಯನವರೇ.


*50 ವರ್ಷದ ರಾಜಕಾರಣದಲ್ಲಿ ತುಂಬಾ ಜನರನ್ನು ನೋಡಿದ್ದೇನೆ ಎಂದಿದ್ದೀರಿ. ಕುಮಾರಸ್ವಾಮಿ ಯಾವಾಗ ರಾಜಕಾರಣಕ್ಕೆ ಬಂದಿದ್ದಾರೆ ಎಂದು ಕೇಳಿದ್ದೀರಿ. ನಾನು ರಾಜಕಾರಣದಲ್ಲಿ ಎಂದು ಸಹ ನಿಮ್ಮ ಹಂಗಿನಲ್ಲಿ ಬಂದಿಲ್ಲ. ದೇವೆಗೌಡರು ಸಾತನೂರಿನಲ್ಲಿ ಚುನಾವಣೆಗೆ ನಿಂತಾಗ ನಾನು ನೇತೃತ್ವ ವಹಿಸಿದ್ದೆ ಎಂಬುದನ್ನು ನೆನಪು ಮಾಡಿಕೊಳ್ಳಿ.
*ಜನತಾ ಪಕ್ಷದಲ್ಲಿ ಇದ್ದಾಗ ನಾನು ಅನೇಕರಿಗೆ ಚುನಾವಣೆಯಲ್ಲಿ ಸಹಾಯ ಮಾಡಿದ್ದೇನೆ. ನಾನೊಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೆ. ಸಿದ್ದರಾಮಯ್ಯ ನವರೆ, ನೀವೇ ಜಾತ್ಯಾತೀತ ಜನತಾದಳ ಅಧ್ಯಕ್ಷರಾಗಿದ್ದಿರಿ. 1999 ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನೀವು ಸೋತು ಅನುಗ್ರಹಕ್ಕೆ ಬಂದು ಕಣ್ಣೀರು ಹಾಕಿದ್ದು ನೀವು ಮರೆತಿರಾ? ಆಗ ನಿಮಗೆ ದೇವೆಗೌಡರು ಧೈರ್ಯ ತುಂಬಿದ್ದು ಮರೆತಿರಾ?
*ಯಾವ ಜೆಡಿಎಸ್ ಪಕ್ಷದಿಂದ ಉಪ ಮುಖ್ಯಮಂತ್ರಿ ಆಗಿದ್ದೆರೋ ನೀವು ಅದೇ ಪಕ್ಷವನ್ನು ಮುಗಿಸಲು ಹೋದಿರಿ. ನೀವು ಅಂತ ಹೀನ ಕೃತ್ಯ ನಡೆಸುತ್ತಿದ್ದಾಗ ನಾನು ಸುಮ್ಮನಿರಲು ಸಾಧ್ಯವೇ? ಅವಾಗ ನಿಮ್ಮನ್ನ ಪಕ್ಷದಿಂದ ಹೊರ ಹಾಕಿದಾಗ ಪಕ್ಷದಲ್ಲಿದ್ದ 58 ಜನ ಶಾಸಕರಲ್ಲಿ ಎಷ್ಟು ಜನ ನಿಮ್ಮ ಜತೆ ಬಂದರು?
*ಜೆಡಿಎಸ್ ಮುಗಿಸಲು ಸಮಾವೇಶಗಳನ್ನು ಮಾಡಿದಂತೆ ಈಗ ಕಾಂಗ್ರೆಸ್ ಮುಗಿಸಲು ಈಗ ಅದೇ ಕುತಂತ್ರ ಮಾಡುತ್ತಿದ್ದೀರಿ. ಜಾತಿಗಣತಿ ವಿಚಾರದಲ್ಲಿ ನನ್ನನ್ನು ಡಬಲ್ ಗೇಮ್ ಅಂತೀರಾ. ಆ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಬೆಂಕಿ ಇಡಲು ಹೊರಟಿದ್ದೀರಿ.
*ಕಾಂಗ್ರೆಸ್ ಪಕ್ಷ ತಗೆಯೋದು ನೀವೇ ಸಿದ್ದರಾಮಯ್ಯ ಅವರೇ. ಒಬಿಸಿ ಸಮಾವೇಶ ಮಾಡಲು ಇವಾಗ ಹೊರಟಿದ್ದೀರಿ ನೀವು. ಮಂಡ್ಯದಲ್ಲಿ ಜೆಡಿಎಸ್ ವೀಕ್ ಎಂಬ ಹೇಳಿಕೆ ನೀಡಿದ್ದಿರಿ. ಮಂಡ್ಯದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರಿದ್ದಾರೆ. ಮುಂದೆ ನಮ್ಮನ್ನು ಕೆಣಕಬೇಡಿ. ನನ್ನ ಪಾಡಿಗೆ ನಾನು ಇರ್ತಿನಿ. ನನ್ನ ತಂಟೆಗೆ ಬರಬೇಡಿ.


