ಕೋವಿಡ್‌ನಿಂದ ಮೃತ ವ್ಯಕ್ತಿಯ ಕುಟುಂಬಗಳಿಗೆ ಜ.15 ರೊಳಗೆ ಪರಿಹಾರ ತಲುಪಿಸಲು ಅಬಕಾರಿ ಸಚಿವ ಗೋಪಾಲಯ್ಯ ಸೂಚನೆ

Prasthutha|

ಬೆಂಗಳೂರು: ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಗಳಿಗೆ ಜನವರಿ 15 ರೊಳಗೆ ಸರ್ಕಾರದ ಪರಿಹಾರ ಧನ ಸಂದಾಯವಾಗುವಂತೆ ಕ್ರಮ ಕೈಗೊಳ್ಳಲು ಅಬಕಾರಿ ಸಚಿವ ಕೆ.ಗೋಪಾಲಯ್ಯ ಅಧಿಕಾರಿಗಳಿಗೆ ಸೂಚಿಸಿದರು. ಮಹಾಲಕ್ಷ್ಮಿಲೇಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಗಪುರ ವಾರ್ಡ್ನಲ್ಲಿರುವ ಶಾಸಕರ ಭವನದಲ್ಲಿಂದು ಹಮ್ಮಿಕೊಂಡಿದ್ದ ಕೋವಿಡ್‌ – 19 ನಿಂದ ಮೃತಪಟ್ಟ105 ವ್ಯಕ್ತಿಗಳ ಕುಟುಂಬದವರಿಗೆ ಪರಿಹಾರ ವಿತರಿಸಿ ಅವರು ಮಾತನಾಡಿದರು.

- Advertisement -

ಮನೆಯ ಸದಸ್ಯರನ್ನು ಕಳೆದುಕೊಂಡ ಕುಟುಂಬದವರು ಸಾಕಷ್ಟು ನೋವಿನಲ್ಲಿ ಇದ್ದಾರೆ. ಇಂಥಹ ಕುಟುಂಬಗಳಿಗೆ ಆತ್ಮಸ್ಥೈರ್ಯ ತುಂಬುವುದು ಮತ್ತು ಪರಿಹಾರ ನೀಡುವುದು ನಮ್ಮ ಕರ್ತವ್ಯವಾಗಿದ್ದು, ಇದನ್ನು ಅಧಿಕಾರಿ ವರ್ಗ ತ್ವರಿತವಾಗಿ ಮಾಡಬೇಕು ಈ ಹಿನ್ನೆಲೆಯಲ್ಲಿ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಕೋವಿಡ್‌ನಿಂದ ಮೃತರಾದ ವ್ಯಕ್ತಿಯ ಕುಟುಂಬಗಳ ಆರೋಗ್ಯದ ಬಗ್ಗೆ ಆಶಾ ಕಾರ್ಯಕರ್ತೆಯರ ಮೂಲಕ ಪತ್ತೆ ಹಚ್ಚಿ ಜನವರಿ 15 ರೊಳಗೆ ಎಲ್ಲ ಕುಟುಂಬಗಳಿಗೆ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

