ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಮೇಲೆ ಜನರ ಸಂಪೂರ್ಣ ವಿಶ್ವಾಸ ನಂಬಿಕೆ ಇದೆ ಎನ್ನುವುದಕ್ಕೆ ಸಾಕ್ಷಿ ಪರಿಷತ್ತಿನಲ್ಲಿ ಬರೋಬ್ಬರಿ 2061 ದತ್ತಿ ಪ್ರಶಸ್ತಿಗಳನ್ನು ಇಟ್ಟಿರುತ್ತಾರೆ. ರಾಜ್ಯದ ಬೇರೆ ಯಾವ ಸಂಸ್ಥೆಗಳಲ್ಲಿಯೂ ಇಷ್ಟೊಂದು ದತ್ತಿಗಳನ್ನು ಇಟ್ಟಿರುವುದಿಲ್ಲ. ಇದು ಮುಖ್ಯವಾಗಿ ಪರಿಷತ್ತಿನ ವಿಶ್ವಾಸಾರ್ಹತೆ ಎತ್ತಿತೋರಿಸುತ್ತದೆ. ಗಮನಿಸ ಬೇಕಾದ ಸಂಗತಿ ಎಂದರೆ ಇಲ್ಲಿ ಪ್ರಶಸ್ತಿಗಳನ್ನು ಪಡೆಯುವುದಕ್ಕೆ ಯಾರೂ ಅರ್ಜಿ ಹಾಕುವುದಿಲ್ಲ, ಯಾರ ಮರ್ಜಿಯನ್ನೂ ಕಾಯುವುದಿಲ್ಲ, ಸಾಧಕರನ್ನು ಗುರುತಿಸುತ್ತದೆಯೇ ಹೊರತು ಸಮಯ ಸಾಧಕರನ್ನಲ್ಲ ಎಂದು ನಾಡೋಜ ಡಾ. ಮಹೇಶ ಜೋಶಿ ಹೇಳಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಹಮ್ಮಿಕೊಂಡ ʻಚಾವುಂಡರಾಯ ದತ್ತಿʼ, ʻನಾಗಡಿಕೆರೆ ಕಿಟ್ಟಪ್ಪಗೌಡ ರುಕ್ಮಿಣಿ ತಿರ್ಥಹಳ್ಳಿ ದತ್ತಿʼ ಹಾಗೂ ʻಕನ್ನಡ ಕಾಯಕ ದತ್ತಿʼ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಕನ್ನಡದ ಕಣ್ವ ಎಂದು ಕರೆಸಿಕೊಂಡ ಬಿ.ಎಂ.ಶ್ರೀ ಅವರು 1935 ರಲ್ಲಿ ಗಮಕ ಕಲೆಯ ಪ್ರೊತ್ಸಾಹಕ್ಕಾಗಿ ಒಂದು ಸಾವಿರ ರೂ.ಯೊಂದಿಗೆ ಮೊದಲನೆಯ ದತ್ತಿಗೆ ಭದ್ರವಾದ ಅಡಿಪಾಯ ಹಾಕಿದರು. ಬಿ.ಎಮ್.ಟಿ.ಸಿ ಸಂಸ್ಥೆಯವರು ನೃಪತುಂಗ ಸಾಹಿತ್ಯ ಪ್ರಶಸ್ತಿ ಹಾಗೂ ಮಯೂರ ವರ್ಮ ಪ್ರಶಸ್ತಿಗಾಗಿ ಅತಿ ಹೆಚ್ಚು 1 ಕೋಟಿ 50 ಲಕ್ಷ ರೂ ದತ್ತಿ ಹಣವನ್ನು ಇಟ್ಟಿರುತ್ತಾರೆ. ವರನಟ ಡಾ. ರಾಜಕುಮಾರ್ ಅವರು ತಮಗೆ ಬಂದ ಫಾಲ್ಕೆ ಪ್ರಶಸ್ತಿಯ ಮೂಲಕ ಬಂದ ಹಣವನ್ನು ನೇರವಾಗಿ ಪರಿಷತ್ತಿಗೆ ಬಂದು ದತ್ತಿ ಇಟ್ಟಿರುವುದನ್ನು ನಾಡೋಜ.ಡಾ.ಮಹೇಶ ಜೋಶಿ ನೆನೆಸಿಕೊಂಡರು.