*ಕಾಂಗ್ರೆಸ್ ನಾಯಕರಿಗೆ ಹೇಳ್ತಾ ಇದ್ದೀನಿ. ನಿಮ್ಮ ಪಕ್ಷ ಮುಗಿಸೋಕೆ ಸಿದ್ದರಾಮಯ್ಯ ಒಬಿಸಿ ಸಮಾವೇಶ ಮಾಡ್ತಾ ಇದ್ದಾರೆ. ಬಿಎಸ್ವೈ ಸಿಎಂ ಆಗಿದ್ದಾಗ ನಾನು ಒಂದೇ ಬಾರಿ ಭೇಟಿ ಮಾಡಿದ್ದು ಅಂತಾ ಹೇಳಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸೋಲಿಸಲು ಯಡಿಯೂರಪ್ಪ ಹತ್ತಿರ ಹೋಗಿ ಯಾರ ಕೈಲಿ ದುಡ್ಡು ಇಸ್ಕೊಂಡು ಬಂದ್ರಿ ಸಿದ್ದರಾಮಯ್ಯ. ಎಲ್ಲಾ ವಿಚಾರವೂ ಗೊತ್ತಿದೆ. ಇದು ನಾನು ಹೇಳ್ತಿಲ್ಲ. ನಿಮ್ಮ ಪಕ್ಕದಲ್ಲಿ ಇದ್ದವ್ರೆ ಹೇಳಿರುವ ಮಾತು.

*ಕಾಂಗ್ರೆಸ್ ನೆರಳಲ್ಲಿ ಇದ್ದೀರಾ, ಸರಿಯಾಗಿ ಪಕ್ಷ ಕಟ್ಟಿ. ಇದೀಗಾ ಡಿಕೆ ಶಿವಕುಮಾರ್ ಪಕ್ಷ ಕಟ್ಟೋಕೆ ಹೋಗಿದ್ದಾರೆ. ನಿನ್ನೆ ಒಂದು ವಿಡಿಯೋ ಬಂದಿದೆ. ವಿಡಿಯೋ ನೀವೇ ಬಿಟ್ರಾ ಅಥವಾ ಅವರೇ ಹೇಳಿದ್ರಾ ಗೊತ್ತಿಲ್ಲ. ಡಿಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡ್ತೀರಾ ನೀವು? ಇವಾಗ ಹೇಳಿರೋರು ಯಾರು? ನಿಮ್ಮ ಪಟಾಲಂಗಳೇ ಅಲ್ಲವೆ?
*2013ರಲ್ಲಿ ಹೇಳಿದ್ದಿರಿ. ಇದೇ ನನ್ನ ಕೊನೆ ಚುನಾವಣೆ ಅಂತ. ನಿಮಗೆ ಇನ್ನೂ ಆಸೆ ಹೋಗಿಲ್ಲ. ಸಿಎಂ ಆಗಬೇಕು ಅಂತಾ ಇದ್ದೀರಾ. ಜನರಿಗೆ ಒಳ್ಳೇದು ಮಾಡೋ ಆಲೋಚನೆ ನಿಮಗೆ ಇಲ್ಲ.

Join Whatsapp