Home ಟಾಪ್ ಸುದ್ದಿಗಳು ಹುಡುಗಿಗಾಗಿ ಹೊಡೆದಾಟ; ಗಣೇಶ ಮೂರ್ತಿ ವಿಸರ್ಜನೆ ವೇಳೆ ಯುವಕನ ಕೊಲೆ: ನಾಲ್ವರ ಬಂಧನ

ಹುಡುಗಿಗಾಗಿ ಹೊಡೆದಾಟ; ಗಣೇಶ ಮೂರ್ತಿ ವಿಸರ್ಜನೆ ವೇಳೆ ಯುವಕನ ಕೊಲೆ: ನಾಲ್ವರ ಬಂಧನ

ಅರ್ಜುನಗೌಡ ಪಾಟೀಲ್‌

ಬೆಳಗಾವಿ: ಮುಗುಳಿಹಾಳ ಗ್ರಾಮದಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ಯುವಕನನ್ನು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಬಾಲಕ ಸೇರಿ ನಾಲ್ವರು ಆರೋಪಿಗಳನ್ನು ಮುರಗೋಡ ಪೊಲೀಸರು ಬಂಧಿಸಿದ್ದಾರೆ.


ಕೊಲೆಗೀಡಾದ ಯುವಕ ಯರಗಟ್ಟಿ ತಾಲೂಕಿನ ‌ಮುಗುಳಿಹಾಳ ಗ್ರಾಮದ ಅರ್ಜುನಗೌಡ ಪಾಟೀಲ್‌(21 ) ಬಿಎಸ್ಸಿ ಪದವೀಧರರನಾಗಿದ್ದಾನೆ. ಉದಯ್ ಭನದ್ರೋಲಿ(21), ಸುಭಾಷ್ ಸೋಲನ್ನವರ್(21), ವಿಠ್ಠಲ ಮೀಸಿ(20) ಬಂಧಿತ ಆರೋಪಿಗಳಾಗಿದ್ದಾರೆ.ಗುಂಪಿನಲ್ಲಿದ್ದ 16 ವರ್ಷದ ಬಾಲಕನನ್ನು ಬಾಲಮಂದಿರಕ್ಕೆ ಕಳುಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ತಿಳಿಸಿದ್ದಾರೆ.


ಅರ್ಜುನಗೌಡ ಹಾಗೂ ಆರೋಪಿಗಳು ಪರಿಚಿತರಾಗಿದ್ದು, ಒಂದೇ ಗ್ರಾಮದವರಾಗಿದ್ದಾರೆ. ಅರ್ಜುನ್ ಗೌಡ ಮತ್ತು ಉದಯ್ ನಡುವೆ ಕ್ಷುಲ್ಲಕ ಕಾರಣಕ್ಕೆ ಹಲವು ಬಾರಿ ಗಲಾಟೆ ನಡೆದಿದ್ದು, ಆ ವೇಳೆ ಇಬ್ಬರಿಗೂ ಗ್ರಾಮಸ್ಥರು ಮತ್ತು ಕುಟುಂಬಸ್ಥರು ಬುದ್ಧಿ ಹೇಳಿ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ.


ಒಂದೇ ಹುಡುಗಿಯನ್ನು ಪ್ರೀತಿ‌ಸುತ್ತಿದ್ದ ಇಬ್ಬರೂ ಕಾಲೇಜಿನಿಂದ ಮರಳುವಾಗ ಆಕೆಗೆ ಬಸ್ ನಲ್ಲಿ ಸೀಟ್ ಹಿಡಿಯಲು ಪರಸ್ಪರ ದುಂಬಾಲು ಬೀಳುತ್ತಿದ್ದು, ಈ ವಿಷಯವಾಗಿಯೇ ಗಲಾಟೆ ನಡೆದಿದೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಅರ್ಜುನ್ ಗೌಡನನ್ನು ಮುಗಿಸಲು ಉದಯ್ ಮತ್ತು ಆತನ ಸ್ನೇಹಿತರು ಯೋಜನೆ ರೂಪಿಸಿದ್ದರು. ಅದರಂತೆ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಉದಯ್ ಅರ್ಜುನಗೌಡ್‌ನ ಮೇಲೆ ದಾಳಿ ಮಾಡಿ, ಎದೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಇತ್ತ ರಕ್ತದ ಮಡುವಿನಲ್ಲಿ ಬಿದ್ದಿದ್ದ ಅರ್ಜುನ್ ಗೌಡ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಈ ಬಗ್ಗೆ ಮುರಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದಾರೆ.

Join Whatsapp
Exit mobile version