ಕೃಷಿ ಭೂಮಿ ಸಮತಟ್ಟುಗೊಳಿಸುವಾಗ ದೇವರ ಮೂರ್ತಿಗೆ ಹಾನಿಯಾಗಿದ್ದಕ್ಕೆ ರೈತನಿಗೆ ಸಾಮಾಜಿಕ ಬಹಿಷ್ಕಾರ ಹಾಕಿದ ಗ್ರಾಮಸ್ಥರು!

Prasthutha|

ಮುಂಬೈ : ತನ್ನ ಕೃಷಿ ಭೂಮಿಯಲ್ಲಿ ನೆಲ ಸಮತಟ್ಟು ಮಾಡುವಾಗ ದೇವರ ಮೂರ್ತಿಗೆ ಹಾನಿ ಮಾಡಿರುವುದಾಗಿ ಆರೋಪಿಸಿ ರೈತರೊಬ್ಬರಿಗೆ ಸಾಮಾಜಿಕ ಬಹಿಷ್ಕಾರ ಮತ್ತು 21,000 ರೂ. ದಂಡ ವಿಧಿಸಿದ ಘಟನೆ ನಡೆದಿದೆ. ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ಆಮ್‌ ಗಾಂವ್‌ ನಲ್ಲಿ ರೈತನಿಗೆ ಈ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ.

- Advertisement -

ಆಮ್‌ ಗಾಂವ್‌ ತಾಲೂಕಿನ ಸೀತೆಪಾರ್‌ ಗ್ರಾಮದ ನಿವಾಸಿ ಟೀಕಾರಾಮ್‌ ಪ್ರೀತಂ ಪರ್ಧಿ ಎಂಬ ರೈತನಿಗೆ ಈ ರೀತಿಯ ಬಹಿಷ್ಕಾರ ಹಾಕಲಾಗಿದೆ. ಕೃಷಿ ಭೂಮಿ ಸಮತಟ್ಟು ಮಾಡುವಾಗ ಆಕಸ್ಮಿಕವಾಗಿ ಕಲ್ಲಿನ ಮೂರ್ತಿಗೆ ಹಾನಿಯಾಗಿತ್ತು ಎಂದು ಠಾಣಾಧಿಕಾರಿ ವಿಲಾಸ್‌ ನಾಲೆ ಹೇಳಿದ್ದಾರೆ.

ಈ ಸಂಬಂಧ ಪ್ರೀತಂ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಗ್ರಾಮಸ್ಥರು ಈ ಮೂರ್ತಿಯನ್ನು ತಮ್ಮ ಕುಲದೇವತೆ ಎಂದು ನಂಬುತ್ತಿದ್ದರು. ಮೂರ್ತಿಗೆ ಹಾನಿಯಾದ ಸುದ್ದಿ ತಿಳಿದು ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ಕೆಲಸ ನಿಲ್ಲಿಸುವಂತೆ ಬಲವಂತ ಮಾಡಿದ್ದಾರೆ.

- Advertisement -

ಬಳಿಕ ಗ್ರಾಮಸ್ಥರು ಪಂಚಾಯತ್‌ ನಡೆಸಿ, ರೈತ ಪ್ರೀತಂಗೆ 21,000 ದಂಡ ವಿಧಿಸಿದರು. ದಂಡ ಪಾವತಿಸಲು ವಿಫಲವಾದರೆ ಸಾಮಾಜಿಕ ಬಹಿಷ್ಕಾರ ಹಾಕುವಂತೆ ಕರೆ ನೀಡಿದರು. ಆದರೆ, ಅಷ್ಟೊಂದು ಮೊತ್ತದ ಹಣ ಪಾವತಿಸಲಾಗದೆ ಆತ ಪೊಲೀಸರ ಮೊರೆ ಹೋಗಿದ್ದಾರೆ. ಗ್ರಾಮದ ಸರಪಂಚ್‌ ಗೋಪಾಲ್‌ ಫೂಲಿಚಂದ್‌ ಮೆಶ್ರಂ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ.

Join Whatsapp