Home Uncategorized ಹಿಜಾಬ್ ನಿಷೇಧ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ : ಮುಂದಿನ ಆದೇಶ ಬರುವವರೆಗೆ...

ಹಿಜಾಬ್ ನಿಷೇಧ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ : ಮುಂದಿನ ಆದೇಶ ಬರುವವರೆಗೆ ಧಾರ್ಮಿಕ ಉಡುಪು ಧರಿಸದಂತೆ ಮಧ್ಯಂತರ ಆದೇಶ

ಬೆಂಗಳೂರು: ಮುಸ್ಲಿಮ್ ವಿದ್ಯಾರ್ಥಿನಿಯರು ಧರಿಸುತ್ತಿದ್ದ ಹಿಜಾಬ್ ಮೇಲೆ ನಿಷೇಧ ಹೇರಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ತ್ರಿಸದಸ್ಯ ಪೀಠವು ನಡೆಸಿದ್ದು, ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ.

ವಿಚಾರಣೆ ಮುಗಿಯುವವರೆಗೆ ಯಾವುದೇ ಧಾರ್ಮಿಕ ಉಡುಪನ್ನು ಬಳಸಬಾರದು ಎಂದು ಮಧ್ಯಂತರ ಆದೇಶ ನೀಡಿದ ಮುಖ್ಯ ನ್ಯಾಯಮೂರ್ತಿ, ರಾಜ್ಯದಲ್ಲಿ ಶಾಂತಿ, ನೆಮ್ಮದಿ ಕಾಪಾಡಬೇಕು ಎಂದು ಹೇಳಿದರು.

ಇದಕ್ಕೂ ಮೊದಲು ವಾದ ಮಂಡಿಸಿದ ಅರ್ಜಿದಾರರ ಪರ ಹಿರಿಯ ವಕೀಲ ಸಂಜಯ್ ಹೆಗಡೆ , ಕಳೆದ ವರ್ಷದ ಸೆಪ್ಟೆಂಬರ್ ನಿಂದ ಅರ್ಜಿದಾರರು ತಾರತಮ್ಯ ಅನುಭವಿಸುತ್ತಿದ್ದಾರೆ. ಅವರಿಗೆ ಹಾಜರಾತಿ ನೀಡದೇ ತರಗತಿಯಿಂದ ಹೊರಗೆ ಕೂರುವಂತೆ ಮಾಡಲಾಗಿದೆ. ಸಮಯಕ್ಕೆ ಸರಿಯಾಗಿ ಈ ಸಣ್ಣ ಪ್ರಕರಣವನ್ನು ನಿಯಂತ್ರಿಸುವ ಬದಲು ಅದನ್ನು ನಿಯಂತ್ರಣ ತಪ್ಪಲು ಬಿಡಲಾಗಿದೆ ಎಂದು ಹೇಳಿದರು.

