ಬೆಂಗಳೂರು: ‘ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಯ ಜನಿವಾರ ತೆಗೆಸಿದ ಪ್ರಕರಣದಲ್ಲಿ ತಪ್ಪಿತಸ್ಥರನ್ನು ಶಿಕ್ಷಿಸುವ ಮೂಲಕ ಮತ್ತೆ ಈ ರೀತಿ ಘಟನೆ ಮರುಕಳಿಸದಂತೆ ಸ್ಪಷ್ಟ ಸಂದೇಶ ರವಾನಿಸಬೇಕು’ ಎಂದು ಕೆಪಿಸಿಸಿ ವಕ್ತಾರ ಶಂಕರ ಗುಹಾ ದ್ವಾರಕನಾಥ್ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಬಗ್ಗೆ ಅವರು ಬೀದರ್ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಪತ್ರ ಬರೆದಿದ್ದಾರೆ.
‘ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಬ್ರಾಹ್ಮಣ ವಿದ್ಯಾರ್ಥಿಗೆ ಜನಿವಾರ ತೆಗೆಸುವ ಮೂಲಕ ಇಡೀ ಬ್ರಾಹ್ಮಣ ಸಮುದಾಯಕ್ಕೆ ಅವಮಾನ ಮಾಡಿದ ಘಟನೆ ನಡೆದಿದೆ. ಬ್ರಾಹ್ಮಣರು ಬಹುಜನಪ್ರಿಯರು ಹಾಗೂ ಅಹಿಂಸಾ ವಾದಿಗಳು. ಆದರೆ, ನಮ್ಮ ಮೇಲೆ ಇಂತಹ ಅವಮಾನಗಳನ್ನು ಮಾಡುತ್ತಲೇ ಇದ್ದಾರೆ. ಆದರೂ ಸಹಿಸಿಕೊಂಡು ಬಂದಿದ್ದೇವೆ. ನಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡಬಾರದು. ಬ್ರಾಹ್ಮಣರಿಗೆ ಯಜ್ಞೋಪವೀತ ಪರಮ ಪವಿತ್ರವಾದಂತಹ ಒಂದು ವಸ್ತು. ಇದನ್ನು ವಿನಾ ಕಾರಣ ತೆಗೆಸಿ, ಅವಮಾನ ಮಾಡಿರುವುದು ಖಂಡನೀಯ’ ಎಂದಿದ್ದಾರೆ.
‘ಒಂದು ವೇಳೆ ತಪ್ಪಿತಸ್ಥರಿಗೆ ಶಿಕ್ಷೆ ಆಗದಿದ್ದರೆ, ಮತ್ತೆ ಈ ರೀತಿ ಘಟನೆ ಮರುಕಳಿಸಿದರೆ ಇಡೀ ಬ್ರಾಹ್ಮಣ ಸಮುದಾಯ ಬೀದಿಗೆ ಇಳಿದು ಹೋರಾಟ ನಡೆಸಲಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಕೂಡಲೇ ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.
‘ಹಿಜಾಬ್ ವಿಷಯದಲ್ಲಿ ನಮ್ಮ ಪಕ್ಷ ಸಾಕಷ್ಟು ಮುಂಚೂಣಿಯಲ್ಲಿತ್ತು. ಆದರೆ, ಬ್ರಾಹ್ಮಣರಿಗೆ ಅಪಮಾನವಾದಾಗ ಎಲ್ಲರೂ ಸುಮ್ಮನಿರುವುದು ನನಗೆ ಆಶ್ಚರ್ಯವನ್ನುಂಟು ಮಾಡಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬ್ರಾಹ್ಮಣರಿಗೆ ಯಜ್ಞೋಪವೀತ (ಜನಿವಾರ) ಪರಮ ಪವಿತ್ರವಾದಂತಹ ಒಂದು ವಸ್ತು. ಒಬ್ಬ ಹುಡುಗನಿಗೆ ಗಾಯತ್ರಿ ಮಂತ್ರ ಉಪದೇಶ ಮಾಡಿ ಸಂಸ್ಕಾರ ಕೊಟ್ಟು ಅವನಿಂದ ಸಮಾಜಕ್ಕೆ ಒಳ್ಳೆಯದಾಗಲೆಂದು ಮಾಡುವಂತಹ ಒಂದು ಕ್ರಿಯೆ ಇದು. ಇಂತಹ ಪವಿತ್ರ ವಸ್ತುವನ್ನು ವಿನಾ ಕಾರಣ ತೆಗೆಸಿ ಬೇಕಂತಲೇ ಬ್ರಾಹ್ಮಣರಿಗೆ ಹಾಗೂ ಬ್ರಾಹ್ಮಣ ಸಮುದಾಯಕ್ಕೆ ಅವಮಾನ ಮಾಡಬೇಕೆಂದು ಮಾಡಿರುವಂತಹ ಕೃತ್ಯಕ್ಕೆ ನಮ್ಮ ಧಿಕ್ಕಾರ ಎಂದಿದ್ದಾರೆ.