ಕ್ಯಾಂಪಸ್ ಫ್ರಂಟ್ ನಾಯಕನ ವಿರುದ್ಧ ಎಫ್.ಐ.ಆರ್

Prasthutha|

ಗಂಗಾವತಿ: ಬಾಬರಿ ಮಸ್ಜಿದ್ ವಿಷಯದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಿದ ನೆಪದಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ಚಾಂದ್ ಸಲ್ಮಾನ್ ವಿರುದ್ಧ  ಗಂಗಾವತಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

- Advertisement -

ಬಾಬರಿ ಮಸ್ಜಿದ್ ವಿಚಾರವಾಗಿ ಯಾವುದೇ ಸಮಸ್ಯೆಯಿದ್ದರೂ ಕಾನೂನು ಪರಿಧಿಯಲ್ಲಿ ಪರಿಹಾರ ಕಂಡುಕೊಳ್ಳಬೇಕು. ಸಾರ್ವಜನಿಕವಾಗಿ ಚರ್ಚಿಸಬಾರದು ಎಂದು ಸುಪ್ರೀಂ ಕೋರ್ಟ್ ತೀರ್ಪು ಇರುವ ಹಿನ್ನೆಲೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸರ ಕ್ರಮವನ್ನು ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯ ಖಂಡಿಸಿದೆ. ಐತಿಹಾಸಿಕ ಬಾಬರಿ ಮಸೀದಿಯನ್ನು ನೆನಪಿಸುವ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಪ್ರಬಂಧ ಮತ್ತು ಚಿತ್ರಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಸಂಘಟನೆಯ ರಾಜ್ಯ ಕೋಶಾಧಿಕಾರಿ ಇಮ್ರಾನ್ ಮಾಗಡಿ ‘ಪ್ರಸ್ತುತ’ ಪತ್ರಿಕೆಗೆ ತಿಳಿಸಿದ್ದಾರೆ.

- Advertisement -

“ಬಾಬರಿ ಮಸೀದಿಯನ್ನು ನೆನಪಿಸುವ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಪ್ರಬಂಧ ಮತ್ತು ಚಿತ್ರಕಲಾ ಸ್ಪರ್ಧೆಯನ್ನು ಕ್ಯಾಂಪಸ್ ಫ್ರಂಟ್ ವತಿಯಿಂದ ಏರ್ಪಡಿಸಲಾಗುತ್ತಿದೆ.  ಇದನ್ನು ಸಹಿಸದ ಪೋಲಿಸರು ನಮ್ಮ ಗಂಗಾವತಿ ಜಿಲ್ಲಾಧ್ಯಕ್ಷರ ವಿರುದ್ಧ ಪ್ರಕರಣ ದಾಖಲಿಸಿರವುದು ಖಂಡನೀಯ. ಪೋಲಿಸರ ಈ ನಡೆಯ ವಿರುದ್ಧ ಕಾನೂನು ಹೋರಾಟ ಮಾಡಲಾಗುವುದು ಮತ್ತು ಈ ಅಭಿಯಾನನ್ನು ರಾಜ್ಯಾದ್ಯಂತ ನಡೆಸಲಿದ್ದೇವೆ” ಎಂದಿದ್ದಾರೆ.

ಬಾಬರಿ ಮಸ್ಜಿದ್ ಕುರಿತು ಸಾರ್ವಜನಿಕವಾಗಿ ಚರ್ಚಿಸಬಾರದು ಎಂಬ ಸುಪ್ರೀಂ ಕೋರ್ಟ್ ತೀರ್ಪಿದೆಯೆಂಬ ಪೊಲೀಸರ ಆರೋಪದ ಕುರಿತು ಪ್ರಶ್ನಿಸಿದಾಗ, “ಸುಪ್ರೀಂ ಕೋರ್ಟ್ ತೀರ್ಪನ್ನು ಸಾರ್ವಜನಿಕವಾಗಿ ಪ್ರಶ್ನಿಸಬಾರದೆಂಬ ನಿಯಮ ಎಲ್ಲಿದೆ?” ಎಂದು ಪ್ರಶ್ನಿಸಿದರು.

ಬಾಬರಿ ಮಸ್ಜಿದ್ ವಿಷಯದಲ್ಲಿ ಪಿಯುಸಿ ಮತ್ತು ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಫ್ರಂಟ್ ಕನ್ನಡ, ಇಂಗ್ಲಿಷ್, ಉರ್ದುವಿನಲ್ಲಿ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿತ್ತು ಮತ್ತು ವಿಜೇತರಿಗೆ ಬಹುಮಾನವನ್ನು ಘೋಷಿಸಿತ್ತು.

ಬಾಬರಿ ಮಸ್ಜಿದ್ ಕುರಿತು ಸುಪ್ರೀಂ ಕೋರ್ಟ್ ತೀರ್ಪನ್ನು ಈಗಾಗಲೇ ದೇಶದಾದ್ಯಂತ ಹಲವು ನಿವೃತ್ತ ನ್ಯಾಯಾಧೀಶರು, ಪತ್ರಕರ್ತರು, ಹಕ್ಕುಗಳ ಪರ ಹೋರಾಟಗಾರರು ಮತ್ತು ಮುಸ್ಲಿಂ ನಾಯಕರು ಟೀಕೆಯನ್ನು ವ್ಯಕ್ತಪಡಿಸಿದ್ದರು. ತೀರ್ಪು ದೇಶದ ನ್ಯಾಯವ್ಯವಸ್ಥೆಯನ್ನೇ ಬುಡಮೇಲುಗೊಳಿಸಿದೆಯೆಂದು ಹಲವರು ಆತಂಕ ವ್ಯಕ್ತಪಡಿಸಿದ್ದರು. ಈಗಲೂ ಬುದ್ಧಿಜೀವಿಗಳು ತೀರ್ಪಿನ ವಿರುದ್ಧ ಟೀಕೆಯನ್ನು ಮುಂದುವರಿಸಿದ್ದಾರೆ.  ಆದಾಗ್ಯೂ ಬಾಬರಿ ಮಸ್ಜಿದ್ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಿದ್ದಕ್ಕಾಗಿ ಕ್ಯಾಂಪಸ್ ಫ್ರಂಟ್ ನಾಯಕನ ವಿರುದ್ಧ ಪ್ರಕರಣ ದಾಖಲಿಸಿರುವುದು ವಿಪರ್ಯಾಸವಾಗಿದೆ.

Join Whatsapp