ಕರ್ನಾಟಕ ಶಿಕ್ಷಣ ಕಾಯಿದೆಯಲ್ಲಿ ಸಮವಸ್ತ್ರಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ನಿಬಂಧನೆ ಇಲ್ಲ.   ಕಾಲೇಜುಗಳಲ್ಲಿ ಸಮವಸ್ತ್ರವನ್ನು ತಮಿಳುನಾಡಿನ ಖಾಸಗಿ ಎಂಜಿನಿಯರಿಂಗ್ ಕಾಲೇಜು ಆರಂಭಿಸಿತು. ಕಾಲೇಜಿನಲ್ಲಿ ಸಮವಸ್ತ್ರ ಕಡ್ಡಾಯ ಮಾಡುವುದರಿಂದ ಫ್ಯಾಶನ್ ಶೋ ಮತ್ತಿತರ ಚಟುವಟಿಕೆಗಳಿಗೆ ತಡೆಯಾಗುತ್ತದೆ ಎಂಬ ನಂಬಿಕೆ ಇದೆ. ಎರಡು ರೀತಿಯ ನಿಯಮಗಳಿವೆ. ಕರ್ನಾಟಕ ಶಿಕ್ಷಣ ಸಂಸ್ಥೆಗಳ (ವರ್ಗೀಕರಣ, ಸುಧಾರಣೆ) ನಿಯಮಗಳು 1995, ನಿಯಮ 11. ಸಮವಸ್ತ್ರ ಬಟ್ಟೆ, ಪಠ್ಯಪುಸಕ್ತ ಇತ್ಯಾದಿ ನಿಬಂಧನೆ. ಇವುಗಳು ಶಾಲೆಗಳಿಗೆ ಮೀಸಲಾದವು, ನಿಯಮ 3 ಅನ್ನು ಉಲ್ಲೇಖಿಸಿದ ಅವರು, ವಿಭಾಗ 2- ರ ಷರತ್ತು (25) ಮತ್ತು (32) ಉದ್ದೇಶಕ್ಕಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಕ್ಕೆ ಸಂಬಂಧಿಸಿದ ತರಗತಿಗಳ ವಿವರಣೆಯಾಗಿದೆ. (ಎ) ‘ಪ್ರಾಥಮಿಕ ಶಿಕ್ಷಣ’ I ರಿಂದ VII ತರಗತಿ ಹೊಂದಿರಬೇಕು; I ರಿಂದ IV ಪ್ರಾಥಮಿಕ ಮತ್ತು V ನಿಂದ VII ವರೆಗೆ ಮೇಲಿನ ಹಿರಿಯ ಪ್ರಾಥಮಿಕ; (ಬಿ) ‘ಪ್ರೌಢ ಶಿಕ್ಷಣ’ವು VIII ತರಗತಿಯಿಂದ X ದರ್ಜೆಯವರೆಗಿನ ತರಗತಿಗಳನ್ನು ಹೊಂದಿರಬೇಕು; ಆದ್ದರಿಂದ ಇದು ಪದವಿ ಪೂರ್ವ ಶಿಕ್ಷಣದ ತರಗತಿಗೆ ಅನ್ವಯಿಸುವುದಿಲ್ಲ. ನಿಯಮ ಉಲ್ಲಂಘನೆಗೆ ದಂಡ ವಿಧಿಸಬೇಕು ಎಂದು ಹೇಳಲಾಗಿಲ್ಲ. ದಂಡ ವಿಧಿಸಬೇಕಾಗಿದ್ದರೂ ಸಹ ಮಕ್ಕಳನ್ನು ತರಗತಿಗಳಿಂದ ದೂರವಿಡುವುದು ಪ್ರಮಾಣಾನುಗುಣವಾದ ದಂಡವೇ ಎಂಬುದನ್ನು ಪೀಠ ಪರಿಶೀಲಿಸಬೇಕು ಎಂದು ಅವರು ಮನವಿ ಮಾಡಿದರು.

ಸೆಕ್ಷನ್ 17ರ ಉಲ್ಲಂಘನೆಗಾಗಿ ವಿಸ್ತೃತ ನೆಲೆಯಲ್ಲಿ ದಂಡ ವಿಧಿಸಲಾಗುತ್ತದೆ. ಪರೀಕ್ಷೆಯಲ್ಲಿ ರಾಗಿಂಗ್, ನಕಲು ಮಾಡುವುದು ಇತ್ಯಾದಿಗಳಿಗೆ ದಂಡವಿದೆ. ಆದರೆ, ಸಮವಸ್ತ್ರಕ್ಕೆ ಅವಕಾಶ ಇಲ್ಲದ ಕಾರಣ ಏಕರೂಪದ ವಸ್ತ್ರ ಸಂಹಿತೆ ಉಲ್ಲಂಘನೆಗೆ ದಂಡ ವಿಧಿಸಲು ಅವಕಾಶವಿಲ್ಲ ಎಂದರು.