ಕೊರೋನ ಸಂದರ್ಭದಲ್ಲಿ ಅನೇಕರು ನೋವಿನಿಂದ ಕರೆ ಮಾಡಿ ಬೆಡ್ ಕೇಳುತ್ತಿದ್ದರು. ಈ ಸಮಯದಲ್ಲಿ ಕ್ಷೇತ್ರದ ಎಲ್ಲರಿಗೂ ಸ್ಪಂದಿಸಲಾಗಿದೆ. ಹೋಂ ಕ್ವಾರಂಟೈನ್‌ನಲ್ಲಿದ್ದ 7 ಸಾವಿರ ಜನರಿಗೆ ಮೆಡಿಕಲ್ ಕಿಟ್ ವಿತರಿಸಲಾಗಿದೆ. ಉಸ್ತುವಾರಿ ಜಿಲ್ಲೆಯಾದ ಹಾಸನಕ್ಕೆ 4 ಸಾವಿರ ಜನರಿಗೆ ಮೆಡಿಕಲ್ ಕಿಟ್ ಉಚಿತವಾಗಿ ಕಳುಹಿಸಿ ಕೊಡಲಾಗಿದೆ. ವೈದ್ಯರ ಸಲಹೆ ಮೇರೆಗೆ 350 ಆಕ್ಸಿಜನ್ ಸಿಲಿಂಡರ್ ಗಳನ್ನು ಮತ್ತು 100 ಕಾನ್ಸಟ್ರೇಟರ್‌ಗಳನ್ನು ಖರೀದಿಸಿ ಅಗತ್ಯ ಇರುವವರಿಗೆ ನೀಡಲಾಗಿದೆ ಎಂದರು.
.
ಡಾ.ನಾಗೇಂದ್ರ ಮತ್ತವರ ತಂಡದ ಸತತ ಪ್ರಯತ್ನದಿಂದ ಹೋಂ ಕ್ವಾರಂಟೈನ್‌ನಲ್ಲಿ ಇದ್ದ 600 ಜನರ ಪೈಕಿ 150 ಜನ ನಾವು ನೀಡಿದ ಔಷಧಿ ಮಾತ್ರೆ, ಆಕ್ಸಿಜನ್ ಸೇವಿಸಿ ಕೊರೊನಾದಿಂದ ಗುಣಮುಖರಾದರು. ಆದರೆ ಸದಸ್ಯರನ್ನು ಕಳೆದುಕೊಂಡವರು ಈ ನೋವನ್ನು ಮರೆಯಲು ಸಾಧ್ಯವಿಲ್ಲ ಎಂದು ಸಚಿವರು ಇದೆ ವೇಳೆ ಭಾವುಕರಾದರು.

- Advertisement -

ಕಿಡ್ನಿ ಸಮಸ್ಯೆಯಿಂದ ಬಳಲುವವರಿಗೆ ಉಚಿತ ಡಯಾಲಿಸಿದ ಕೇಂದ್ರ ಆರಂಭಿಸಲಾಗಿದ್ದು, ಇದಕ್ಕಾಗಿ ಪ್ರತಿ ತಿಂಗಳು 7.50 ಲಕ್ಷಕ್ಕೂ ಅಧಿಕ ವೆಚ್ಚವಾಗಲಿದೆ ಎಂದ ಸಚಿವರು, ಲಾಕ್‌ಡೌನ್ ಸಂದರ್ಭದಲ್ಲಿ ಕ್ಷೇತ್ರ ವ್ಯಾಪ್ತಿಯ ಎಲ್ಲರಿಗೂ ಫುಡ್ ಕಿಟ್ ನೀಡಲಾಗಿದ್ದು, ಸ್ಥಳೀಯ ಮುಖಂಡರಾದ ಜಯರಾಮಣ್ಣ ಅವರಿಗೆ ಈ ಜವಾಬ್ದಾರಿ ವಹಿಸಲಾಗಿತ್ತು ಎಂದರು.

135 ಕೋಟಿ ಹೆಚ್ಚು ಜನರಿರುವ ದೇಶ ನಮ್ಮದು, ಯಾರಾದರು ವ್ಯಾಕ್ಸಿನ್ ತೆಗೆದುಕೊಳ್ಳಿ. ಜನವರಿ 1 ರ ನಂತರ ವಾರ್ಡ್ನಲ್ಲಿ 60 ಕ್ಕೂ ಹೆಚ್ಚು ಕಡೆಗಳಲ್ಲಿ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು ವ್ಯಾಕ್ಸಿನ್ ಪಡೆಯದೇ ಇದ್ದವರು ಕಡ್ಡಾಯವಾಗಿ ಪಡೆಯಬೇಕೆಂದು ಮನವಿ ಮಾಡಿದರು. ಸ್ಪೆಷಲ್ ಕಮಿಷನರ್ ದೀಪಕ್, ಜಾಯಿಂಟ್ ಕಮಿಷನರ್ ಶಿವಮಣಿ , ಆರೋಗ್ಯಾಧಿಕಾರಿ ಡಾ, ಮಂಜುಳಾ ಇಂಜಿನಿಯರ್ ತಿಮ್ಮರುಸು ಸೇರಿದಂತೆ ಕ್ಷೇತ್ರದ 7 ನೇ ವಾರ್ಡಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

Join Whatsapp