ಹಿಸಾರ್(ಹರಿಯಾಣ): ಕಾಂಗ್ರೆಸ್ಗೆ ನಿಜವಾಗಿಯೂ ಮುಸ್ಲಿಮರ ಬಗ್ಗೆ ಸಹಾನುಭೂತಿ ಇದ್ದರೆ, ಪಕ್ಷದ ಅಧ್ಯಕ್ಷರನ್ನಾಗಿ ಆ ಸಮುದಾಯದ ನಾಯಕನನ್ನು ನೇಮಿಸಲಿ ಮತ್ತು ಚುನಾವಣೆಗಳಲ್ಲಿ ಶೇಕಡಾ 50 ರಷ್ಟು ಟಿಕೆಟ್ಗಳನ್ನು ಆ ಸಮುದಾಯದ ಅಭ್ಯರ್ಥಿಗಳಿಗೇ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸವಾಲು ಹಾಕಿದರು.
ಕಾಂಗ್ರೆಸ್ ಎಂದಿಗೂ, ಯಾರಿಗೂ ಪ್ರಯೋಜನವಾಗದ ‘ಮಧ್ಯಂತರ ನೀತಿ’ಯನ್ನು ಅನುಸರಿಸುತ್ತದೆ. ಪಕ್ಷವು ಚುನಾವಣೆಗಳಲ್ಲಿ ಗೆದ್ದ ಬಳಿಕ ಮತ್ತು ಅದಕ್ಕೂ ಮೊದಲಿನ ನಡವಳಿಕೆಯು ಒಂದೇ ಆಗಿರುವುದಿಲ್ಲ ಎಂದು ಟೀಕಿಸಿದರು.
ಮಹಾರಾಜ ಅಗ್ರಸೇನ ವಿಮಾನ ನಿಲ್ದಾಣದಲ್ಲಿ ಇಂದು ಹೊಸ ಟರ್ಮಿನಲ್ಗೆ ಅಡಿಪಾಯ ಹಾಕಿ, ಅಯೋಧ್ಯೆಗೆ ವಿಮಾನ ಹಾರಾಟಕ್ಕೆ ಚಾಲನೆ ನೀಡಿದ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, 2013ರಲ್ಲಿ ವಕ್ಫ್ ಕಾನೂನಿನಲ್ಲಿ ಕಾಂಗ್ರೆಸ್ ಮಾಡಿದ ಬದಲಾವಣೆಗಳನ್ನು ಪ್ರಸ್ತಾಪಿಸಿ ವಾಗ್ದಾಳಿ ನಡೆಸಿದರು.
ಡಾ.ಅಂಬೇಡ್ಕರ್ ಅವರು ಧರ್ಮದ ಆಧಾರದ ಮೇಲೆ ಮೀಸಲಾತಿ ಇರಬಾರದು ಎಂದು ಪ್ರತಿಪಾದಿಸಿದ್ದರು. ಸಂವಿಧಾನದಲ್ಲೂ ಅದಕ್ಕೆ ನಿಷೇಧವಿದೆ. ಆದರೆ, ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಎಸ್ಸಿ, ಎಸ್ಟಿ, ಒಬಿಸಿಗಳ ಮೀಸಲಾತಿಯನ್ನು ಕಸಿದು ಯೋಜನೆಗಳ ಟೆಂಡರ್ನಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡಿದೆ ಎಂದರು.
ಕಾಂಗ್ರೆಸ್ ಮುಸ್ಲಿಂ ಸಮುದಾಯದ ಕೆಲವೇ ಕೆಲವು ‘ಮೂಲಭೂತವಾದಿ’ ವ್ಯಕ್ತಿಗಳನ್ನು ಸಂತೋಷಪಡಿಸುವ ನೀತಿಯನ್ನು ಅನುಸರಿಸುತ್ತದೆ. ಒಟ್ಟಾರೆ ಸಮಾಜವನ್ನು ನಿರ್ಲಕ್ಷಿಸಿ, ಅವರನ್ನು ಅನಕ್ಷರಸ್ಥ ಮತ್ತು ಬಡವರಾಗಿಯೇ ಉಳಿಯುವಂತೆ ಮಾಡುತ್ತದೆ ಎಂದು ಆರೋಪಿಸಿದರು. ಇದಕ್ಕೆ ದೊಡ್ಡ ಪುರಾವೆಯೆಂದರೆ, 2014 ರ ಸಾರ್ವತ್ರಿಕ ಚುನಾವಣೆಗೂ ಮೊದಲು ವಕ್ಫ್ ಕಾನೂನಿನಲ್ಲಿ ಮಾಡಿದ ತಿದ್ದುಪಡಿಗಳು ಎಂದು ಉದಾಹರಿಸಿದರು.
ಸ್ವಾತಂತ್ರ್ಯಪೂರ್ವದಿಂದಲೂ ವಕ್ಫ್ ಕಾನೂನು ಇದೆ. 2014ರ ಚುನಾವಣೆಗೂ ಕೆಲ ದಿನಗಳ ಮೊದಲು ಮತ ಬ್ಯಾಂಕ್ಗಾಗಿ ವಕ್ಫ್ ಕಾನೂನಿಗೆ ಮಹತ್ತರ ತಿದ್ದುಪಡಿಗಳನ್ನು ತಂದಿತು. ಇದರಿಂದ ಸಮುದಾಯವನ್ನು ಮೆಚ್ಚಿಸಿತು. ಅಂದು ಪಕ್ಷವು ಮಾಡಿದ ಕಾನೂನುಬಾಹಿರ ಬದಲಾವಣೆಗಳು ಸಂವಿಧಾನ ಮತ್ತು ಅಂಬೇಡ್ಕರ್ ಅವರಿಗೆ ಮಾಡಿದ ದೊಡ್ಡ ಅವಮಾನ ಎಂದು ಮೋದಿ ಕಿಡಿಕಾರಿದರು.