ಹಿರಿಯ ವಕೀಲ ದೇವದತ್ ಕಾಮತ್ ವಾದ ಮಂಡಿಸಿ, ವಿದ್ಯಾರ್ಥಿಗಳು ತರಗತಿಯ ಹೊರಗಿದ್ದಾರೆ. ಅವರಿಗೆ ಸಮಸ್ಯೆಯಾಗಲಿದೆ. ಮೊದಲಿಗೆ ಮಧ್ಯಂತರ ಪರಿಹಾರದ ಕುರಿತು ವಿಚಾರಣೆ ನಡೆಸಲು ವಿನಂತಿಸಿದರು.

ಈ ಮಧ್ಯೆ ಮಾತನಾಡಿದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಹಿಜಾಬ್ ವಿಚಾರ ಮುನ್ನೆಲೆಗೆ ಬಂದ ಬಳಿಕ ಕೆಲವು ವಿದ್ಯಾರ್ಥಿಗಳು ಕೇಸರಿ ಶಾಲು ಇತ್ಯಾದಿ ಧರಿಸಿ ಕಾಲೇಜಿಗೆ ಬಂದಿದ್ದಾರೆ. ಇದಕ್ಕಾಗಿ ಕಾಲೇಜು ಮುಚ್ಚಲು ಸರ್ಕಾರ ಆದೇಶ ಮಾಡಿದೆ. ಸಂಬಂಧಿತ ಕಾಲೇಜುಗಳು ವಿಧಿಸುವ ಸಮವಸ್ತ್ರ ನಿಯಮಕ್ಕೆ ವಿದ್ಯಾರ್ಥಿಗಳು ಬದ್ಧವಾಗಿರಬೇಕು. ಎಲ್ಲಾ ಸಂಬಂಧಿತ ಕಾಲೇಜುಗಳು ವಿಧಿಸುವ ಸಮವಸ್ತ್ರ ನಿಯಮಕ್ಕೆ ವಿದ್ಯಾರ್ಥಿಗಳು ಬದ್ಧವಾಗಿರಬೇಕು. ಎಲ್ಲಾ ವಿದ್ಯಾರ್ಥಿಗಳು ಕಾಲೇಜಿಗೆ ಬರಬೇಕು. ತರಗತಿಗಳು ಆರಂಭವಾಗಬೇಕು. ನ್ಯಾಯಾಲಯ ಪ್ರಕರಣ ನಿರ್ಧರಿಸಲಿದೆ ಎಂದರು.

ಈ ಮಧ್ಯೆ ಮಾತನಾಡಿದ  ಅರ್ಜಿದಾರರ ಪರ ವಕೀಲ ದೇವದತ್ ಕಾಮತ್‌, ತರಗತಿ ಆರಂಭವಾಗಬೇಕು ಎಂಬ ಎಜಿ ವಾದಕ್ಕೆ ನನ್ನ ಸಹಮತವಿದೆ. ಆದರೆ, ಇದು ಸಮವಸ್ತ್ರಕ್ಕೆ ಸಂಬಂಧಿಸಿದ್ದಲ್ಲ. ವಿದ್ಯಾರ್ಥಿಗಳು ಸಮವಸ್ತ್ರ ಧರಿಸಲಿದ್ದಾರೆ. ನಿರ್ದಿಷ್ಟ ಬಣ್ಣದ ಹಿಜಾಬ್‌ ಅನ್ನೂ ಧರಿಸಲಿದ್ದಾರೆ. ಹಿಂದೆ ಅವರು ಹಿಜಾಬ್‌ ಧರಿಸುತ್ತಿದ್ದಂತೆ ಧರಿಸಲಿ. ಇದು ಸಮಸ್ಯೆ ಉಂಟು ಮಾಡುವ ಪ್ರಕ್ರಿಯೆಯಲ್ಲ. ಇದು ಮತ್ತೊಬ್ಬರಿಗೆ ಸಮಸ್ಯೆ ಉಂಟು ಮಾಡುವುದಿಲ್ಲ. ರಾಜ್ಯ ಸರ್ಕಾರವು ಬೆಂಕಿಯ ಜೊತೆ ಆಟವಾಡುತ್ತಿದೆ. ಹಿಜಾಬ್‌, ಧಾರ್ಮಿಕ ವಿಧಾನದ ಭಾಗವಲ್ಲ ಎಂದು ಸರ್ಕಾರದ ಆದೇಶದಲ್ಲಿ ಹೇಳಲಾಗಿದೆ. ನಮ್ಮ ಮೂಲಭೂತ ಹಕ್ಕುಗಳು ಶಾಲಾ ಸಮಿತಿಯ ನಿರ್ಧಾರಕ್ಕೆ ಒಳಪಟ್ಟಿವೆಯೇ? ಎಂದು ಪ್ರಶ್ನಿಸಿದರು. ಈ ವೇಳೆ ಇಸ್ಲಾಮ್‌ ಧರ್ಮದಲ್ಲಿ ಹಿಜಾಬ್‌ ಅವಿಭಾಜ್ಯ ಅಂಗವೇ ಎಂಬುದನ್ನು ನಿರ್ಧರಿಸಬೇಕಿದೆ ಎಂದು ಪೀಠ ಹೇಳಿದಾಗ ಹೌದು. ಹೀಗಾಗಿ, ಪರಿಸ್ಥಿತಿಯನ್ನು ನಿಭಾಯಿಸುವ ನಿಟ್ಟಿನಲ್ಲಿ ಮಧ್ಯಂತರ ಪರಿಹಾರವನ್ನು ಪರಿಗಣಿಸಬೇಕು ಎಂದು ಮನವಿ ಮಾಡಿದರು.

