Home ಟಾಪ್ ಸುದ್ದಿಗಳು ಚೆನ್ನೈಯಲ್ಲೊಂದು ಹೃದಯ ವಿದ್ರಾವಕ ಘಟನೆ: ಮಕ್ಕಳಿಬ್ಬರನ್ನು ನೇಣು ಹಾಕಿ ಕೊಂದ ತಂದೆ

ಚೆನ್ನೈಯಲ್ಲೊಂದು ಹೃದಯ ವಿದ್ರಾವಕ ಘಟನೆ: ಮಕ್ಕಳಿಬ್ಬರನ್ನು ನೇಣು ಹಾಕಿ ಕೊಂದ ತಂದೆ

ಚೆನ್ನೈ: ವ್ಯಕ್ತಿಯೋರ್ವ ಪತ್ನಿಯ ಮೇಲಿನ ಕೋಪಕ್ಕೆ ತನ್ನ ಮಕ್ಕಳಿಬ್ಬರನ್ನು ನೇಣು ಹಾಕಿ, ವೀಡಿಯೋ ಮಾಡಿ ಕುಟುಂಬಕ್ಕೆ ಕಳುಹಿಸಿ ತಾನೂ ಆತ್ಮಹತ್ಯೆ ಮಾಡಿದ ಹೃದಯವಿದ್ರಾವಕ ಘಟನೆ ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ನಡೆದಿದೆ. 33 ವರ್ಷದ ಮುರುಗನ್ ಮಕ್ಕಳನ್ನ ಕೊಂದು ಆತ್ಮಹತ್ಯೆ ಮಾಡಿಕೊಂಡವನಾಗಿದ್ದಾನೆ. ಪತ್ನಿ ಮುರುಗೇಶ್ವರಿ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಆತ ಅನುಮಾನಿಸುತ್ತಿದ್ದನು.ಅವರಿಗೆ 9 ವರ್ಷದ ಮಗ ಮತ್ತು 5 ವರ್ಷದ ಮಗಳಿದ್ದರು. ಮಕ್ಕಳನ್ನು ಮರಕ್ಕೆ ನೇಣು ಹಾಕಿದ್ದಾನೆ. ನಂತರ ವೀಡಿಯೋ ಮಾಡಿ ಕುಟುಂಬಸ್ಥರಿಗೆ ಕಳುಹಿಸಿದ್ದಾನೆ.

ಮುರುಗನ್ ಕಳೆದ 13 ವರ್ಷಗಳಿಂದ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡಿಕೊಂಡಿದ್ದನು. ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಅವಘಡ ನಡೆದಿದ್ದರಿಂದ ಕಳೆದ 10 ದಿನಗಳಿಂದ ಮನೆಯಲ್ಲಿಯೇ ಉಳಿದುಕೊಂಡಿದ್ದನು. ಈ ವೇಳೆ ಪತ್ನಿ ಅಪರಿಚಿತರ ಜೊತೆ ಹೆಚ್ಚು ಮಾತನಾಡುತ್ತಿರೋದು ಮುರುಗನ್ ಗಮನಕ್ಕೆ ಬಂದಿದೆ. ಇದರಿಂದ ಕೋಪಗೊಂಡ ಮುರುಗನ್ ಪತ್ನಿಗೆ ಎಚ್ಚರಿಕೆ ನೀಡಿದ್ದನು.

ಭಾನುವಾರ ಸಂಜೆ ಮುರುಗನ್ ಪತ್ನಿಯ ಮೊಬೈಲ್ ತೆಗೆದುಕೊಂಡು ಮಕ್ಕಳ ಜೊತೆ ಸಮೀಪದ ಅಂಗಡಿಗೆ ಎಂದು ಹೇಳಿ ಹೋಗಿದ್ದಾನೆ. ಕೆಲ ಸಮಯದ ಬಳಿಕ ನಿರ್ಜನ ಪ್ರದೇಶಕ್ಕೆ ತೆರಳಿ ಮಕ್ಕಳಿಬ್ಬರನ್ನು ಮರಕ್ಕೆ ನೇಣು ಹಾಕಿ ವೀಡಿಯೋ ಮಾಡಿ ಕಳಿಸಿದ್ದಾನೆ. ಅದರಲ್ಲಿ ವೀಡಿಯೋದಲ್ಲಿ “ನಿನಗೆ ಇದೇ ಬೇಕಿತ್ತು ಅಲ್ವಾ? ನೀನು ನನ್ನನ್ನು ಕೊಲ್ಲಲು ಪ್ಲಾನ್ ಮಾಡಿದ್ದೀರಿ ಅಂತ ನನಗೆ ಗೊತ್ತು. ಈಗ ಮಕ್ಕಳೊಂದಿಗೆ ನಾನೇ ಸಾಯುತ್ತಿದ್ದೇನೆ ನೋಡು” ಎಂದು ಹೇಳಿದ್ದಾನೆ.

ಇನ್ನೂ ಮುರುಗನ್ ವೀಡಿಯೋ ನೋಡುತ್ತಿದ್ದಂತೆ ಆತಂಕಗೊಂಡ ಪತ್ನಿ ಮರುಗೇಶ್ವರಿ ಮತ್ತು ಕುಟುಂಬಸ್ಥರು ಗ್ರಾಮದ ತುಂಬ ಹುಡುಕಾಡಿದ್ದಾರೆ. ಕೊನೆಗೆ ಎಲ್ಲಿಯೂ ಪತ್ತೆಯಾಗದಿದ್ದಾಗ ಸಂಗಾಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸ್ ಹುಡುಕಾಟದ ಬಳಿಕ ಮೂರು ಶವಗಳು ಸಮೀಪದ ಮಾವಿನ ತೋಟದಲ್ಲಿ ಪತ್ತೆಯಾಗಿವೆ.

ಮರಣೋತ್ತರ ಶವ ಪರೀಕ್ಷೆಯ ನಂತರ ಮೃತದೇಹಗಳನ್ನು ಕುಟುಂಬಸ್ಥರಿಗೆ ರವಾನಿಸಲಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಪತಿಯ ಜೊತೆ ಮಕ್ಕಳನ್ನು ಕಳೆದುಕೊಂಡ ಮುರುಗೇಶ್ವರಿ ದಿಗ್ಬ್ರಮೆಯಲ್ಲಿದ್ದಾರೆ. ಗ್ರಾಮಸ್ಥರು ಮುರುಗೇಶ್ ಸಾವಿನ ಬಗ್ಗೆ ನಾನಾ ರೀತಿಯಲ್ಲಿ ಮಾತನಾಡಿಕೊಳ್ಳುತ್ತಿದ್ದು, ಮೂರು ಸಾವುಗಳಿಂದಾಗಿ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿಕೊಂಡಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪತ್ನಿ ಮರುಗೇಶ್ವರಿ ಮತ್ತು ಕುಟುಂಬಸ್ಥರ ಹೇಳಿಕೆ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Join Whatsapp
Exit mobile version