ನೀರು ಕುಡಿದ ಮುಸ್ಲಿಂ ಬಾಲಕನಿಗೆ ಥಳಿಸಿದ ದೇವಸ್ಥಾನದಲ್ಲಿ ಮುಸ್ಲಿಂ ಪತ್ರಕರ್ತರಿಗೂ ಬಹಿಷ್ಕಾರ !

Prasthutha|

‘ನಮಗೆ ದೇವಸ್ಥಾನದ ಒಳಗೆ ಪ್ರವೇಶ ನೀಡಲಿಲ್ಲ’ : ‘ಪ್ರಸ್ತುತ’ದೊಂದಿಗೆ ಪತ್ರಕರ್ತ ಅಸ್ರಾರ್ ಅಹ್ಮದ್

- Advertisement -

ಉತ್ತರಪ್ರದೇಶದ ದೇವಾಲಯದಲ್ಲಿ ನೀರು ಕುಡಿದ ಕಾರಣಕ್ಕಾಗಿ ಕ್ರೂರವಾಗಿ ಥಳಿಸಲ್ಪಟ್ಟ ಮುಸ್ಲಿಂ ಬಾಲಕನ ಬಗ್ಗೆ ವರದಿ ಮಾಡಲು ಬಂದ ಮುಸ್ಲಿಂ ಪತ್ರಕರ್ತರಿಗೆ ದೇವಾಲಯ ಪ್ರವೇಶ ನಿರ್ಬಂಧಿಸಿದ ಘಟನೆ ನಡೆದಿದೆ.

‘ಮಿಲ್ಲತ್ ಟೈಮ್ಸ್’ ನ ಇಬ್ಬರು ವರದಿಗಾರರನ್ನು ಮುಸ್ಲಿಂ ಎಂಬ ಕಾರಣಕ್ಕಾಗಿ ದೇವಾಲಯದ ಅಧಿಕಾರಿಗಳು ಪ್ರವೇಶ ನಿಷೇಧಿಸಿದ್ದಾರೆ. ದಾಸ್ನಾ ದೇವಾಲಯದ ಪ್ರಧಾನ ಅರ್ಚಕ ಯತಿ ನರಸಿಂಹಾನಂದ ಸರಸ್ವತಿಯವರು ಇಬ್ಬರು ಪತ್ರಕರ್ತರನ್ನು ಮುಸ್ಲಿಮರು ಎಂಬ ಕಾರಣ ನೀಡಿ ಪ್ರವೇಶ ನಿಷೇಧಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.

- Advertisement -

“ಈ ದೇವಾಲಯವು ಹಿಂದೂಗಳ ಪವಿತ್ರ ಸ್ಥಳವಾಗಿದೆ. ಆದ್ದರಿಂದ ಮುಸ್ಲಿಮರಿಗೆ ಪ್ರವೇಶಿಸಲು ಅವಕಾಶವಿಲ್ಲ” ಎಂದು ದೇವಾಲಯದ ಹೊರಗೆ ಬೋರ್ಡ್ ನೇತು ಹಾಕಲಾಗಿದೆ. ಮುಸ್ಲಿಂ ಪತ್ರಕರ್ತರಿಗೂ ಈ ನಿಷೇಧ ಅನ್ವಯಿಸುತ್ತದೆ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಮತಾಂಧನೊಬ್ಬ ಮಾರ್ಚ್ 11 ರಂದು ಘಾಝಿಯಾಬಾದ್‌ನ ಶಿವಶಕ್ತಿ ಧಾಮ್ ದಾಸ್ನಾ ದೇವಾಲಯದಲ್ಲಿ ನೀರು ಕುಡಿದು ದೇವಾಲಯದಿಂದ ಹೊರಬರುತ್ತಿದ್ದ 14 ವರ್ಷದ ಹುಡುಗನ ಜನನಾಂಗಕ್ಕೆ ಒದ್ದು ಕ್ರೂರವಾಗಿ ಥಳಿಸಿದ್ದನು.

‘ನಮಗೆ ದೇವಸ್ಥಾನದ ಒಳಗೆ ಪ್ರವೇಶ ನೀಡಲಿಲ್ಲ’ : ಪತ್ರಕರ್ತ ಅಸ್ರಾರ್ ಅಹ್ಮದ್

ಈ ಕುರಿತು ಮಾಹಿತಿ ಸಂಗ್ರಹಿಸಲು ‘ಪ್ರಸ್ತುತ’ ದೇವಾಲಯ ಆಡಳಿತ ಮಂಡಳಿಯಿಂಡ ಪ್ರವೇಶ ನಿರಾಕರಿಸಲ್ಪಟ್ಟ ‘ಮಿಲ್ಲತ್ ಟೈಮ್ಸ್’ ನ ಪತ್ರಕರ್ತರಾದ ಉತ್ತರ ಪ್ರದೇಶದ ಅಸ್ರಾರ್ ಅಹ್ಮದ್ ಮತ್ತು ಅಕ್ರಂ ಷಫೀರ್ ಅವರನ್ನು ಸಂಪರ್ಕಿಸಿದಾಗ, ಅವರು ಘಟನೆ ನಡೆದಿರುವುದನ್ನು ಒಪ್ಪಿಕೊಂಡಿದ್ದಾರೆ. “ಈ ಹಿಂದೆ ದೇವಾಲಯ ಪ್ರವೇಶಿಸಿ ನೀರು ಕುಡಿಯಲು ಹೋಗಿದ್ದ ವೇಳೆ ಮತಾಂಧರಿಂದ ಮಾರಣಾಂತಿಕವಾಗಿ ಹಲ್ಲೆಗೊಳಗಾದ ಆಸಿಫ್ ಘಟನೆಯ ವಾಸ್ತವಗಳನ್ನು ವರದಿ ಮಾಡಲು ಮತ್ತು ಆ ಕ್ಕುರಿತು ಅವರ ಹೇಳಿಕೆ ದಾಖಲಿಸಿಕೊಳ್ಳಲು ನಾವು ದೇವಾಲಯ ಮಂಡಳಿಯೊಂದಿಗೆ ಕೇಳಿಕೊಂಡೆವು. ಆದರೆ ಅವರು ನಮಗೆ ಒಳಗೆ ಪ್ರವೇಶ ನಿರಾಕರಿಸಿದರು” ಎಂದು ಪತ್ರಕರ್ತರಲ್ಲೋರ್ವರಾದ ಅಸ್ರಾರ್ ಅಹ್ಮದ್ ‘ಪ್ರಸ್ತುತ’ಕ್ಕೆ ತಿಳಿಸಿದ್ದಾರೆ.

Join Whatsapp