ಅಡ್ವೊಕೇಟ್ ಜನರಲ್ ವಾದಕ್ಕೆ ಪ್ರತಿವಾದ ಮಂಡಿಸಿದ ಅರ್ಜಿದಾರರ ಪರ ವಕೀಲ ಸಂಜಯ್ ಹೆಗಡೆ, ವಿದ್ಯಾರ್ಥಿಗಳು ಕಾಲೇಜಿಗೆ ಮರಳಬೇಕು ಎಂದು ಹೇಳುವುದು ಸುಲಭ. ನ್ಯಾಯಾಲಯವು ಪ್ರಕರಣವನ್ನು ನಿರ್ಧರಿಸುವವರೆಗೆ ಮಧ್ಯಮ ಮಾರ್ಗವನ್ನು ಅನುಸರಿಸುವುದು ವಿವೇಕ ಎಂದರು.

ಉಡುಗೆ-ತೊಡುಗೆ, ಊಟ-ತಿಂಡಿ, ನಂಬಿಕೆ ಏನೇ ಇರಲಿ, ಅವರೆಲ್ಲರೂ ನಮ್ಮ ಹೆಣ್ಣು ಮಕ್ಕಳು. ಇದು ಕೇವಲ ಅಗತ್ಯ ಧಾರ್ಮಿಕ ಆಚರಣೆಯ ಬಗ್ಗೆ ಅಲ್ಲ. ಇದು ಅಗತ್ಯ ಶಿಕ್ಷಣ ಹಕ್ಕುಗಳ ಪ್ರಕರಣ. ವಕೀಲನಾಗಿ ನನ್ನ ಧಾರ್ಮಿಕ ನಂಬಿಕೆಯು ಭಾರತದ ಸಂವಿಧಾನವು ಸರ್ವೋಚ್ಚವಾಗಿದೆ. ಇಲ್ಲಿ ಒಂದು ವಿಧಿ ಇರಬಹುದು, ಇನ್ನೊಂದು ಅಲ್ಲಿರಬಹುದು. 14, 21 ನೇ ವಿಧಿಗಳ ಬಗ್ಗೆ ಬಹು ವ್ಯಾಖ್ಯಾನಗಳು ಇರಬಹುದು. ಆದರೆ ಅದು ಎಲ್ಲರಿಗೂ ಅನ್ವಯಿಸುವ ಪ್ರಶ್ನೆಯೇ ಇಲ್ಲ ಎಂದರು. ಈ ವಿಚಾರವನ್ನು ಕಾಲೇಜು ಅಭಿವೃದ್ಧಿ ಸಮಿತಿಗೆ (ಸಿಡಿಸಿ) ಬಿಡಬೇಕು ಎಂಬುದು ಸರಿಯಲ್ಲ. ಈ ವಿಚಾರದಲ್ಲಿ ನಾನು ಕಾಮತ್‌ ಅವರಿಗೆ ಬೆಂಬಲ ಸೂಚಿಸುತ್ತೇನೆ. ಸ್ಥಳೀಯ ಶಾಸಕರು, ಸಿಡಿಸಿಗೆ ತಮ್ಮದೇ ಆದ ಲೆಕ್ಕಾಚಾರಗಳು ಇರುತ್ತವೆ ಎಂದರು.

