ಕೊರೋನಾ ಎರಡನೇ ಅಲೆಯನ್ನೆದುರಿಸುವಲ್ಲಿನ ವೈಫಲ್ಯಕ್ಕೆ ರಾಜ್ಯ ಸರಕಾರವೇ ಕಾರಣ : ಶಾಸಕ ಯುಟಿ ಖಾದರ್ ಆಕ್ರೋಶ

Prasthutha|

ಮಂಗಳೂರು : ಕೊರೊನಾ ಎರಡನೇ ಅಲೆ ಆರಂಭವಾಗಿದೆ.‌ ಈಗ ಜನರು ಭಯ ಮತ್ತು ಗೊಂದಲದ ವಾತಾವರಣದಲ್ಲಿದ್ದಾರೆ. ಇದಕ್ಕೆ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಮಾಜಿ ಸಚಿವ ಯುಟಿ ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಗಳೂರಿನ ಪದವಿನಂಗಡಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸರ್ಕಾರ ದಿನಕ್ಕೊಂದು ಆದೇಶ ನೀಡಿ ಗೊಂದಲ ಸೃಷ್ಟಿ ಮಾಡುತ್ತಿದೆ. ಜನರನ್ನು ಮೊದಲು ವಿಶ್ವಾಸಕ್ಕೆ ತೆಗೆದುಕೊಂಡು ಆದೇಶ ನೀಡಬೇಕಿತ್ತು. ಆದರೆ ರಾಜ್ಯ ಸರ್ಕಾರ ಅದನ್ನು ಮಾಡಲಿಲ್ಲ. ಜನರು ಭಯಪಡಬಾರದು. ಜನರಿಗೆ ಧೈರ್ಯ, ಆತ್ಮವಿಶ್ವಾಸ ತುಂಬುವ ಕೆಲಸವನ್ನು ಸರ್ಕಾರ ಮಾಡಬೇಕಾಗಿದೆ. ಭಯಪಟ್ರೆ ಕೊರೊನಾ ದೂರ ಹೋಗಲ್ಲ. ಜನರು ಇವತ್ತು ಧೈರ್ಯದಿಂದ ಇದನ್ನು ಎದುರಿಸಬೇಕು ಎಂದರು.

- Advertisement -

 ಲಾಕ್ ಡೌನ್ ಕೊರೊನಾಗೆ ಮದ್ದಲ್ಲ. ಕಳೆದ ಒಂದೂವರೆ ವರ್ಷಗಳಲ್ಲಿ ಕೊರೊನಾ ಎದುರಿಸಲು ಸಕಲ ಸಿದ್ದತೆಗಳನ್ನು ಸರ್ಕಾರ ಮಾಡಬೇಕಿತ್ತು. ಈಗ ಆತುರಾತುರವಾಗಿ‌‌ ಲಾಕ್  ಡೌನ್ ಮಾಡಿ‌ ಜನರನ್ನು ಸಂಕಷ್ಟದಲ್ಲಿಟ್ಟಿದ್ದಾರೆ. ಜನರಿಗಾಗಿ ಸರ್ಕಾರ ಯಾವ ವ್ಯವಸ್ಥೆಯನ್ನು ಮಾಡಿದೆ? ಎಂದು ಪ್ರಶ್ನೆ ಮಾಡಿದರು. ಕೊರೊನಾ ಬಂದ ಮಂದಿ ಬೆಡ್ ಗಾಗಿ ಅಲೆದಾಡುತ್ತಿದ್ದಾರೆ. ಬೆಡ್ ಕೊರತೆ ಕಾಣುತ್ತಿದೆ. ಮತ್ತೆ ಜನರು ಜನರಲ್ ವಾರ್ಡ್ ನಲ್ಲಿ ಸಾಯುವ ಪರಿಸ್ಥಿತಿ ಬರಬಹುದು. ನಾವು ಜನರನ್ನು ಐಸಿಯುಗೆ ಹೋಗಲು ಬಿಡಬಾರದು.‌ ಸರ್ಕಾರ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಸಲಹೆ ನೀಡಿದರು.

ಬೆಡ್ ಗಾಗಿ‌ ಅಲೆದಾಡುವ ಪರಿಸ್ಥಿತಿ ಬಾರಬಾರದಿತ್ತು. ಆಕ್ಸಿಜನ್ ಸಮಸ್ಯೆ ಎದುರಾಗಿದೆ. ಕೊರೊನಾ ಬಂದಾಗ ಬೇಕಾಗುವುದು ಆಕ್ಸಿಜನ್, ಬೆಡ್. ಇದರಲ್ಲೇ ಈಗ ಕೊರತೆಯಾಗಿ ಜನರು ಸಾಯುತ್ತಿದ್ದಾರೆ. ಜನರು ಆಸ್ಪತ್ರೆಗೆ ಹೋದಾಗ ಸಕಲ ವ್ಯವಸ್ಥೆಯನ್ನು ಸರ್ಕಾರ ಮಾಡಬೇಕಿತ್ತು ಎಂದರು. ಸಮರ್ಪಕವಾಗಿ ವ್ಯಾಕ್ಸಿನೇಷನ್‌ ಆಗುತ್ತಿಲ್ಲ. ಆನ್‌ಲೈನ್‌ನಲ್ಲಿ ಅರ್ಜಿ ಹಾಕಿ ಅನ್ನುತ್ತಿದ್ದಾರೆ.‌ ಆಸ್ಪತ್ರೆಗೆ ಹೋದಾಗ ಇಲ್ಲ ಅಂತಾರೆ. ಇದಕ್ಕೆ ಯಾರು ಹೊಣೆ ಎಂದು ಪ್ರಶ್ನೆ ಮಾಡಿದರು. ಇನ್ನು ಅಂತ್ಯಕ್ರಿಯೆಗಾಗಿ ಜಾಗ ಸಿಗದಿರುವ ಪರಿಸ್ಥಿತಿ ಇದೆ. ಬಡಮಂದಿ ಕೊರೊನಾದಿಂದ ಸತ್ತರೆ ಅವರಿಗೆ ಅಂತ್ಯಕ್ರಿಯೆ ಮಾಡಲು ಸಕಲ ವ್ಯವಸ್ಥೆ ಮಾಡಬೇಕಾಗಿದೆ ಎಂದು ಆಗ್ರಹಿಸಿದರು.

Join Whatsapp