ಕಾರ್ಯಕ್ರಮದ ಉದ್ಘಾಟನೆ ನಡೆಸಿ ಮಾತನಾಡಿದ ಹಿರಿಯ ವಿದ್ವಾಂಸರಾದ ನಾಡೋಜ ಡಾ. ಹಂಪ ನಾಗರಾಜಯ್ಯ ಕನ್ನಡ ಸಾಹಿತ್ಯ ಪರಿಷತ್ತನ್ನು ಅತ್ಯಂತ ಹತ್ತಿರದಿಂದ ನೋಡುತ್ತಾ ಬಂದಿರುವ ನನಗೆ ಪರಿಷತ್ತಿನಲ್ಲಿ ಆಗುತ್ತಿರುವ ಇತ್ತೀಚಿನ ಬದಲಾವಣೆಯ ಬಗ್ಗೆ ಅತೀವ ಸಂತೋಷವಾಗುತ್ತಿದೆ. ದತ್ತಿ ಮತ್ತು ಸಾಹಿತ್ಯ ಪರಿಷತ್ತಿನ ನಡುವೆ ಸುದೀರ್ಘ ಇತಿಹಾಸವಿದೆ. ಸಾಹಿತ್ಯ ಪರಿಷತ್ತಿನ ಅಧ್ಯಕ್ಷರನ್ನು ಇಡೀ ನಾಡಿನ ಸಾಹಿತ್ಯ ಸಂಸ್ಕೃತಿಯ ವರಿಷ್ಟರು ಎಂದು ತಿಳಿದುಕೊಳ್ಳಬೇಕಾಗುತ್ತದೆ. ಇವತ್ತಿನ ದತ್ತಿ ಚಾವುಂಡರಾಯನ ಹೆಸರಿನಲ್ಲಿ ಇರುವುದು ಮಹತ್ವದ್ದು ಜೊತೆಗೆ ಈ ಕಾರ್ಯಕ್ರಮವೂ ಅರ್ಥಪೂರ್ಣ ಹಾಗೂ ಮೌಲ್ಯಿಕವಾಗಿರುವುದು ಎಂದರು.
ಪ್ರಶಸ್ತಿ ಪ್ರದಾನ ಮಾಡಿದ ಸರ್ವೋಚ್ಚನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಹಾಗೂ ವಿಶ್ರಾಂತ ಲೋಕಾಯುಕ್ತರು ಆಗಿರುವ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಮಾತನಾಡಿ, ಒಳ್ಳೆಯ ಕೆಲಸ ಮಾಡಿದವರಿಗೆ ಸನ್ಮಾನಿಸಿದಾಗ ಹುಮ್ಮಸ್ಸು ಬರುತ್ತದೆ ಹಾಗೆಯೇ ಮುಂದೆ ಸಾಧನೆ ಮಾಡಿದರೆ ಸಮಾಜ ನಮ್ಮನ್ನು ಗುರುತಿಸುವುದು ಎನ್ನುವ ವಿಶ್ವಾಸ ಉಂಟಾಗುತ್ತದೆ ಎಂದು ಹೆಳಿದರು.
ಕನ್ನಡ ಕಾಯಕ ದತ್ತಿ ಪುರಸ್ಕೃತರಾದ ಮಹಾರಾಷ್ಟ್ರ ರಾಜ್ಯದ ಗಡಿ ಭಾಗವಾದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟೆ ತಾಲೂಕಿನ ಪೀಠಾಧ್ಯಕ್ಷ ಬಸವಲಿಂಗ ಮಹಾಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.
ಚಾವುಂಡರಾಯ ದತ್ತಿ ಪ್ರಶಸ್ತಿಯನ್ನು ಹಿರಿಯ ವಿಧ್ವಾಂಸರಾದ ಶಾಂತಿನಾಥ ದಿಬ್ಬದ ಅವರಿಗೆ, ʻನಾಗಡಿಕೆರೆ ಕಿಟ್ಟಪ್ಪಗೌಡ ರುಕ್ಮಿಣಿ ತಿರ್ಥಹಳ್ಳಿ ದತ್ತಿʼ ಪ್ರಶಸ್ತಿಯನ್ನು ವಿಜಯವಾಣಿ ದಿನಪತ್ರಿಕೆಯ ಸಂಪಾದಕ ಕೆ.ಎನ್.ಚನ್ನೇಗೌಡ ಅವರಿಗೆ, ʻಕನ್ನಡ ಕಾಯಕ ದತ್ತಿʼ ಪ್ರಶಸ್ತಿಯನ್ನು ಕೋಲಾರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಶಂಕರಪ್ಪ ಅವರಿಗೆ ಮತ್ತು ಕೊಪ್ಪಳದ ರಂಗನಿರ್ದೇಶಕ ಹಾಗೂ ರಂಗಭೂಮಿ ಕಲಾವಿದ ಕೆ. ಇಮಾಮಸಾಬ ಅವರಿಗೆ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
![](https://prasthutha.com/wp-content/uploads/2022/10/mahesh-1024x683.jpg)