ಹೆಗಡೆ ಅವರು ತಮ್ಮ ವಾದ ಮುಂದುವರಿಸಿ, ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಅವರು ವಿದ್ಯಾರ್ಥಿಯಾಗಿದ್ದಾಗ ಅವರನ್ನು ಶಾಲೆಯಲ್ಲಿ ಪ್ರತ್ಯೇಕವಾಗಿ ಕೂಡಿಸಲಾಗಿತ್ತು. ಗಣರಾಜ್ಯವಾದ ಹಲವು ವರ್ಷಗಳ ಬಳಿಕ ಯಾವುದೇ ರೀತಿಯ ಪ್ರತ್ಯೇಕತೆ ಬೇಡ. ನಮ್ಮ ರೀತಿಯ ಬೇರೆ ದೇಶ ಮತ್ತೊಂದಿಲ್ಲ. ನಮ್ಮದು ಹಲವು ರೀತಿಯ ಪ್ರಭಾವ ಮತ್ತು ಜನರನ್ನು ಒಳಗೊಂಡಿರುವ ರಾಷ್ಟ್ರ. ನಮ್ಮ ಸಂಪ್ರದಾಯವು ಸಹನೆ ಬೋಧಿಸುತ್ತದೆ, ಸಹಿಷ್ಣುತೆ ನಮ್ಮ ತತ್ವ. ನಮ್ಮ ಸಂವಿಧಾನದಲ್ಲಿ ಸಹಿಷ್ಣುತೆ ಅಡಕಗೊಳಿಸಲಾಗಿದೆ. ನಾವು ಅದನ್ನು ದುರ್ಬಲಗೊಳಿಸಬಾರದು ಎಂದು ಬಿಜೊ ಇಮ್ಯಾನ್ಯುಲ್‌ ಪ್ರಕರಣವನ್ನು ಉಲ್ಲೇಖಿಸಿದರು.

  ಸಾಂವಿಧಾನಿಕ ಸಮಸ್ಯೆಗಳನ್ನು ನಿರ್ಧರಿಸದೆ ಶಾಸನಬದ್ಧ ಪ್ರಶ್ನೆಗಳ ಆಧಾರದ ಮೇಲೆ ಪ್ರಕರಣವನ್ನು ನಿರ್ಧರಿಸಲು ಸಾಧ್ಯವಾದರೆ, ಅದನ್ನು ನಿರ್ಧರಿಸಬೇಕು. ಹಿಜಾಬ್‌ ಧರಿಸುವುದು ಅಭಿವ್ಯಕ್ತಿ ಸ್ವಾತಂತ್ರ್ಯ, ಖಾಸಗಿತನ ಮತ್ತು ಆತ್ಮಸಾಕ್ಷಿಯ ವ್ಯಾಪ್ತಿಗೆ ಬರುತ್ತದೆ ಎಂದು ಹೆಗಡೆ ಹೇಳಿದರು.

ಸಾಂವಿಧಾನಿಕ ಸಮಸ್ಯೆಗಳನ್ನು ನಿರ್ಧರಿಸದೆ ಶಾಸನಬದ್ಧ ಪ್ರಶ್ನೆಗಳ ಆಧಾರದ ಮೇಲೆ ಪ್ರಕರಣವನ್ನು ನಿರ್ಧರಿಸಲು ಸಾಧ್ಯವಾದರೆ, ಅದನ್ನು ನಿರ್ಧರಿಸಬೇಕು. ಸಾಂವಿಧಾನಿಕ ಹಕ್ಕುಗಳ ವಿಚಾರವನ್ನು ಅವರು ಅಧಿಕಾರದಲ್ಲಿ ಇರಲಿ ಅಥವಾ ಇಲ್ಲದಿರಲಿ ಅವುಗಳನ್ನು ರಾಜಕಾರಣಿಗಳು ಅಥವಾ ಸಂಸದರಿಗೆ ಬಿಡಲಾಗದು. ಅಂತಿಮವಾಗಿ ಸಂವಿಧಾನ ಎಲ್ಲಾ ಪ್ರಜೆಗಳನ್ನು ರಕ್ಷಿಸುತ್ತದೆ ಎಂದರು.

  ಸದರಿ ಪ್ರಕರಣದಲ್ಲಿ ಸಂಸ್ಥೆಯು ಸರ್ಕಾರಿ ಕಾಲೇಜು. ಇದು ರಾಜ್ಯ ಮತ್ತು ದೇಶದ ಎಲ್ಲಾ ನಾಗರಿಕರಿಗೆ ಸಂಬಂಧಿಸಿದ್ದಾಗಿದೆ. ನಿಮ್ಮ ನಂಬಿಕೆಯನ್ನು ತ್ಯಜಿಸಿ ಕಾಲೇಜಿಗೆ ಬರಬೇಕು ಎಂದು ನಿರ್ದಿಷ್ಟ ವಿದ್ಯಾರ್ಥಿಗಳಿಗೆ ಹೇಳಬಹುದೇ? ಎಂದು ಕೇಳಿದರು.

ಮೋಟರ್‌ ವಾಹನ ಕಾಯಿದೆ ಸೇರಿದಂತೆ ಹಲವು ಕಾನೂನುಗಳಲ್ಲಿ ಶಿರ ಮುಚ್ಚಿಕೊಳ್ಳಲು ಅವಕಾಶ ಕಲ್ಪಿಸಿರುವ ನಿರ್ದಿಷ್ಟ ನಿಬಂಧನೆಗಳಿವೆ ಎಂದು ಉಲ್ಲೇಖಿಸಿ ಹಿರಿಯ ವಕೀಲ ಸಂಜಯ್‌ ಹೆಗಡೆ ಅವರು ವಾದ ಪೂರ್ಣಗೊಳಿಸಿದರು,

ಬಳಿಕ ಮುಖ್ಯ ನ್ಯಾಯಮೂರ್ತಿ, ಶಿಕ್ಷಣ ಸಂಸ್ಥೆಗಳು ಪುನಾರಂಭವಾಗಬೇಕು. ಪ್ರಕರಣ ಬಾಕಿ ಇರುವವರೆಗೆ ವಿದ್ಯಾರ್ಥಿಗಳು ಮತ್ತು ಸಂಬಂಧಪಟ್ಟವರು ಯಾವುದೇ ತೆರನಾದ ಧಾರ್ಮಿಕ ಉಡುಪು ಅಥವಾ ಶಿರ ವಸ್ತ್ರ ಹಾಕಬಾರದು ಎಂದು ನಾವು ಮಧ್ಯಂತರ ಆದೇಶ ಮಾಡುತ್ತೇವೆ. ಎಲ್ಲರನ್ನೂ ನಾವು ನಿರ್ಬಂಧಿಸುತ್ತೇವೆ. ಶಾಂತಿ ಮತ್ತು ನೆಮ್ಮದಿ ಮುಖ್ಯ ಎಂದು ಹೇಳಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದರು.

 ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಮತ್, ವಿದ್ಯಾರ್ಥಿಗಳ ದೃಷ್ಟಿಯಿಂದ ನೀವು ಹೇಳುತ್ತಿರುವುದು ಸಂವಿಧಾನದ 25ನೇ ವಿಧಿಯ ಅಮಾನತಿಗೆ ಸಮನಾಗಿದೆ ಎಂದರು.

Join Whatsapp
Exit mobile version